ಸ್ಥಳೀಯ ಸಮಸ್ಯೆ ಕುರಿತು ಯುಟ್ಯೂಬ್ ನಲ್ಲಿ ವರದಿ ಬಿತ್ತರಿಸಿದ ಕೊಪ್ಪಳದ ವ್ಯಕ್ತಿಗೆ ತಾ.ಪಂ ಸದಸ್ಯನಿಂದ ಹಲ್ಲೆ

Public TV
1 Min Read

ಕೊಪ್ಪಳ: ಸ್ಥಳೀಯ ಸಮಸ್ಯೆ ಕುರಿತು ಯುಟ್ಯೂಬ್ ಮತ್ತು ಸಾಮಾಜಿಕ ಜಾಲತಾಣದಲ್ಲಿ ವರದಿ ಬಿತ್ತರಿಸಿದ ವ್ಯಕ್ತಿ ಮೇಲೆ ತಾಲೂಕು ಪಂಚಾಯತ್ ಸದಸ್ಯ ಹಲ್ಲೆ ಮಾಡಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.

ಕೊಪ್ಪಳ ತಾಲೂಕಿನ ಬೂದಗೂಂಪ ಗ್ರಾಮದ ಗೋವಿಂದರಾಜ್ ಎಂಬವರು ತನ್ನ ಯುಟ್ಯೂಬ್ ಚಾನಲ್‍ನಲ್ಲಿ ಬೂದೂಗುಂಪ ಗ್ರಾಮದ 4 ನೇ ವಾರ್ಡ್ ನ ಸಿ.ಸಿ. ರಸ್ತೆ ನಿರ್ಮಾಣವಾಗಿಲ್ಲ ಎಂದು ವರದಿ ಮಾಡಿದ್ದರು. ಇದಕ್ಕೆ ಕೆಂಡಾಮಂಡಲವಾದ ಇಕ್ಬಾಲ್ ಅನ್ಸಾರಿ ಬೆಂಬಲಿಗ ತಾಲೂಕು ಪಂಚಾಯತಿ ಸದಸ್ಯ ಬಸವರಾಜ ಪೆದ್ಲ, ಗೋವಿಂದರಾಜ್ ಗೆ ಧಮ್ಕಿ ಹಾಕಿದ್ದಾನೆ.

ತಾಲೂಕು ಪಂಚಾಯಿತಿ ಸದಸ್ಯ ಬಸವರಾಜ ಗುಂಪು ಕಟ್ಟಿಕೊಂಡು ಬಂದು ಕುಡಿದ ಅಮಲಿನಲ್ಲಿ ಧಮ್ಕಿ ಹಾಕಿದ್ದಾರೆ. ಅಲ್ಲದೇ ಅಚಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಅಲ್ಲದೇ ಒಂದು ಗಂಟೆಯಲ್ಲಿ ನಿನ್ನ ಹುಟ್ಟಿಲ್ಲ ಅನ್ನಿಸಿಬಿಡ್ತೀನಿ. ನಮ್ಮ ಸಾಬನಿಗೆ ಟಾರ್ಗೆಟ್ ಮಾಡೋಕೆ ಯಾರು ನೀನು ಎಂದು ಧಮ್ಕಿ ಹಾಕಿದ್ದಾರೆ ಎಂದು ಗೋವಿಂದ ರಾಜ್ ಆರೋಪಿಸಿದ್ದಾರೆ.

ಕಳೆದ ಎರಡು ದಿನಗಳಿಂದ ನಾನು ಗ್ರಾಮಕ್ಕೆ ಹೋಗಿಲ್ಲ. ನನಗೆ ಗ್ರಾಮದಲ್ಲಿ ಜೀವ ಭಯ ಇದೆ ಎಂದು ಅಳಲು ತೋಡಿಕೊಂಡಿರುವ ಅವರು, ತಾಪಂ ಸದಸ್ಯ ಬಸವರಾಜ್ ವಿರುದ್ದ ದೂರು ಕೊಡಲು ಹೋದರೆ ಮುನಿರಾಬಾದ್ ಪೊಲೀಸರು ದೂರು ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ.

ಗ್ರಾಮದ ಸಮಸ್ಯೆಯನ್ನ ವರದಿ ಮಾಡಿದ್ದಕ್ಕೆ ಗೋವಿಂದರಾಜ್ ಜೀವಭಯದಲ್ಲಿ ಓಡಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಅನ್ಸಾರಿ ಬೆಂಬಲಿಗನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಗೋವಿಂದಾರಾಜ್ ಆಗ್ರಹಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *