ಬಿಜೆಪಿ ಶಾಸಕರ ಆಪ್ತನ ಮಗನ ವಿರುದ್ಧ ಕೇಸ್ ದಾಖಲಿಸಲು ಖಾಕಿ ಹಿಂದೇಟು

Public TV
1 Min Read

– ಪೊಲೀಸರ ಮೇಲೆ ಒತ್ತಡ ಹೇರಿದ್ರಾ ಶಾಸಕರು?
– ವಿದೇಶಿಗರ ಬ್ಯಾಗ್ ಎಗರಿಸುತ್ತಿದ್ದ 16ರ ಪೋರ

ಕೊಪ್ಪಳ: ವಿದೇಶಿಗರ ಬ್ಯಾಗ್ ಕದ್ದು ಓಡುತ್ತಿದ್ದ ಚೈಲ್ಡ್ ಗ್ಯಾಂಗ್ ಅನ್ನು ಹಿಡಿದ ಸ್ಥಳೀಯರು ವಿಡಿಯೋ ಮಾಡಿದ ಘಟನೆ ಗಂಗಾವತಿ ತಾಲೂಕಿನಲ್ಲಿ ನಡೆದಿದೆ. ಆದರೆ ಮೂವರ ಕಳ್ಳರ ಪೈಕಿ ಓರ್ವ ಬಿಜೆಪಿಯ ಪ್ರಮುಖ ಮುಖಂಡರೊಬ್ಬರ ಮಗನಾಗಿದ್ದಾನೆ.

ಗಂಗಾವತಿ ತಾಲೂಕಿನ ಸಣಾಪುರದಲ್ಲಿ ಘಟನೆ ನೆಡದಿದೆ. ಆದರೆ ಸೂಕ್ತ ಸಾಕ್ಷಿಗಳಿದ್ದರೂ ಪೊಲೀಸರು ಶಾಸಕ ಪರಣ್ಣ ಮುನವಳ್ಳಿ ಆಪ್ತ, ಸ್ಥಳೀಯ ಬಿಜೆಪಿ ಮುಖಂಡ ದೇವಪ್ಪ ಕಾಮದೊಡ್ಡಿ ಅವರ ಮಗನ ವಿರುದ್ಧ ಪ್ರಕರಣ ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ವಿಚಾರವಾಗಿ ಭಾರೀ ಟೀಕೆ ವ್ಯಕ್ತವಾಗಿದೆ.

ಸಣಾಪುರ ಇದು ವಿದೇಶಿಗರ ನೆಚ್ಚಿನ ತಾಣ. ಇಲ್ಲಿ ತುಂಗಭದ್ರಾ ಎಡದಂಡೆಯ ಕಾಲುವೆ ನೀರಿನಿಂದ ಬೃಹತ್ ಕೆರೆ ನಿರ್ಮಾಣವಾಗಿದೆ. ಹಾಗಾಗಿ ಕೆರೆಯಲ್ಲಿ ಈಜಲು ಸಾಕಷ್ಟು ಸಂಖ್ಯೆಯಲ್ಲಿ ವಿದೇಶಿ ಪ್ರವಾಸಿಗರು ಬರುತ್ತಾರೆ. ಹೀಗೆ ಬರುವ ವಿದೇಶಿಯರು ತಮ್ಮ ಬ್ಯಾಗ್‍ಗಳನ್ನು ಕೆರೆಯ ದಂಡೆ ಮೇಲೆ ಇಟ್ಟು ಈಜಲು ಹೊಗುತ್ತಾರೆ. ಈ ವೇಳೆ ಚೈಲ್ಡ್ ಗ್ಯಾಂಗ್ ತಮ್ಮ ಕೈಚಳಕ ತೊರಿಸಿ, ಬ್ಯಾಗ್‍ಗಳನ್ನು ಪರಾರಿಯಾಗುತ್ತಿದ್ದರು.

ಚೈಲ್ಡ್ ಗ್ಯಾಂಗ್‍ನ ಈ ಕೃತ್ಯದಿಂದಾಗಿ ಸಣಾಪುರ ಪ್ರವಾಸಿ ತಾಣಕ್ಕೆ ಕೆಟ್ಟ ಹೆಸರು ಬರುತ್ತಿದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದರು. ಜೊತೆಗೆ ಕಳ್ಳರನ್ನು ಹಿಡಿಯಲು ಮುಂದಾಗಿದ್ದರು. ಕೆಲ ದಿನಗಳ ಹಿಂದಷ್ಟೇ ಚೈಲ್ಡ್ ಗ್ಯಾಂಗ್ ವಿದೇಶಿ ಪ್ರವಾಸಿಗರ ಗ್ಯಾಗ್ ಕದ್ದು ಓಡುತ್ತಿದ್ದಾಗ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿತ್ತು. ಸ್ಥಳೀಯರು ಕಳ್ಳ ಹುಡುಗರನ್ನು ಹಿಡಿದು ಥಳಿಸಿ ಬುದ್ಧಿ ಹೇಳಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಕಳ್ಳರ ವಿಳಾಸ ಪಡೆಯುತ್ತಿರುವ ದೃಶ್ಯವನ್ನು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದು ಪೊಲೀಸರಿಗೆ ನೀಡಿದ್ದಾರೆ.

ಕಳ್ಳತನದ ವಿಡಿಯೋ ತಮ್ಮ ಕೈಗೆ ಸಿಕ್ಕಿದ್ದರೂ ಗಂಗಾವತಿ ಗ್ರಾಮೀಣ ಠಾಣೆಯ ಪೊಲೀಸರು ಯಾವುದೇ ಪ್ರಕರಣ ದಾಖಲಿಸಿಕೊಂಡಿಲ್ಲ. ಆಪ್ತನ ಮಗನೇ ಕಳ್ಳತನ ಮಾಡಿರುವುದರಿಂದ ಶಾಸಕರು ಪ್ರಕರಣ ದಾಖಲಿಸದಂತೆ ಪೊಲೀಸರ ಮೇಲೆ ಒತ್ತಡ ಹಾಕಿದ್ದಾರಾ ಎನ್ನುವ ಅನುಮಾನಗಳು ಸಾರ್ವಜನಿಕರಲ್ಲಿ ಮೂಡಿವೆ.

Share This Article
Leave a Comment

Leave a Reply

Your email address will not be published. Required fields are marked *