ಆನೆಗುಂದಿ ಉತ್ಸವದಲ್ಲಿ ಗಮನ ಸೆಳೆದ ಗಾಳಿಪಟ ಹಾರಾಟ, ಬೈಕ್ ಸ್ಟಂಟ್

Public TV
1 Min Read

– ಮೈ ನೆವಿರೇಳಿಸಿದ ಸವಾರರು

ಕೊಪ್ಪಳ: ಆನೆಗೊಂದಿ ಉತ್ಸವಕ್ಕೂ ಮುನ್ನ ನಡೆಯುತ್ತಿರುವ ಗಾಳಿಪಟ ಹಾರಾಟ ಹಾಗೂ ಬೈಕ್ ಸ್ಟಂಟ್‍ಗಳು ನೆರೆದವರ ಮೈ ನೆವಿರೇಳುವಂತೆ ಮಾಡಿದವು.

ಆನೆಗೊಂದಿ ಉತ್ಸವವನ್ನು ಜನಾಕರ್ಷಣೆಯನ್ನಾಗಿಸುವ ಉದ್ದೇಶಕ್ಕೆ ಜಿಲ್ಲಾಡಳಿತ ಹಮ್ಮಿಕೊಂಡಿರುವ ನಾನಾ ಸ್ಪರ್ಧೆ, ಪ್ರದರ್ಶನಗಳ ಪೈಕಿ ಗಂಗಾವತಿ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಗಾಳಿಪಟ ಹಾರಿಸುವ ಕ್ರೀಡೆ ಜನರ ಗಮನ ಸೆಳೆಯಿತು.

ಶುಭ್ರ ಬಾನಂಗಳದಲ್ಲಿ ಹತ್ತಾರು ನಮೂನೆ, ನಾನಾ ವಿನ್ಯಾಸದ ಗಾಳಿಪಟಗಳು ಹಾರಾಡಿ ಚಿತ್ತಾರ ಮೂಡಿಸಿದವು. ಅಂತರಾಷ್ಟ್ರೀಯ ಗಾಳಿಪಟ ಪ್ರದರ್ಶಕರಾದ ಬೆಂಗಳೂರಿನ ಕೆ.ವಿ.ರಾವ್, ಮೈಸೂರಿನ ಸುಭಾಶ್ ಹಾಗೂ ದೊಡ್ಡಬಳ್ಳಾಪುರದ ಮುನಿಷ್ ಸುಮಾರು 30ಕ್ಕೂ ಹೆಚ್ಚು ಮಾದರಿಯ ಗಾಳಿಪಟ ಹಾರಿಸಿ ಜನರ ಗಮನ ಸೆಳೆದರು.

ಇದರಲ್ಲಿ ಮುಖ್ಯವಾಗಿ ರೋರಿಂಗ್, ಟೇಲ್, ಸಿರೀಸ್, ಸ್ಟಂಟ್, ಡೆಲ್ಟಾ, ಸಿಡಿ, ಅಕ್ಟೋಪಸ್, ಡಾಲ್ಫಿನ್, ಎಲ್‍ಇಡಿ, ಪ್ಲೇನ್, ಈಗಲ್, ಸ್ಪೈಡರ್, ಟೈಗರ್ ಮಾದರಿಯ ಗಾಳಿಪಟಗಳು ಜನರ, ಮುಖ್ಯವಾಗಿ ಶಾಲಾ ಮಕ್ಕಳ ಗಮನ ಸೆಳೆದವು. ಶಾಸಕ ಪರಣ್ಣ ಮುನವಳ್ಳಿ, ಜಿಲ್ಲಾಧಿಕಾರಿ ಪಿ.ಸುನಿಲ್ ಕುಮಾರ, ಜಿಲ್ಲಾ ಪಂಚಾಯತಿ ಅಧ್ಯಕ್ಷ ವಿಶ್ವನಾಥ ರೆಡ್ಡಿ ಗಾಳಿ ಪಟ ಹಾರಿಸುವ ಮೂಲಕ ಪ್ರದರ್ಶನಕ್ಕೆ ಚಾಲನೆ ನೀಡಿದರು.

ಭಟ್ಕಳ ಮೂಲದ ಸಾಹಸಿ ಬೈಕ್ ರೈಡರ್ ಗಳಾದ ಅಖಿಲ್, ಸೈಯದ್ ಗೌಸ್ ಹಾಗೂ ಸಚಿನ್ ನೀಡಿದ ಬೈಕ್ ಸ್ಟಂಟ್ ಗಳು ನೆರೆದವರಲ್ಲಿ ತುದಿಗಾಲ ಮೇಲೆ ನಿಲ್ಲುವಂತೆ ಮಾಡಿತು. ಈ ಯುವಕರು ಸುಮಾರು ಅರ್ಧ ಗಂಟೆಗಳ ಕಾಲ ಬೈಕ್ಸ್ ಸ್ಟಂಟ್ ಮಾಡಿದರು. ಫ್ರಿಸ್ಟೈಲ್ ರೈಡಿಂಗಿನಲ್ಲಿ ವೀಲ್ಹಿಂಗ್, ಸ್ಟಾಪಿ, ಫ್ಲ್ಯಾಗ್ ಮಾರ್ಚಿಂಗ್, ಡ್ರಪ್ಟಿಂಗ್, ಚೈನ್ ಶೋ, ಬರ್ನೊ, ಹ್ಯಾಂಡಲ್ ಕ್ರಿಷ್, ಸ್ಟಾಂಡಿಂಗ್, ಸ್ಲಿಪಿಂಗ್, 350 ಡಿಗ್ರಿ ಸ್ಟಂಟ್, ಫೈಯರ್ ರಿಂಗ್ ಹೀಗೆ ನಾನಾ ನಮೂನೆಯ ಸ್ಟಂಟ್ ಮಾಡುವ ಮೂಲಕ ಜನರ ಗಮನ ಸೆಳೆದರು.

Share This Article
Leave a Comment

Leave a Reply

Your email address will not be published. Required fields are marked *