3ನೇ ಪತ್ನಿಯ ಹತ್ಯೆಗೈದು ಗೋಣಿ ಚೀಲದಲ್ಲಿ ಪ್ಯಾಕ್ – ಲಗೇಜ್ ಎಂದು ಸರ್ಕಾರಿ ಬಸ್ಸಲ್ಲಿ ಕಳುಹಿಸಿದ್ದವ 24 ವರ್ಷಗಳ ಬಳಿಕ ಅರೆಸ್ಟ್

Public TV
1 Min Read

– 2002ರಲ್ಲಿ ತಲೆಮರೆಸಿಕೊಂಡಿದ್ದ 75ರ ಆರೋಪಿ ಅರೆಸ್ಟ್

ಕೊಪ್ಪಳ: ಹೆಂಡತಿಯ ಕೊಲೆಗೈದು 24 ವರ್ಷ ತಲೆಮರೆಸಿಕೊಂಡಿದ್ದ 75 ವರ್ಷದ ಆರೋಪಿಯನ್ನು ಗಂಗಾವತಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಹಾಲದಾಳ ಗ್ರಾಮದ ಹನುಮಂತ ಹುಸೇನಪ್ಪ (75) ಎಂದು ಗುರುತಿಸಲಾಗಿದೆ.ಇದನ್ನೂ ಓದಿ: 6 ತಿಂಗಳಿಂದ ಸಂಬಳ ಇಲ್ಲ – ಸರ್ಕಾರಿ ಕಚೇರಿಯಲ್ಲೇ ಉದ್ಯೋಗಿ ಆತ್ಮಹತ್ಯೆಗೆ ಯತ್ನ

ಹನುಮಂತ ಹುಸೇನಪ್ಪ ಬಾದರ್ಲಿಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಿರಿಯ ಸಹಾಯಕ ಅಧಿಕಾರಿಯಾಗಿ ಕೆಲಸ ಕಾರ್ಯನಿರ್ವಹಿಸುತ್ತಿದ್ದ. ಈತನ ಮೊದಲ ಹೆಂಡತಿ ಸಾವನ್ನಪ್ಪಿದ ನಂತರ ಎರಡನೇ ಮದುವೆ ಆಗಿದ್ದ. ಆಕೆ ಕೂಡ ಸಂಸಾರ ಮಾಡದೆ ಜಗಳ ಮಾಡಿ ಬಿಟ್ಟು ಹೋಗಿದ್ದಳು. ಬಳಿಕ ತಾನು ಸರ್ಕಾರಿ ನೌಕರಸ್ಥ ಎಂಬ ಕಾರಣ ಹೇಳಿ ಕೊಪ್ಪಳ ತಾಲೂಕಿನ ಇಂದರಗಿ ಗ್ರಾಮದ ರೇಣುಕಮ್ಮ ಎನ್ನುವ ಮಹಿಳೆಯೊಬ್ಬರನ್ನ 3ನೇ ಮದುವೆಯಾಗಿ, ಗಂಗಾವತಿ ನಗರದ ಲಕ್ಷ್ಮಿ ಕ್ಯಾಂಪಿನಲ್ಲಿ ಹೆಂಡತಿ ಜೊತೆಗೆ ವಾಸ ಮಾಡುತ್ತಿದ್ದ.

ಲಗೇಜ್ ಎಂದು ಸರ್ಕಾರಿ ಬಸ್ಸಿನಲ್ಲಿ ಕಳುಹಿಸಿದ್ದ ಭೂಪ:
2002ರಲ್ಲಿ ವೈಯಕ್ತಿಕ ಜಗಳಕ್ಕೆ ಹೆಂಡತಿಯನ್ನ ಕೊಚ್ಚಿಹಾಕಿ, ಗೋಣಿ ಚೀಲದಲ್ಲಿ ತುಂಬಿ ಲಗೇಜ್ ಇದೆಯೆಂದೂ ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಸರ್ಕಾರಿ ಬಸ್ಸಿನಲ್ಲಿ ಕಳುಹಿಸಿದ್ದ. ಕಂಪ್ಲಿಯಲ್ಲಿ ಮಹಿಳೆಯಿರುವ ಚೀಲವನ್ನು ಕಂಡ ನಿರ್ವಾಹಕ ನೇರವಾಗಿ ಬಸ್ಸನ್ನು ಪೊಲೀಸ್ ಠಾಣೆಗೆ ಕರೆದೊಯ್ದು, ದೂರು ನೀಡಿದ್ದರು. ಈ ಬಗ್ಗೆ ಪ್ರಕರಣ ದಾಖಲಾಗಿತ್ತು.

ಅಷ್ಟರೊಳಗೆ ಆರೋಪಿ ಊರುಬಿಟ್ಟು ಹೋಗಿದ್ದ. ಕಳೆದ 24 ವರ್ಷಗಳಿಂದ ತಲೆಮರೆಸಿಕೊಂಡು ಅಲೆಮಾರಿಯಾಗಿ ಸಂಚರಿಸುತ್ತಾ, ಜೀವನ ನಡೆಸುತ್ತಿದ್ದ. ಕಳೆದ 7-8 ತಿಂಗಳ ಹಿಂದೆ ತನ್ನ ಸ್ವಂತ ಊರು ಹಾಲದಾಳಕ್ಕೆ ಬಂದಿದ್ದ. ಖಚಿತ ಮಾಹಿತಿಯ ಆಧಾರದ ಮೇರೆಗೆ, ಗಂಗಾವತಿ ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಪಾಟೀಲ, ನಗರಠಾಣೆ ಪಿಐ ಪ್ರಕಾಶ್ ಮಾಳಿ ಅವರ ನೇತೃತ್ವದಲ್ಲಿ ಪೊಲೀಸರು ರಾಯಚೂರು ಜಿಲ್ಲೆಯ ಸಿರವಾರ್ ತಾಲೂಕಿನ ಆತನೂರ ಗ್ರಾಮದಲ್ಲಿ ದಸ್ತಗಿರಿ ಮಾಡಿ, ಮಾನ್ಯ ನ್ಯಾಯಾಲಯಕ್ಕೆ ಒಪ್ಪಿಸಿ, ಜಿಲ್ಲಾ ಕಾರಗೃಹಕ್ಕೆ ಕಳುಹಿಸಿದ್ದಾರೆ.ಇದನ್ನೂ ಓದಿ: 6 ತಿಂಗಳಿಂದ ಸಂಬಳ ಇಲ್ಲ – ಸರ್ಕಾರಿ ಕಚೇರಿಯಲ್ಲೇ ಉದ್ಯೋಗಿ ಆತ್ಮಹತ್ಯೆಗೆ ಯತ್ನ

Share This Article