ಪೌರತ್ವ ಕಾಯ್ದೆ ಬಗ್ಗೆ ಮಾತನಾಡಿದ ಸೌರವ್ ಗಂಗೂಲಿ

Public TV
1 Min Read

ಕೋಲ್ಕತ್ತಾ: ದೇಶದೆಲ್ಲೆಡೆ ಪ್ರತಿಭಟನೆಯ ಕಿಚ್ಚು ಹೊತ್ತಿಸಿರುವ ಪೌರತ್ವ ವಿಧೇಯಕ ಕಾಯ್ದೆ ಬಗ್ಗೆ ಭಾರತ ತಂಡದ ಮಾಜಿ ನಾಯಕ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮಾತನಾಡಿದ್ದಾರೆ.

ಈ ವಿಚಾರವಾಗಿ ಶುಕ್ರವಾರ ಮಾತನಾಡಿದ ಸೌರವ್ ಗಂಗೂಲಿ, ಮೊದಲಿಗೆ ಈ ವಿವಾದತ್ಮಕ ವಿಚಾರದ ಬಗ್ಗೆ ಮಾತನಾಡಲು ನಿರಾಕರಿಸಿದರು. ಆದರೆ ನಂತರ ಮಾತನಾಡಿದ ಅವರು ಪೌರತ್ವ ಕಾಯ್ದೆ ವಿರುದ್ಧವಾಗಿ ಪ್ರತಿಭಟನೆ ಮಾಡುತ್ತಿರುವವರು ಶಾಂತ ರೀತಿಯಲ್ಲಿ ಪ್ರತಿಭಟನೆ ಮಾಡಬೇಕು ಎಂದು ಮನವಿ ಮಾಡಿದರು.

ಪ್ರತಿಭಟನೆ ಮಾಡುವವರಿಗೆ ನನ್ನ ಸಂದೇಶವೆನೆಂದರೆ ಶಾಂತಿಯನ್ನು ಕಾಪಾಡಿಕೊಳ್ಳಿ ಎಂದು ಹೇಳುತ್ತೇನೆ. ನನಗೆ ಈ ಕಾಯ್ದೆಯ ಬಗ್ಗೆ ಸಂಪೂರ್ಣವಾಗಿ ಗೊತ್ತಿಲ್ಲ. ಆದ್ದರಿಂದ ನಾನು ಈ ರಾಜಿಕೀಯ ವಿವಾದವನ್ನು ಮಾಡಿಕೊಳ್ಳುವುದಿಲ್ಲ. ನನಗೆ ಕಾಯ್ದೆಯ ಬಗ್ಗೆ ಗೊತ್ತಿಲ್ಲದೇ ಇರುವಾಗ ಅದರ ಬಗ್ಗೆ ಪ್ರತಿಕ್ರಿಯೇ ನೀಡುವುದು ಸರಿಯಲ್ಲ. ಆದರೆ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಿಕೊಳ್ಳಬೇಕು ಎಂಬುದು ನನ್ನ ಅಭಿಪ್ರಾಯ ಎಂದು ಹೇಳಿದ್ದಾರೆ.

ಪೌರತ್ವ ವಿಧೇಯಕ ಕಾಯ್ದೆಯಲ್ಲಿ ದೇಶಕ್ಕೆ ಮಾರಕವಾಗುವಂತ ಅಂಶ ಇದ್ದರೆ, ಅದನ್ನು ಸಂಬಂಧ ಪಟ್ಟ ವ್ಯಕ್ತಿಗಳ ಜೊತೆ ಮಾತನಾಡಿ ಬಗೆಹರಿಸಿಕೊಳ್ಳಬೇಕು. ಅದನ್ನು ಬಿಟ್ಟು ಈ ರೀತಿ ಹಿಂಸಾತ್ಮಕವಾಗಿ ಪ್ರತಿಭಟನೆ ಮಾಡುವುದು ಸರಿಯಲ್ಲ. ನನಗೆ ದೇಶದಲ್ಲಿ ಎಲ್ಲರೂ ಸಂತೋಷವಾಗಿರುವುದು ಮುಖ್ಯ ಎಂದು ಸೌರವ್ ಗಂಗೂಲಿ ಹೇಳಿದ್ದಾರೆ.

ಈ ವಾರದ ಆರಂಭದಲ್ಲಿ ಸೌರವ್ ಗಂಗೂಲಿ ಅವರ ಮಗಳು ಸನಾ ಗಂಗೂಲಿ ಅವರು ಖುಷ್ವಂತ್ ಸಿಂಗ್ ಅವರ ಬರೆದಿರುವ `ದಿ ಎಡ್ ಆಫ್ ಇಂಡಿಯಾ` ಪುಸ್ತಕದ ಒಂದು ಆಯ್ದ ಭಾಗವನ್ನು ತನ್ನ ಇನ್‍ಸ್ಟಾಗ್ರಾಮ್‍ನಲ್ಲಿ ಹಾಕಿಕೊಂಡು ಫ್ಯಾಸಿಸ್ಟ್ ಆಡಳಿತದ ಬಗ್ಗೆ ಮಾತನಾಡಿದ್ದರು. ಸನಾ ಅವರ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು.

ಮಗಳ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಟ್ವೀಟ್‍ವೊಂದನ್ನು ಮಾಡಿದ್ದ ಸೌರವ್ ಗಂಗೂಲಿ ಅವರು, ದಯವಿಟ್ಟು ಸನಾ ಅವರನ್ನು ಈ ಎಲ್ಲಾ ಹೇಳಿಕೆಗಳಿಂದ ದೂರವಿಡಿ. ಆ ಪೋಸ್ಟ್ ನಿಜವಲ್ಲ. ಆಕೆ ಇನ್ನೂ ಚಿಕ್ಕವಳು ಆಕೆಗೆ ರಾಜಕೀಯ ವಿಚಾರದ ಬಗ್ಗೆ ಗೊತ್ತಿಲ್ಲ ಎಂದು ಟ್ವೀಟ್ ಮಾಡಿ ಮಗಳ ಪರ ನಿಂತಿದ್ದರು.

Share This Article
Leave a Comment

Leave a Reply

Your email address will not be published. Required fields are marked *