ಕೆಕೆಆರ್‌ ಗೆಲುವು ಬಂಗಾಳದಾದ್ಯಂತ ಸಂಭ್ರಮ ತಂದಿದೆ – ನೂತನ ಚಾಂಪಿಯನ್ಸ್‌ಗೆ ದೀದಿ ವಿಶ್‌

Public TV
2 Min Read

ಚೆನ್ನೈ: 17ನೇ ಆವೃತ್ತಿಯ ಐಪಿಎಲ್‌ನಲ್ಲಿ ಚಾಂಪಿಯನ್‌ (IPL 2024 Champions) ಪಟ್ಟ ಮುಡಿಗೇರಿಸಿಕೊಂಡ ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡಕ್ಕೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee )ಅಭಿನಂದನೆ ಸಲ್ಲಿಸಿದ್ದಾರೆ.

ಕೆಕೆಆರ್‌ ತಂಡ ಗೆಲುವು ಸಾಧಿಸುತ್ತಿದ್ದಂತೆ ಮಮತಾ ಬ್ಯಾನರ್ಜಿ ತಮ್ಮ ಎಕ್ಸ್‌ ಖಾತೆ ಮೂಲಕ ವಿಜೇತ ತಂಡಕ್ಕೆ ತುಂಬು ಹೃದಯದ ಅಭಿನಂದನೆ ಸಲ್ಲಿಸಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ (KKR) ಗೆಲುವು ಬಂಗಾಳದಾದ್ಯಂತ ಸಂಭ್ರಮ ತಂದಿದೆ. ಐಪಿಎಲ್‌ನ ಈ ಋತುವಿನಲ್ಲಿ ದಾಖಲೆಯ ಪ್ರದರ್ಶನ ನೀಡಿದ್ದಕ್ಕಾಗಿ ಆಟಗಾರರು, ಸಹಾಯಕ ಸಿಬ್ಬಂದಿ ಮತ್ತು ಫ್ರಾಂಚೈಸಿಗೆ ನಾನು ವೈಯಕ್ತಿಕವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಮುಂಬರುವ ವರ್ಷಗಳಲ್ಲಿ ಇನ್ನಷ್ಟು ಇಂತಹ ಮೋಡಿಮಾಡುವ ಗೆಲುವು ಸಿಗಲೆಂದು ಹಾರೈಸುತ್ತೇನೆ ಎಂದು ತಮ್ಮ ಎಕ್ಸ್‌ ಖಾತೆಯಲ್ಲಿ ಶುಭ ಹಾರೈಸಿದ್ದಾರೆ.

10 ವರ್ಷಗಳ ಬಳಿಕ ಐಪಿಎಲ್‌ ಕಿರೀಟ:
17ನೇ ಆವೃತ್ತಿಯ ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್‌ರೈಡರ್ಸ್‌ ತಂಡವು ಚಾಂಪಿಯನ್‌ ಆಗಿ ಹೊರಹೊಮ್ಮಿದೆ. 2012 ಮತ್ತು 2014ರಲ್ಲಿ ಗೌತಮ್‌ ಗಂಭೀರ್‌ (Gautam Gambhir) ನಾಯಕತ್ವದಲ್ಲಿ ಚಾಂಪಿಯನ್‌ ಪಟ್ಟ ಮುಡಿಗೇರಿಸಿಕೊಂಡಿದ್ದ ಕೋಲ್ಕತ್ತಾ ನೈಟ್‌ರೈಡರ್ಸ್‌ ತಂಡ 10 ವರ್ಷಗಳ ಬಳಿಕ ಶ್ರೇಯಸ್‌ ಅಯ್ಯರ್‌ ಅವರ ನಾಯಕತ್ವದಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಅಲ್ಲದೇ ಹಿಂದೆ ತಂಡದ ನಾಯಕನಾಗಿ ಟ್ರೋಫಿ ಗೆದ್ದುಕೊಟ್ಟಿದ್ದ ಗೌತಮ್‌ ಗಂಭೀರ್‌ ಈ ಬಾರಿ ತಂಡದ ಕೋಚ್‌ ಆಗಿ ಟ್ರೋಫಿ ತಂದುಕೊಟ್ಟಿರುವುದು ವಿಶೇಷ.

ಚೆನ್ನೈನ ಚೆಪಾಕ್‌ ಕ್ರೀಡಾಂಗಣದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ್ದ ಸನ್‌ ರೈಸರ್ಸ್‌ ಹೈದರಾಬಾದ್‌ 18.3 ಓವರ್‌ಗಳಲ್ಲಿ 113 ರನ್‌ಗಳಿಗೆ ಸರ್ವಪತನ ಕಂಡಿತ್ತು. ಅಲ್ಪ ಮೊತ್ತ ಗುರಿ ಪಡೆದ ಕೆಕೆಆರ್‌ ಕೇವಲ 10.3 ಓವರ್‌ಗಳಲ್ಲೇ 114 ರನ್‌ ಗಳಿಸಿ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು.

Share This Article