ಧೋನಿ ರನೌಟ್ ಆಗಿದ್ದನ್ನು ನೋಡಿ ಹೃದಯಾಘಾತ – ಅಭಿಮಾನಿ ಸಾವು

Public TV
2 Min Read

ಕೋಲ್ಕತ್ತಾ: ವಿಶ್ವಕಪ್‍ನ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಸೋತು ಕೋಟ್ಯಂತರ ಅಭಿಮಾನಿಗಳಿಗೆ ಬೇಸರವಾಗಿದೆ. ಆದರೆ ಪಂದ್ಯದಲ್ಲಿ ಧೋನಿ ರನೌಟ್ ಆಗಿದ್ದನ್ನು ಕಂಡು ಅಭಿಮಾನಿಯೊಬ್ಬರು ಹೃದಯಾಘಾತವಾಗಿ ಸಾವನ್ನಪ್ಪಿರುವ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ.

ಬುಧವಾರ ನಡೆದ ನ್ಯೂಜಿಲೆಂಡ್ ವಿರುದ್ಧ ಪಂದ್ಯವನ್ನು ಅಭಿಮಾನಿ ತಮ್ಮ ಮೊಬೈಲ್‍ನಲ್ಲಿ ವೀಕ್ಷಿಸುತ್ತಿದ್ದಾಗ ಈ ಘಟನೆ ನಡೆದಿದೆ. ಧೋನಿ ಔಟಾಗುತ್ತಿದ್ದಂತೆ ಅಭಿಮಾನಿ ಶ್ರೀಕಾಂತ ಮೈಟಿ(33) ಕುಳಿತಲ್ಲಿಯೇ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ಶ್ರೀಕಾಂತ ಸೈಕಲ್ ಅಂಗಡಿ ಇಟ್ಟುಕೊಂಡಿದ್ದರು.

ಶ್ರೀಕಾಂತ್ ಎಚ್ಚರ ತಪ್ಪಿ ಬಿದ್ದಿದ್ದನ್ನು ಕಂಡು ನಾವು ತಕ್ಷಣ ಅವರನ್ನು ಖಾನ್ಕುಲ್ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಆದರೆ ಅಲ್ಲಿಗೆ ತಲುಪಿದ ಬಳಿಕ ಈಗಾಗಲೇ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಹೇಳಿದರು ಎಂದು ಶ್ರೀಕಾಂತ್ ಅವರ ಸೈಕಲ್ ಅಂಗಡಿ ಪಕ್ಕದ ಸ್ವೀಟ್ ಅಂಗಡಿ ಮಾಲೀಕ ಹೇಳಿದ್ದಾರೆ.

ಮಳೆಯಿಂದ ಸ್ಥಗಿತಗೊಂಡಿದ್ದ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಭಾರತವನ್ನು 18 ರನ್‍ಗಳಿಂದ ಸೋಲಿಸಿ ಸತತ ಎರಡನೇ ಬಾರಿಗೆ ಫೈನಲ್ ಪ್ರವೇಶಿಸಿದೆ. ಗೆಲ್ಲಲು 240 ರನ್ ಗಳ ಗುರಿಯನ್ನು ಪಡೆದ ಭಾರತ 49.3 ಓವರ್ ಗಳಲ್ಲಿ 221 ರನ್ ಗಳಿಗೆ ಆಲೌಟ್ ಆಗಿ ಸೋಲನ್ನು ಒಪ್ಪಿಕೊಂಡಿತು. ಆರಂಭದಲ್ಲಿ 5 ರನ್ ಗಳಿಗೆ ಮೂರು ವಿಕೆಟ್ ಕಳೆದುಕೊಂಡು 92 ರನ್‍ಗಳಿಗೆ 6 ವಿಕೆಟ್ ಉರುಳಿದಾಗ ನ್ಯೂಜಿಲೆಂಡ್ ಸುಲಭವಾಗಿ ಗೆಲ್ಲುವ ಸಾಧ್ಯತೆ ಇತ್ತು. ಆದರೆ ಜಡೇಜಾ ಮತ್ತು ಧೋನಿ 7ನೇ ವಿಕೆಟಿಗೆ 116 ರನ್ ಜೊತೆಯಾಟವಾಡಿ ಭಾರತವನ್ನು ಗೆಲುವಿನ ಹತ್ತಿರ ತಂದಿಟ್ಟಿದ್ದರು.

5 ಓವರ್ ಗಳಲ್ಲಿ 52 ರನ್ ಗಳಿಸುವ ಒತ್ತಡದಲ್ಲಿ ಸಿಲುಕಿದ್ದ ಸಂದರ್ಭದಲ್ಲಿ ಜಡೇಜಾ ತಂಡವನ್ನು ಗೆಲುವಿನ ಸನಿಹ ಕೊಂಡ್ಯೊಯುವ ಪ್ರಯತ್ನ ನಡೆಸಿದರು. 46ನೇ ಓವರಿನಲ್ಲಿ ಬೌಂಡರಿ ಸಮೇತ 10 ರನ್ ಗಳಿಸಿದ ಈ ಜೋಡಿ 7ನೇ ವಿಕೆಟ್‍ಗೆ ಶತಕದ ಜೊತೆಯಾಟ ನೀಡಿದರು. 122 ಎಸೆತಗಳಲ್ಲಿ ಈ ಜೋಡಿ 116 ರನ್ ಗಳಿಸಿತು. ಆದರೆ ಅಂತಿಮ ಹಂತದಲ್ಲಿ ಸಿಕ್ಸರ್ ಸಿಡಿಸಲು ಯತ್ನಿಸಿದ ಜಡೇಜಾ 59 ಎಸೆತಗಳಲ್ಲಿ 77 ರನ್(4 ಬೌಂಡರಿ, 4 ಸಿಕ್ಸರ್) ಗಳಿಸಿ ಬೋಲ್ಟ್ ಗೆ ವಿಕೆಟ್ ಒಪ್ಪಿಸಿದರು. ಇತ್ತ ಜಡೇಜಾ ನಿರ್ಗಮನದೊಂದಿಗೆ ತಂಡದ ಗೆಲುವಿನ ಆಸೆಯಾಗಿದ್ದ ಧೋನಿ 50 ರನ್(72 ಎಸೆತ, 1 ಬೌಂಡರಿ, 1ಸಿಕ್ಸರ್) ಸಿಡಿಸಿ ರನೌಟ್ ಆದರು.

Share This Article
Leave a Comment

Leave a Reply

Your email address will not be published. Required fields are marked *