ಮಣಿಕಟ್ಟು ಸೀಳಿ, ತಲೆಗೆ ಪ್ಲಾಸ್ಟಿಕ್ ಚೀಲ ಸುತ್ತಿದ ಸ್ಥಿತಿಯಲ್ಲಿ ವಿದ್ಯಾರ್ಥಿನಿ ಶವ ಪತ್ತೆ

Public TV
2 Min Read

ಕೋಲ್ಕತ್ತಾ: ಮಣಿಕಟ್ಟನ್ನು ಬ್ಲೇಡ್‍ನಿಂದ ಸೀಳಿ, ತಲೆಗೆ ಪ್ಲಾಸ್ಟಿಕ್ ಚೀಲ ಸುತ್ತಿದ ಸ್ಥಿತಿಯಲ್ಲಿ ಹತ್ತನೇ ತರಗತಿ ವಿದ್ಯಾರ್ಥಿನಿಯ ಶವವು ಶಾಲೆಯ ಬಾತ್‍ರೂಂನಲ್ಲಿ ಪತ್ತೆಯಾಗಿರುವ ಭಯಾನಕ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ.

ನಗರದ ಜಿಡಿ ಬಿರ್ಲಾ ಶಾಲೆಯಲ್ಲಿ ಶುಕ್ರವಾರ ಮಧ್ಯಾಹ್ನ ವಿದ್ಯಾರ್ಥಿನಿಯ ಶವ ಪತ್ತೆಯಾಗಿದೆ. ಘಟನಾ ಸ್ಥಳದಲ್ಲಿ ಮೂರು ಪುಟಗಳ ಡೆತ್ ನೋಟ್ ಸಿಕ್ಕಿದೆ. ತೀವ್ರ ಖಿನ್ನತೆಯಿಂದ ಬಳಲುತ್ತಿದ್ದೆ ಹಾಗೂ ಕಳೆದ ಮೂರು ತಿಂಗಳಿನಿಂದ ನಿದ್ದೆ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು ವಿದ್ಯಾರ್ಥಿನಿ ಡೆತ್‍ನೋಟ್‍ನಲ್ಲಿ ತಿಳಿಸಿದ್ದಾಳೆ.

ಘಟನಾ ಸ್ಥಳಕ್ಕೆ ಪೊಲೀಸ್ ಜಂಟಿ ಆಯುಕ್ತ ಮುರಳೀಧರ ಶರ್ಮಾ ಸೇರಿದಂತೆ ಕೋಲ್ಕತಾ ಪೊಲೀಸರು ಭೇಟಿ ನೀಡಿದ್ದಾರೆ. ಶಾಲೆಯ ಶಿಕ್ಷಕರು, ಸಿಬ್ಬಂದಿ ಹಾಗೂ ಪೋಷಕರನ್ನು ವಿಚಾರಣೆ ನಡೆಸಿದ್ದಾರೆ. ಶಾಲೆಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ.

ವಿದ್ಯಾರ್ಥಿನಿ ಶುಕ್ರವಾರ ಮಧ್ಯಾಹ್ನ 1.30ರ ಸುಮಾರಿಗೆ ತರಗತಿಯಿಂದ ಹೊರ ನಡೆದು, ಬಾತ್‍ರೂಂಗೆ ಹೋಗಿದ್ದಾಳೆ. ಒಂದು ಗಂಟೆ ಕಳೆದರೂ ವಿದ್ಯಾರ್ಥಿನಿ ಕಾಣಿಸಲಿಲ್ಲ ಎಂದು ಶಿಕ್ಷಕರು ತಿಳಿಸಿದ್ದರು. ಹೀಗಾಗಿ ಹುಡುಕಾಟ ಪ್ರಾರಂಭಿಸಿದೆವು. ಈ ವೇಳೆ ಬಾತ್‍ರೂಂನಲ್ಲಿ ವಿದ್ಯಾರ್ಥಿನಿಯ ಶವ ಪತ್ತೆಯಾಗಿದೆ. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಆದರೆ ಅದಾಗಲೇ ವಿದ್ಯಾರ್ಥಿನಿ ಸಾವನ್ನಪ್ಪಿರುವ ಕುರಿತು ವೈದ್ಯರು ದೃಢಪಡಿಸಿದರು ಎಂದು ಪೊಲೀಸ್ ಜಂಟಿ ಆಯುಕ್ತ ಶರ್ಮಾ ತಿಳಿಸಿದ್ದಾರೆ.

ಸ್ಥಳದಲ್ಲಿ ಪತ್ತೆಯಾಗಿರುವ ಡೆತ್ ನೋಟ್, ಬ್ಲೇಡ್ ಹಾಗೂ ವಿದ್ಯಾರ್ಥಿನಿ ಮುಖಕ್ಕೆ ಮುಚ್ಚಲಾಗಿದ್ದ ಪ್ಲಾಸ್ಟಿಕ್ ಕವರ್ ಅನ್ನು ವಶಕ್ಕೆ ಪಡೆದು, ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವಿದ್ಯಾರ್ಥಿನಿಯ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಶಾಲೆಯ ಆವರಣದಲ್ಲಿರುವ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ವಿಧಿ ವಿಜ್ಞಾನ ತಜ್ಞರ ತಂಡವು ಶಾಲೆಗೆ ಭೇಟಿ ನೀಡಿದ್ದು, ಮಾದರಿಗಳನ್ನು ಸಂಗ್ರಹಿಸಿದೆ. ಬ್ಲೇಡ್, ಪ್ಲಾಸ್ಟಿಕ್ ಕಂಟೇನರ್ ನಲ್ಲಿ ಪತ್ತೆಯಾಗಿದ್ದು, ಅದರಲ್ಲಿ ಒಂದು ಹೊರಗಡೆ ಬಿದ್ದಿತ್ತು. ಮರಣೋತ್ತರ ಪರೀಕ್ಷೆಯ ನಂತರ ವಿದ್ಯಾರ್ಥಿ ಸಾವಿನ ಪ್ರಕರಣದ ಸತ್ಯಾಸತ್ಯತೆ ತಿಳಿಯಲಿದೆ. ಅದಕ್ಕಾಗಿ ಕಾಯುತ್ತಿದ್ದೇವೆ ಎಂದು ವಿಧಿ ವಿಜ್ಞಾನ ತಜ್ಞದ ಸದಸ್ಯ ಎ.ರೇಝಾ ಮಾಹಿತಿ ನೀಡಿದ್ದಾರೆ.

ವಿದ್ಯಾರ್ಥಿನಿಯು ಸೌಮ್ಯ ಸ್ವಭಾವದವಳಾಗಿದ್ದು, ಇಂಡಿಯನ್ ಸ್ಟಾಟಿಸ್ಟಿಕಲ್ ಇನ್‍ಸ್ಟಿಟ್ಯೂಟ್ ಪ್ರವೇಶ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಳು ಎಂದು ಪ್ರಾಥಮಿಕ ವಿಚಾರಣೆ ವೇಳೆ ತಿಳಿದು ಬಂದಿದೆ.

ಪ್ರಕರಣದ ಕುರಿತು ಆಳವಾದ ತನಿಖೆ ನಡೆಯಬೇಕು. ಶಾಲೆಯ ಭಾಗದಲ್ಲಿ ಹೆಚ್ಚು ಭದ್ರತೆ ಇದ್ದರೂ ಈ ಘಟನೆ ಹೇಗೆ ನಡೆಯಿತು? ವಿದ್ಯಾರ್ಥಿನಿ ಕಾಣೆಯಾಗಿ ಒಂದು ಗಂಟೆ ಕಳೆದರೂ ಶಾಲೆಯ ಆಡಳಿತ ಮಂಡಳಿ ಏಕೆ ಗಮನಿಸಲಿಲ್ಲ? ಭದ್ರತೆ ಎಲ್ಲಿದೆ ಎಂದು ಪೋಷಕರ ವೇದಿಕೆಯ ವಕ್ತಾರ ತನ್ಮಯ್ ಘೋಷ್ ಪ್ರಶ್ನಿಸಿದ್ದಾರೆ.

ವಿದ್ಯಾರ್ಥಿನಿಯು ಅವಳ ತಾಯಿಯೊಂದಿಗೆ ವಾಸಿಸುತ್ತಿದ್ದಳು. ಆಕೆಯ ತಂದೆ ಸಾಫ್ಟ್‍ವೇರ್ ಎಂಜಿನಿಯರ್ ಆಗಿದ್ದು, ಹೈದರಾಬಾದ್‍ನಲ್ಲಿ ಕೆಲಸ ಮಾಡುತ್ತಿದ್ದಾರೆ. ಪುತ್ರಿಯ ಸಾವಿನ ಸುದ್ದಿ ತಿಳಿದು ಶುಕ್ರವಾರ ರಾತ್ರಿ ಕೋಲ್ಕತ್ತಾಗೆ ಆಗಮಿಸಿದ್ದಾರೆ.

ಜಿಡಿ ಬಿರ್ಲಾ ಶಾಲೆಯು 2017ರಿಂದಲೂ ಸುದ್ದಿಯಲ್ಲಿದ್ದು, ವಿದ್ಯಾರ್ಥಿನಿಗೆ ಕಿರುಕುಳ ನೀಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪೋಷಕರು ಬೃಹತ್ ಪ್ರತಿಭಟನೆ ನಡೆಸಿದ್ದರು. ಆಗಿನಿಂದಲೂ ಈ ಶಾಲೆ ಸದಾ ಸುದ್ದಿಯಲ್ಲಿದೆ. ಪೋಷಕರ ಪ್ರತಿಭಟನೆ ನಂತರ ಪೋಸ್ಕೊ ಕಾಯ್ದೆಯಡಿ ಇಬ್ಬರು ಶಿಕ್ಷಕರನ್ನು ಬಂಧಿಸಲಾಗಿತ್ತು.

[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

Share This Article
Leave a Comment

Leave a Reply

Your email address will not be published. Required fields are marked *