ಸ್ನೇಹಿತರಿಬ್ಬರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ – ಕುಟುಂಬಸ್ಥರಿಂದ ಕೊಲೆ ಆರೋಪ

Public TV
1 Min Read

ಕೋಲಾರ: ಜಿಲ್ಲೆಯಲ್ಲಿ ಅನುಮಾನಾಸ್ಪದವಾಗಿ ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರು ಯುವಕರ ಶವ ಪತ್ತೆಯಾಗಿದೆ.

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಅಣ್ಣಹಳ್ಳಿ ಗ್ರಾಮದ ಹೊರವಲಯದಲ್ಲಿ ಈ ಘಟನೆ ನಡೆದಿದ್ದು, ಪ್ರವೀಣ್ (20) ಹಾಗೂ ಶ್ರೀನಾಥ್ (20) ಒಂದೇ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಸ್ನೇಹಿತರು. ಪ್ರವೀಣ್ ಕೆ.ಆರ್ ಪುರಂ ಮಾರ್ಕೆಟ್‍ನಲ್ಲಿ ತನ್ನ ಚಿಕ್ಕಪ್ಪನ ಜೊತೆಗೆ ಕೆಲಸ ಮಾಡುತ್ತಿದ್ದರೆ, ಶ್ರೀನಾಥ್ ಅಣ್ಣಿಹಳ್ಳಿಯಲ್ಲಿ ತನ್ನ ಬಾವನ ಜೊತೆಗೆ ವ್ಯವಸಾಯ ಮಾಡುತ್ತಿದ್ದ.

ಎರಡೂ ಕುಟುಂಬದವರಿಗೂ ಇವರಿಬ್ಬರ ಸ್ನೇಹದ ಬಗ್ಗೆ ಗೊತ್ತಿತ್ತು. ಮೊನ್ನೆಯಷ್ಟೇ ಕೆಆರ್ ಪುರಂನಿಂದ ಬಂದಿದ್ದ ಪ್ರವೀಣ್, ಶ್ರೀನಾಥ್ ಜೊತೆ ನಿನ್ನೆವರೆಗೂ ಜೊತೆಯಲ್ಲೇ ಇದ್ದ. ಇಬ್ಬರು ಮನೆಗೆ ಹೋಗಿರಲಿಲ್ಲ. ಅವರ ಮನೆಯವರು ಕೂಡಾ ಅವನ ಮನೆಯಲ್ಲಿದ್ದಾರೆಂದು ಇವರು ಇವರ ಮನೆಯಲ್ಲಿದ್ದಾರೆಂದು ಅವರು ಸುಮ್ಮನಿದ್ದರು. ಬುಧವಾರ ಸಂಜೆ ಕೂಡಾ ಫೋನ್ ಮಾಡಿ ಮಾತನಾಡಿಸಿದ್ದಾಗ ಇಬ್ಬರು ಒಟ್ಟಿಗೆ ಇರೋದಾಗಿ ತಿಳಿಸಿದ್ದರು.

ಆದರೆ ಇಂದು ಬೆಳಗ್ಗೆ 11 ಗಂಟೆಗೆ ಇಬ್ಬರು ಒಂದೇ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಮೃತ ಪ್ರವೀಣ್ ಹಾಗೂ ಶ್ರೀನಾಥ್ ಕುಟುಂಬಸ್ಥರು ಇಬ್ಬರು ಆತ್ಮಹತ್ಯೆ ಮಾಡಿಕೊಳ್ಳುವಂತ ಹುಡುಗರಲ್ಲ. ಜೊತೆಗೆ ಅವರಿಗೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ಸ್ಥಿತಿ ಏನೂ ಬಂದಿಲ್ಲ. ಇಬ್ಬರನ್ನು ಯಾರೋ ಕೊಲೆ ಮಾಡಿ ನೇಣು ಹಾಕಿದ್ದಾರೆಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಎರಡು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿ ಪ್ರಕರಣ ದಾಖಲಿಸಿಕೊಂಡಿರುವ ನಂಗಲಿ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *