ಕೋಲಾರ| ನಿರಂತರ ಮಳೆ- ಲಾಭದ ನಿರೀಕ್ಷೆಯಲ್ಲಿದ್ದ ಹೂವಿನ ಬೆಳೆಗಾರರು ಕಂಗಾಲು

Public TV
1 Min Read

ಕೋಲಾರ: ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಜಡಿ ಮಳೆಯ (Rain) ಪರಿಣಾಮ ಸಾಕಷ್ಟು ಅನಾಹುತಗಳು ಸೃಷ್ಟಿಯಾಗಿವೆ. ಅದರಲ್ಲೂ ರೈತರು ಬೆಳೆದ ಬೆಳೆಗಳು ಮಳೆಯ ಹೊಡೆತಕ್ಕೆ ಕೊಚ್ಚಿ ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ.

ಕೋಲಾರ (Kolara) ತಾಲೂಕು ಹೊದಲವಾಡಿ ಗ್ರಾಮದಲ್ಲಿ ಹೂ ತೋಟಕ್ಕೆ ನಿರಂತರ ಮಳೆಯಿಂದ ನೀರಿನಲ್ಲಿ ನೆನೆದು ಹೂವಿನ ತೋಟ ಕೊಳೆಯಲು ಆರಂಭಿಸಿದೆ. ಪರಿಣಾಮ ದೀಪಾವಳಿವರೆಗೂ ಹೂವಿನ ಬೆಳೆ ಇರುತ್ತದೆ ಎಂದು ಭರ್ಜರಿ ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ಜಡಿ ಮಳೆ ತಣ್ಣೀರೆರಚಿದೆ. ಇದನ್ನೂ ಓದಿ: ಬಾಗಲಕೋಟೆ| ಮಳೆ ಅವಾಂತರಕ್ಕೆ ಕೊಳೆತು ಹೋಗುತ್ತಿದೆ ಈರುಳ್ಳಿ – ರೈತರ ಕಣ್ಣೀರು

ಸುಮಾರು ಮೂರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಚೆಂಡು ಹೂವು ತೋಟದಲ್ಲಿ ನೀರು ನಿಂತಿದ್ದು ಹೂವು ಬೆಳೆಗಾರರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಅದರಲ್ಲೂ ದೀಪಾವಳಿ ಹಬ್ಬದ ಹಿನ್ನೆಲೆ ಹೂವಿಗೆ ಒಳ್ಳೆಯ ಬೆಲೆ ಬರುತ್ತದೆ. ಹಬ್ಬಕ್ಕಾಗಿಯೇ ತೋಟಕ್ಕೆ ಗೊಬ್ಬರ ನೀರು ಹಾಕಿ ಔಷಧ ಹಾಕಿ ಚೆನ್ನಾಗಿ ತೋಟವನ್ನು ಬೆಳೆಸಿ, ಹಬ್ಬದ ಸಮಯಕ್ಕೆ ಒಂದಷ್ಟು ಆದಾಯ ಮಾಡಿಕೊಳ್ಳಬಹುದು ಎಂದುಕೊಂಡಿದ್ದ ಹೂವು ಬೆಳೆಗಾರ ವೇಣು ಅವರಿಗೆ ನಿರಾಸೆಯಾಗಿದೆ. ಇದನ್ನೂ ಓದಿ: ಸ್ನೇಹಿತನ ವಿರುದ್ಧ ಸೇಡು ತೀರಿಸಿಕೊಳ್ಳಲು 4 ವಿಮಾನಗಳಿಗೆ ಬಾಂಬ್ ಬೆದರಿಕೆ – ಮುಂಬೈನಲ್ಲಿ ಅಪ್ರಾಪ್ತ ಅರೆಸ್ಟ್‌

ಕಳೆದ ನವರಾತ್ರಿ ಹಬ್ಬದಲ್ಲಿ ಒಂದಷ್ಟು ಆದಾಯ ಬಂದಿದೆ. ಆದರೆ ದೀಪಾವಳಿ ಹಬ್ಬಕ್ಕೆ ಒಳ್ಳೆಯ ಬೆಲೆ ಬರುತ್ತದೆ ಆಗ ಹಾಕಿದ ಬಂಡವಾಳಕ್ಕೆ ಒಂದಷ್ಟು ಲಾಭ ಬರುತ್ತದೆ ಅನ್ನೋ ನಿರೀಕ್ಷೆಯಲ್ಲಿದ್ದ ವೇಣು ಅವರಿಗೆ ನಿರಂತರ ಸೈಕ್ಲೋನ್ ಮಳೆ ನಿರಾಸೆ ಉಂಟು ಮಾಡಿದೆ. ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಗೆ ಹೂವಿನ ಗಿಡಗಳು ಕೊಳೆಯಲು ಆರಂಭಿಸಿದೆ. ಅಲ್ಲದೆ ಮೊಗ್ಗಿಗೆ ರೋಗ ಬಾಧೆ ಶುರುವಾಗಿದೆ. ಇನ್ನೆರಡು ದಿನ ಇದೇ ರೀತಿ ಮಳೆ ಬಂದರೆ ಬೆಳೆ ಸಂಪೂರ್ಣ ಹಾಳಾಗುತ್ತದೆ ಅನ್ನೋದು ರೈತರ ಮಾತು. ಇದನ್ನೂ ಓದಿ: ಬೆಂಗಳೂರು, ದೆಹಲಿಗೆ ಹೊರಟಿದ್ದ 2 ವಿಮಾನಗಳಿಗೆ ಬಾಂಬ್‌ ಬೆದರಿಕೆ – 3 ದಿನಗಳಲ್ಲಿ 12 ಕೇಸ್‌

Share This Article