ಕೋಲಾರ, ಚಿಕ್ಕಬಳ್ಳಾಪುರದ ಹಾಲು ಉತ್ಪಾದಕರಿಗೆ ರೇವಣ್ಣ ಶಾಕ್!

Public TV
1 Min Read

ಕೋಲಾರ: ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ದಿಂದ ಸರಬರಾಜು ಆಗುತ್ತಿದ್ದ ಗುಡ್‍ಲೈಫ್ ಹಾಲನ್ನು ಖಡಿತಗೊಳಿಸುವ ನಿರ್ಧಾರವನ್ನು ಸಚಿವ ರೇವಣ್ಣ ಅವರು ನೀಡಿದ್ದಾರೆ ಎನ್ನಲಾಗಿದ್ದು, ಈ ನಿರ್ಧಾರವನ್ನು ಖಂಡಿಸಿ ಕೋಲಾರದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಸಮ್ಮಿಶ್ರ ಸರ್ಕಾರದ ಸೂಪರ್ ಸಿಎಂ ಎಂದೇ ಬಿಂಬಿತರಾಗುತ್ತಿರುವ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ, ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಿಂದ ಸೈನ್ಯಕ್ಕೆ ಕಳುಹಿಸಿಕೊಡುತ್ತಿದ್ದ ಕೋಚಿಮುಲ್ ಹಾಲಿನಲ್ಲಿ ಹಾಸನಕ್ಕೆ ಅರ್ಧದಷ್ಟು ಪಾಲು ನೀಡಲು ಮುಂದಾಗಿದ್ದು, ಅವರ ನಿಲುವನ್ನು ಬದಲಿಸುವಂತೆ ಕೋಲಾರ ನಗರದ ಜೂನಿಯರ್ ಕಾಲೇಜು ವೃತ್ತದಲ್ಲಿ ಪ್ರತಿಕೃತಿ ದಹಿಸುವುದರ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಏಳೆಂಟು ವರ್ಷಗಳಿಂದ ಕೋಲಾರ ಹಾಲು ಒಕ್ಕೂಟದಲ್ಲಿ ತಯಾರಾಗುವ, ಟೆಟ್ರಾ ಪ್ಯಾಕ್‍ನ ಗುಡ್ ಲೈಫ್ (ಯು.ಹೆಚ್.ಟಿ) ಹಾಲನ್ನು ದೇಶ ಕಾಯುವ ಯೋಧರು, ತಿರುಪತಿ ಸೇರಿದಂತೆ ವಿವಿಧೆಡೆ ಪ್ರತಿ ವರ್ಷಕ್ಕೆ 80 ಲಕ್ಷ ಲೀಟರ್ ಹಾಲು ಕಳಿಸಿಕೊಡಲಾಗುತ್ತಿತ್ತು. ಆದರೆ ಸಚಿವ ರೇವಣ್ಣ ಅವರ ಕೈವಾಡದಿಂದಾಗಿ ಸುಮಾರು 40 ಲಕ್ಷ ಲೀಟರ್ ಹಾಲನ್ನ ಕಡಿತಗೊಳಿಸಿರುವುದರಿಂದ, ಈಗಾಗಲೇ ನಷ್ಟದಲ್ಲಿರುವ ಕೋಚಿಮಲ್‍ಗೆ ಹಾಗೂ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಯಾವುದೇ ಶಾಶ್ವತ ನೀರಾವರಿ ಆಧಾರವಿಲ್ಲದಿದ್ದರೂ ಹೈನೋದ್ಯಮವನ್ನೇ ನಂಬಿ ಬದುಕುತ್ತಿರುವ ಅವಳಿ ಜಿಲ್ಲೆಯ ರೈತರಿಗೆ ನಷ್ಟವಾಗುವ ಆತಂಕ ಎದುರಾಗಿದ್ದು, ಹಾಸನಕ್ಕೆ ಪಾಲು ಕೇಳಿರುವ ಸಚಿವರ ವಿರುದ್ಧ ಆಕ್ರೋಶವನ್ನ ವ್ಯಕ್ತಪಡಿಸಿದ್ದಾರೆ.

ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಿಂದ ಸರಬರಾಜು ಮಾಡಲಾಗುತ್ತಿದ್ದ 40 ಲಕ್ಷ ಲೀಟರ್ ಹಾಲನ್ನು ಖಡಿತ ಮಾಡಲು ಮುಂದಾಗಿರುವ ಸಚಿವ ರೇವಣ್ಣ ಅವರು, ತಮ್ಮ ನಿರ್ಧಾರವನ್ನು ಈ ಕೂಡಲೇ ವಾಪಸ್ ಪಡೆಯಬೇಕು, ಇಲ್ಲವಾದಲ್ಲಿ ಜಿಲ್ಲೆಲ್ಲಿ ಬಂದ್ ಮಾಡಿ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *