ಹಣ ಬಿಟ್ಟು 4 ಲಕ್ಷ ರೂ. ಮೌಲ್ಯದ ಎಣ್ಣೆ ಹೊತ್ತೊಯ್ದ ಮದ್ಯ ಪ್ರಿಯರು

Public TV
1 Min Read

ಕೋಲಾರ: ಲಾಕ್‍ಡೌನ್‍ನಿಂದಾಗಿ ಎಣ್ಣೆ ಸಿಗದೆ ಕಂಗೆಟ್ಟಿರುವ ಮದ್ಯಪ್ರಿಯರು ಬಾರ್ ಅಂಡ್ ರೆಸ್ಟೋರೆಂಟ್‍ನ ಶೆಟರ್ ಮುರಿದು ಸುಮಾರು 4 ಲಕ್ಷ ರೂ. ಮೌಲ್ಯದ ಮದ್ಯ ದೋಚಿರುವ ಘಟನೆ ಶ್ರೀನಿವಾಸಪುರ ತಾಲೂಕಿನಲ್ಲಿ ನಡೆದಿದೆ.

ಶ್ರೀನಿವಾಸಪುರ ತಾಲೂಕಿನ ರೋಜೇನಹಳ್ಳಿಯ ವೀರಭದ್ರೇಗೌಡ ಎಂಬವರಿಗೆ ಸೇರಿದ ಲಕ್ಷ್ಮೀ ಬಾರ್ ಅಂಡ್ ರೆಸ್ಟೋರೆಂಟ್‍ಗೆ ಶನಿವಾರ ರಾತ್ರಿ ಕನ್ನ ಹಾಕಲಾಗಿದೆ. ಬಾರ್ ಅಂಡ್ ರೆಸ್ಟೋರೆಂಟ್ ಶೆಟರ್ ಮುರಿದು ಒಳ ನುಗ್ಗಿರುವ ಕಳ್ಳರು ಬಾರ್‍ನಲ್ಲಿದ್ದ ಹಣವನ್ನ ಬಿಟ್ಟು, ಲಕ್ಷಾಂತರ ರೂಪಾಯಿ ಮೌಲ್ಯದ ಮದ್ಯವನ್ನ ದೋಚಿ ಪರಾರಿಯಾಗಿದ್ದಾರೆ.

ಸ್ಥಳಕ್ಕೆ ಅಬಕಾರಿ ಇಲಾಖೆ ಅಧಿಕಾರಿಗಳು ಹಾಗೂ ಶ್ರೀನಿವಾಸಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮದ್ಯ ಸಿಗದೆ ಕಂಗೆಟ್ಟ ಮದ್ಯಪ್ರಿಯರು ಕನ್ನ ಹಾಕಿದ್ದಾರಾ ಅಥವಾ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡಲು ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕರೆ ಇಂತಹ ಹೀನ ಕೃತ್ಯವೆಸಗಿದ್ದಾರಾ ಎನ್ನುವ ಅನುಮಾನ ವ್ಯಕ್ತವಾಗಿದೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಶ್ರೀನಿವಾಸಪುರ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮದ್ಯ ಸಿಗದೆ ಇರುವುದಕ್ಕೆ ರಾಜ್ಯದಲ್ಲಿ 10ಕ್ಕೂ ಹೆಚ್ಚು ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜೊತೆಗೆ ರಾಜ್ಯದ ವಿವಿಧೆಡೆ ಮದ್ಯದ ಅಂಗಡಿಗೆ ಕನ್ನ ಹಾಕಿದ ಪ್ರಕರಣಗಳು ವರದಿಯಾಗಿವೆ.

Share This Article
Leave a Comment

Leave a Reply

Your email address will not be published. Required fields are marked *