ಪರಾರಿಯಾಗಿದ್ದ ಸ್ವಾಮೀಜಿ ಯುವತಿಯೊಂದಿಗೆ ಮಿಲ್ಕಿ ಬಾಯ್ ಲುಕ್‍ನಲ್ಲಿ ಪ್ರತ್ಯಕ್ಷ

Public TV
1 Min Read

– ಕಳ್ಳ ಸ್ವಾಮೀಜಿ ಮುರಡೇಶ್ವರದಲ್ಲಿ ಅರೆಸ್ಟ್

ಕೋಲಾರ: 19 ವರ್ಷದ ಯುವತಿಯೊಂದಿಗೆ ಪರಾರಿಯಾಗಿದ್ದ ಹೊಳಲಿ ಗ್ರಾಮದ ದತ್ತಾತ್ರೇಯ ಅವಧೂತ ಸ್ವಾಮೀಜಿ ಮಿಲ್ಕಿ ಬಾಯ್ ಲುಕ್‍ನಲ್ಲಿ ಪೋಸ್ ನೀಡಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಕೋಲಾರ ತಾಲೂಕಿನ ಹೊಳಲಿ ಗ್ರಾಮದ ದತ್ತಾತ್ರೇಯ ಅವಧೂತ ಸ್ವಾಮೀಜಿ ಕಳೆದ 2 ತಿಂಗಳ ಹಿಂದೆ ಗ್ರಾಮಕ್ಕೆ ಆಗಮಿಸಿದ್ದ. ಆದರೆ ಫೆಬ್ರವರಿ 24ರಂದು ಯುವತಿ ಶ್ಯಾಮಲ (19) ಜೊತೆ ಪರಾರಿಯಾಗಿದ್ದ. ಈ ಸಂಬಂಧ ಯುವತಿಯ ಪೋಷಕರು, ಗ್ರಾಮಸ್ಥರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸ್ವಾಮೀಜಿ ಮುರುಡೇಶ್ವರದಲ್ಲಿ ಇರುವ ಮಾಹಿತಿ ಪಡೆದ ಪೊಲೀಸರು ಆತನನ್ನು ಬಂಧಿಸಿ ಜಿಲ್ಲೆಗೆ ಕರೆತರುತ್ತಿದ್ದಾರೆ.

ಏನಿದು ಪ್ರಕರಣ?:
ಕೋಲಾರ ತಾಲೂಕಿನ ಹೊಳಲಿ ಗ್ರಾಮದ ಭೀಮಲಿಂಗೇಶ್ವರ ಸ್ವಾಮೀ ದೇವಾಲಯಕ್ಕೆ ಜನವರಿ 15ರಂದು ಬಂದಿದ್ದ ಸ್ವಾಮೀಜಿ, ನಾನು ಇಲ್ಲಿಯೆ ಇದ್ದು ದೇವಾಲಯದ ಅಭಿವೃದ್ಧಿಯ ಜೊತೆಗೆ ಸೇವಾಶ್ರಮ ಮಾಡಿ ಪೀಠಾಧಿಪತಿಯಾಗಿ ಅಭಿವೃದ್ಧಿ ಪಡಿಸುತ್ತೇನೆ ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದ್ದ. ವಿಜಯಪುರ ಜಿಲ್ಲೆಯ ಮುದ್ದೆಬಿಹಾಳ ಮೂಲದ ರಾಘವೇಂದ್ರ ಆಲಿಯಾಸ್ ದತ್ತಾತ್ರೇಯ ಅವಧೂತನನ್ನು ಭೀಮಲಿಂಗೇಶ್ವರ ಸೇವಾಶ್ರಮದ ಸ್ವಾಮೀಜಿಯಾಗಿ ನೇಮಕ ಮಾಡಲಾಗಿತ್ತು.

ಗ್ರಾಮಸ್ಥರು ಸ್ವಾಮೀಜಿ ಜೊತೆಗೆ ಮಾತುಕತೆ ನಡೆಸಿ ದೇವಾಲಯ ಅಭಿವೃದ್ಧಿಗೆ ಒಪ್ಪಿಗೆ ಸೂಚಿಸಿದ್ದರು. ಅದರಂತೆ ಸಿಎಂ ಯಡಿಯೂರಪ್ಪ ಅವರು ಸೇರಿದಂತೆ ರಾಜ್ಯದ ಉಪ ಮುಖ್ಯಮಂತ್ರಿ, ಸಚಿವರು ಗಣ್ಯರಿಗೆ ಆಹ್ವಾನ ನೀಡಿ ಅದ್ದೂರಿಯಾಗಿ ಜಾತ್ರೆ ಮಾಡಿದ್ದರು. ಆದರೆ ಗ್ರಾಮಕ್ಕೆ ಬಂದ ಕೆಲವೇ ದಿನಗಳಲ್ಲಿ ದತ್ತಾತ್ರೇಯ ಅವಧೂತ ಸ್ವಾಮೀಜಿ ಅದೇ ಗ್ರಾಮದ 19 ವರ್ಷದ ಶ್ಯಾಮಲ ಎಂಬ ಯುವತಿಯ ಜೊತೆ ನಾಪತ್ತೆಯಾಗಿದ್ದ.

ಈ ಸಂಬಂಧ ಕೋಲಾರ ಗ್ರಾಮಾಂತರ ಠಾಣೆಗೆ ಯುವತಿಯ ಸೋದರ ಮಾವ ಶಂಕರ್ ದೂರು ನೀಡಿದ್ದರು. ಯುವತಿ ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದ ಕೋಲಾರ ಗ್ರಾಮಾಂತರ ಪೊಲೀಸರು ತನಿಖೆ ಆರಂಭಿಸಿದ್ದರು. ಯುವತಿ ಹಾಗೂ ಸ್ವಾಮೀಜಿ ಮುರುಡೇಶ್ವರದ ಬೀಚ್ ಇರುವುದನ್ನು ಪತ್ತೆಹಚ್ಚಿದ್ದರು. ದತ್ತಾತ್ರೇಯ ಅವಧೂತ ಸ್ವಾಮೀಜಿ ವೇಷ ತೆಗೆದು ಸಖತ್ ಕ್ಯೂಟ್ ಮಿಲ್ಕಿ ಬಾಯ್ ವೇಷದಲ್ಲಿ ಮಿಂಚುತ್ತಿದ್ದ. ಪೊಲೀಸರ ತಂಡವೊಂದು ಮುರಡೇಶ್ವರಕ್ಕೆ ಹೋಗಿ ಸ್ವಾಮೀಜಿಯನ್ನು ಬಂಧಿಸಿ ಜಿಲ್ಲೆಗೆ ಕರೆತರುತ್ತಿದೆ ಎಂಬ ಮಾಹಿತಿ ಲಭಿಸಿದೆ.

Share This Article
Leave a Comment

Leave a Reply

Your email address will not be published. Required fields are marked *