ಕೋಲಾರದಲ್ಲಿ ಬನ್ನಿ ಮರ ಕಡಿದು ದಸರಾ ಆಚರಣೆ

Public TV
1 Min Read

ಕೋಲಾರ: ನಗರದ ಹೊರವಲಯದ ಕೊಂಡರಾಜನಹಳ್ಳಿ ಬಳಿ ವಿಜಯದಶಮಿ ಪ್ರಯುಕ್ತ ಬನ್ನಿ ಮರವನ್ನು ಕಡಿದು ದಸರಾವನ್ನು ಆಚರಿಸಲಾಯಿತು

ಕೋಲಾರ ಉಪ ವಿಭಾಗಾಧಿಕಾರಿ ಸೋಮಶೇಖರ್ ಮೈಸೂರು ಪೇಟ ಧರಿಸಿ ಕೋಲಾರ ತಾಲೂಕು ಆಡಳಿತ ವಿಜಯಶಾಲಿಯಾಗಲಿ ಎಂದು ಪ್ರಾರ್ಥಿಸಿ ಬನ್ನಿ ಮರದ ಪೂಜೆಯನ್ನು ನೆರವೇರಿಸಿದರು. ಪೂಜೆಯ ನಂತರ ಬನ್ನಿ ಮರವನ್ನು ಕಡಿಯಲಾಯಿತು.

ಈ ಹಿಂದೆ ಪ್ರತಿವರ್ಷ ಆಯುಧ ಪೂಜೆಯ ಸಂದರ್ಭದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಮರವನ್ನು ಕಡಿಯಲಾಗುತಿತ್ತು. ಆದರೆ ಈಗ ಬನ್ನಿ ಮರವನ್ನು ಕಡಿಯುವುದಿಲ್ಲ. ಬದಲಾಗಿ ಬನ್ನಿ ಎಲೆಯನ್ನು ಅಲಂಕರಿಸಿರುವ ಬಾಳೆಯ ದಿಂಡನ್ನು ಕಡಿಯಲಾಗುತ್ತದೆ.

ಈ ಬನ್ನಿ ಎಲೆಗಳಿರುವ ಬಾಳೆ ದಿಂಡನ್ನು ಕಡಿದ ನಂತರ ಮರದ ಎಲೆಗಳನ್ನು ಮನೆಯಲ್ಲಿ ಇಟ್ಟುಕೊಂಡರೆ ವಿಜಯ ನಮ್ಮದಾಗುತ್ತದೆ ಎಂಬ ನಂಬಿಕೆ ಇಲ್ಲಿನ ಜನರದ್ದಾಗಿದೆ. ಈ ವಿಶೇಷ ಪೂಜೆಯಲ್ಲಿ ನೂರಾರು ಭಕ್ತರು ಭಾಗವಹಿಸಿ ದಿಂಡನ್ನು ಕಡಿದ ನಂತರ ಎಲೆಗಳನ್ನು ಮನೆಗೆ ತೆಗೆದುಕೊಂಡು ಹೋಗುತ್ತಾರೆ.

ಬನ್ನಿಮರದ ವಿಶೇಷತೆ ಏನು?
ವನವಾಸಕ್ಕೆ ಹೋಗುವ ಮುನ್ನ ಪಾಂಡವರು ತಮ್ಮ ಶಸ್ತ್ರಾಸ್ತ್ರಗಳನ್ನು ಬನ್ನಿ ಮರದಲ್ಲಿ ಬಚ್ಚಿಟ್ಟಿದ್ದರು. ಅಜ್ಞಾತವಾಸ, ವನವಾಸ ಮುಗಿಸಿದ ಬಳಿಕ ಬನ್ನಿಮರಕ್ಕೆ ಪೂಜೆ ಸಲ್ಲಿಸಿ ಅಲ್ಲಿದ್ದ ಶಸ್ತ್ರಗಳನ್ನು ಇಳಿಸಿ ಮಹಾಭಾರತ ಯುದ್ಧದಲ್ಲಿ ಭಾಗವಹಿಸಿದ್ದರು. ಬನ್ನಿ ಮರಕ್ಕೆ ಪೂಜೆ ಸಲ್ಲಿಸಿ ಯುದ್ಧ ನಡೆಸಿದ್ದರಿಂದಲೇ ಪಾಂಡವರು ಮಹಾಭಾರತ ಕದನವನ್ನು ಜಯಗಳಿಸಿದರು ಎನ್ನುವ ನಂಬಿಕೆಯಿದೆ. ಹೀಗಾಗಿ ಈ ಗ್ರಾಮಸ್ಥರು ಕೃತಕ ಬನ್ನಿ ಮರವನ್ನೇ ಕಡಿದು ವಿಶೇಷವಾಗಿ ಹಬ್ಬವನ್ನು ಆಚರಿಸುತ್ತಾರೆ.

Share This Article
Leave a Comment

Leave a Reply

Your email address will not be published. Required fields are marked *