ಕೋಗಿಲು ಲೇಔಟ್‌ನಲ್ಲಿ ಮನೆ, ಶೆಡ್‌ಗಳ ನೆಲಸಮ ವಿಚಾರಕ್ಕೆ ಕೆ.ಸಿ ವೇಣುಗೋಪಾಲ್‌ ಎಂಟ್ರಿ; ರಾಷ್ಟ್ರಮಟ್ಟದಲ್ಲಿ ಸದ್ದು!

3 Min Read

– ಕೇರಳ ಸಿಎಂ ಎಂಟ್ರಿಯಿಂದ ಶುರುವಾದ ರಾಜಕೀಯ ಜಟಾಪಟಿ

ಬೆಂಗಳೂರು/ನವದೆಹಲಿ: ಯಲಹಂಕದ ಕೋಗಿಲು ಲೇಔಟ್‌ನಲ್ಲಿ 200 ಮನೆ, ಶೆಡ್‌ಗಳ ನೆಲಸಮ ಪ್ರಕರಣ (Kogilu Demolition Case) ಈಗ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಈ ವಿಚಾರದಲ್ಲೀಗ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ (KC Venugopal) ಅವರ ಎಂಟ್ರಿಯಾಗಿದ್ದು, ಕೇರಳ ಲಾಭಿಗೆ ಮುಂದಾದ್ರಾ? ಕೇರಳ ವಿಧಾನಸಭಾ ಚುನಾವಣಾ ಭೀತಿಯಿಂದ ಸಿಎಂ, ಡಿಸಿಎಂ ಮೇಲೆ ಒತ್ತಡ ಹೇರಿದ್ರಾ ಅನ್ನೋ ಪ್ರಶ್ನೆಯೂ ಮೂಡಿದೆ.

ಕೋಗಿಲು ಲೇಔಟ್‌ನಲ್ಲಿ ಅಕ್ರಮ ಮನೆ, ಶೆಡ್‌ಗಳ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಎಕ್ಸ್ ಖಾತೆಯಲ್ಲಿ ಕೆ.ಸಿ ವೇಣುಗೋಪಾಲ್ ಪೋಸ್ಟ್ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಉತ್ತರ ಪ್ರದೇಶದಂತೆ ಬುಲ್ಡೋಜರ್‌ ಬಳಸಿ ಮುಸ್ಲಿಮರ ಮನೆ ಧ್ವಂಸ – ಕರ್ನಾಟಕದ ವಿರುದ್ಧ ಕೇರಳ ಸಿಎಂ ಕೆಂಡಾಮಂಡಲ

ತೆರವು ಬಗ್ಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಜೊತೆಗೆ ಚರ್ಚಿಸಿದ್ದೇನೆ. ಮಾನವೀಯತೆ, ಎಚ್ಚರಿಕೆಯಿಂದ, ಸೂಕ್ಷ್ಮತೆಯಿಂದ ಮತ್ತು ಸಹಾನುಭೂತಿಯಿಂದ ಕ್ರಮ ಕೈಗೊಳ್ಳಬೇಕಾಗಿತ್ತು ಎಂಬ ಎಐಸಿಸಿಯ ಗಂಭೀರ ಕಳವಳವನ್ನು ಅವರು ತಿಳಿಸಿದ್ರು. ಸಂತ್ರಸ್ತ ಕುಟುಂಬಗಳೊಂದಿಗೆ ವೈಯಕ್ತಿಕವಾಗಿ ಸಂವಹನ ನಡೆಸುವುದಾಗಿ, ಕುಂದುಕೊರತೆಗಳನ್ನ ಪರಿಹರಿಸುವುದಾಗಿ, ಪುನರ್ವಸತಿ ಮತ್ತು ಪರಿಹಾರವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ ವೇಣುಗೋಪಾಲ್.

ಕರ್ನಾಟಕ ವಿರೋಧಿ ನಡೆಗೆ ಜನಾಕ್ರೋಶ
ಕೆ.ಸಿ ವೇಣುಗೋಪಾಲ್ ಅವರ ಈ ನಡೆಯಿಂದ ಕೇರಳ (Kerala) ಲಾಭಿಗೆ ಮುಂದಾದ್ರಾ ಅನ್ನೋ ಪ್ರಶ್ನೆ ಎದ್ದಿದೆ. ಜೊತೆಗೆ ಕಾಂಗ್ರೆಸ್ ಪಕ್ಷದ ಕರ್ನಾಟಕ ವಿರೋಧಿ ನಡೆಗೆ ಜನಾಕ್ರೋಶ ಕೂಡ ವ್ಯಕ್ತವಾಗಿದೆ. ಇದನ್ನೂ ಓದಿ: ಆಪರೇಷನ್‌ ಆಘಾಟ್‌ 3.0 – ದೆಹಲಿ ಪೊಲೀಸರಿಂದ 600ಕ್ಕೂ ಹೆಚ್ಚು ಮಂದಿ ಬಂಧನ

ಸಂಕಷ್ಟ ಬಂದಾಗೆಲ್ಲ ಕರ್ನಾಟಕದಿಂದ ನೆರವು
ಕೇರಳಕ್ಕೆ ಸಂಕಷ್ಟ ಬಂದಾಗೆಲ್ಲ ಕರ್ನಾಟಕ ನೆರವಿನ ಹಸ್ತ ಚಾಚಿರುವುದು ಇಲ್ಲಿ ಸ್ಮರಣೀಯ. ವಯನಾಡಿನಲ್ಲಿ ಭೂಕುಸಿತ ಸಂಭವಿಸಿದಾಗ ಕರ್ನಾಟಕ ಸರ್ಕಾರ 100 ಮನೆಗಳ ನೆರವು ಘೋಷಿಸಿತು. ವಯನಾಡಿನಲ್ಲಿ ಆನೇ ತುಳಿತಕ್ಕೆ ಅಲ್ಲಿನ ವ್ಯಕ್ತಿ ಬಲಿಯಾದಾಗ ಕರ್ನಾಟಕ ಅರಣ್ಯ ಇಲಾಖೆ 15 ಲಕ್ಷ ರೂ. ಪರಿಹಾರ ನೀಡಿತ್ತು. ಇದೀಗ ಮುಂಬರುವ ಕೇರಳ ವಿಧಾನಸಭಾ ಚುನಾವಣಾ ಭೀತಿಯಿಂದ ಕಾಂಗ್ರೆಸ್ ಕರ್ನಾಟಕ ವಿರೋಧಿ ನಡೆಗೆ ಮುಂದಾಗಿರುವುದು ಖಂಡನೀಯ.

ಮೂಗು ತೂರಿಸಿದ ಕೇರಳ; ಪ್ರಕರಣದಲ್ಲಿ ಆಗಿದ್ದೇನು?
ಯಲಹಂಕದ ಕೋಗಿಲು ಲೇಔಟ್‌ನಲ್ಲಿ ಇತ್ತೀಚೆಗಷ್ಟೇ ಜಿಬಿಎ ತೆರವು ಕಾರ್ಯಾಚರಣೆ ನಡೆಸಿತ್ತು. ಕೋಗಿಲು ಬಂಡೆ ಬಳಿ 80 ಕೋಟಿ ಮೌಲ್ಯದ ಗೋಮಾಳ ಜಾಗವನ್ನ ಜಿಲ್ಲಾಧಿಕಾರಿಗಳು ಬಿಬಿಎಂಪಿಯ ಘನತ್ಯಾಜ್ಯ ವಿಭಾಗಕ್ಕೆ ಕೊಟ್ಟಿದ್ದರು. ಈ ಜಾಗದಲ್ಲಿ ಅನಧಿಕೃತವಾಗಿ ಮುಸ್ಲಿಮರು ವಾಸವಿದ್ದ 200ಕ್ಕೂ ಹೆಚ್ಚು ಮನೆಗಳನ್ನ ಜಿಬಿಎ ತೆರವು ಮಾಡಿತ್ತು. ಈ ವಿಚಾರವಾಗಿ ಸಂತ್ರಸ್ತರು ಕಂದಾಯ ಸಚಿವ ಕೃಷ್ಣಬೈರೇಗೌಡ ನಿವಾಸಕ್ಕೆ ಮುತ್ತಿಗೆ ಯತ್ನವನ್ನೂ ಮಾಡಿದ್ದರು. ಇದೀಗ ಕೇರಳ ಕ್ಯಾತೆ ತೆಗೆದಿದೆ. ಇದನ್ನೂ ಓದಿ: ನರೇಗಾ ರದ್ದತಿ ವಿರುದ್ಧ ದೇಶದ್ಯಾಂತ ಹೋರಾಟಕ್ಕೆ ಕಾಂಗ್ರೆಸ್‌ ತೀರ್ಮಾನ

ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಕೇರಳ ಸಿಎಂ ಪಿಣರಾಯಿ ವಿಜಯ್, ಉತ್ತರ ಪ್ರದೇಶ ರೀತಿ ಕರ್ನಾಟಕ ಕೂಡ ಬುಲ್ಡೋಜರ್ ನ್ಯಾಯ ಅನುಸರಿಸ್ತಿದೆ. ಉತ್ತರ ಭಾರತದಲ್ಲಿ ಹಿಂದೆ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ನಡೆಯುತ್ತಿದ್ದ ರಾಜಕೀಯ ದಾಳಿ ಈಗ ದಕ್ಷಿಣಕ್ಕೂ ಹರಡುತ್ತಿದೆ ಎಂಬುವುದನ್ನು ಈ ಘಟನೆಯು ಬಿಂಬಿಸುತ್ತದೆ. ಸಂಘ ಪರಿವಾರದ ಅಲ್ಪಸಂಖ್ಯಾತರ ವಿರೋಧಿ ನೀತಿಯನ್ನು ಕರ್ನಾಟಕದ ಕಾಂಗ್ರೆಸ್ ಸರ್ಕಾರ ಕೂಡ ಅನುಸರಿಸಿದೆ ಎಂದು ಪೋಸ್ಟ್ ಮಾಡಿ ಟೀಕಿಸಿದ್ದರು.

ಇದರ ಬೆನ್ನಲ್ಲೇ ಕೇರಳದ ಸಂಸದ ಎ.ಎ. ರಹೀಂ ಕೋಗಿಲು ಲೇಔಟ್‌ಗೇ ಭೇಟಿ ನೀಡಿ ಪರಿಶೀಲಿಸಿ, ಸಂತ್ರಸ್ತರ ಜೊತೆ ಮಾತನಾಡಿ, ಕರ್ನಾಟಕ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಪಿಣರಾಯಿ ವಿಜಯ್ ಟ್ವೀಟ್ ಬೆನ್ನಲ್ಲೇ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಡಿಸಿಎಂ ಡಿಕೆಶಿಗೆ ಕರೆ ಮಾಡಿ ಏನಿದು ಘಟನೆ..? ಅಂತ ವರದಿ ಕೇಳಿದ್ದರು.

ಇದಕ್ಕೆ ಸಿಎಂ ಸಿದ್ದರಾಮಯ್ಯ ಕೂಡ ಪ್ರತಿಕ್ರಿಯಿಸಿ, ವಾಸ ಮಾಡೋಕೆ ಯೋಗ್ಯವಾದ ಸ್ಥಳ ಅದಲ್ಲ. ಮಾನವೀಯತೆ ದೃಷ್ಟಿಯಲ್ಲಿ ಬೇರೆ ಕಡೆ ವ್ಯವಸ್ಥೆ ಮಾಡ್ತೇವೆ ಅಂದಿದ್ದರು. ಇನ್ನು ಡಿಕೆ ಶಿವಕುಮಾರ್, ಉತ್ತರ ಕೊಟ್ಟು, ಅದು ವೇಸ್ಟ್ ಡಂಪ್ ಮಾಡಲು ಮೀಸಲಿಟ್ಟ ಜಾಗ. ನಮ್ಮ ನಾಯಕರು, ಕೇರಳದವರಿಗೆ ಮಾಹಿತಿ ಕೊಟ್ಟಿದ್ದೇವೆ. ಪಿಣರಾಯಿ ರಾಜಕೀಯ ಮಾಡ್ತಿದ್ದಾರೆ ಅಂದಿದ್ದಾರೆ.

Share This Article