ಭಾರತದ ಭೂಮಿಗೆ ಎಂಥ ರೋಗರುಜಿನ ಬಂದರೂ ತಡೆಯುವ ಶಕ್ತಿಯಿದೆ: ಕೊರೊನಾ ಬಗ್ಗೆ ಕೋಡಿಶ್ರೀ ಭವಿಷ್ಯ

Public TV
2 Min Read

ಹಾಸನ: ಈಗ ಬಂದಿರುವ ಕಾಯಿಲೆ ಮುಂದೆ ಜಡತ್ವದಂಥ ಕಲ್ಲು, ಮರಕ್ಕೂ ಆವರಿಸಲಿದೆ. ಆದರೆ ಭಾರತದ ಭೂಮಿಗೆ ಎಂಥ ರೋಗರುಜಿನ ಬಂದರೂ ತಡೆಯುವ ಶಕ್ತಿಯಿದೆ ಎಂದು ಕೊರೊನಾ ವೈರಸ್ ಬಗ್ಗೆ ಕೋಡಿಶ್ರೀಗಳು ಭವಿಷ್ಯ ನುಡಿದಿದ್ದಾರೆ.

ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಬಳಿ ಇರುವ ಕೋಡಿಮಠದಲ್ಲಿ ಮಾತನಾಡಿದ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು, ಋಷಿ ಮುನಿಗಳ ಮಂತ್ರ, ಜಪ ತಪ ಶಕ್ತಿ ನಮ್ಮ ದೇಶದ ರಕ್ಷಣೆ ಮಾಡಿಕೊಂಡು ಬರುತ್ತಿದೆ. ಈ ತಂತ್ರಯುಗದಲ್ಲಿ ಮಾನವ ಎಲ್ಲಾ ಪಡೆದುಕೊಂಡ, ಆದರೆ ಶಾಂತಿ ಪಡೆಯಲಿಲ್ಲ. ಕೊರೊನಾದಂತ ಭಯಂಕರ ರೋಗಕ್ಕೆ ಮನುಷ್ಯ ಹೆದರದೆ ನಂಬಿಕೆ ಉಳಿಸಿಕೊಂಡು ದೇವರ ಮೇಲೆ ಸಂಕಲ್ಪ ಮಾಡಬೇಕು. ಆಗ ಅವನಿಗೆ ಏನೂ ಆಗುವುದಿಲ್ಲ ಎಂದು ಶ್ರೀಗಳು ತಿಳಿಸಿದರು.

ಇಂದು ಈ ರೀತಿಯ ಘಟನೆಗಳಿಗೆ ಕಾರಣ ಪ್ರಕೃತಿಯನ್ನು ಹಾಳು ಮಾಡಿದ್ದು, ಮನುಷ್ಯ ಎಲ್ಲಿ ಕಳೆದುಕೊಂಡಿದ್ದಾನೆ ಅಲ್ಲೇ ಹುಡುಕಬೇಕು. ಪ್ರಕೃತಿಯಿಂದಲೇ ಕಳೆದುಕೊಂಡಿದ್ದಾನೆ ಅಲ್ಲಿಯೇ ಸಮಸ್ಯೆಗೆ ಪರಿಹಾರ ಹುಡುಕಬೇಕು ಎಂದು ಶ್ರೀಗಳು ತಿಳಿಸಿದರು. ಕೊರೊನಾ ವೈರಸ್ ಋಷಿ ಮುನಿ ಕೊಟ್ಟ ಗಿಡಮೂಲಿಕೆ, ಹಳ್ಳಿನಾಟಿ ವೈದ್ಯರಿಂದಲೂ ಹುಷರಾಗುತ್ತೆ ಅಂತವರನ್ನ ಹುಡುಕಬೇಕು. ಈಗ ಬಂದ ಕಾಯಿಲೆ ರೀತಿ ಮುಂದೆ ಜಡತ್ವದಂತ ಕಲ್ಲು, ಮರಕ್ಕೂ ರೋಗ ಆವರಿಸುತ್ತೆ. ದೈವ ಮತ್ತು ಪ್ರಕೃತಿಯನ್ನು ಕಾಪಾಡಿದರೆ ಮಾತ್ರ ಉಳಿವು ಸಾಧ್ಯ. ಅನ್ನ ಭೂಮಿಯಿಂದ ಬಂದು ನಮಗೆ ಶಕ್ತಿ ಸಿಕ್ಕಿದೆ. ಆ ಭೂಮಿಯನ್ನೆ ನಾವು ಬಿಟ್ಟಿಲ್ಲ. ಹೀಗಾಗಿ ಈ ರೋಗಗಳೆಲ್ಲಾ ಮನುಷ್ಯ ಪ್ರಕೃತಿ ಮೇಲೆ ಮಾಡುತ್ತಿರುವ ದಬ್ಬಾಳಿಕೆಯಿಂದ ಬಂದಿರೋದು ಎಂದು ಬೇಸರ ವ್ಯಕ್ತಪಡಿಸಿದರು.

ಅರಣ್ಯ ನಾಶ ಮಾಡಿ ನಾಡಿನಲ್ಲಿ ಸುಖವಿಲ್ಲದಂತಾಗಿದೆ. ಹಿಂದೆ ಭೂಮಿ ಮೇಲೆ ಮನುಷ್ಯ ಮಲಗುತ್ತಿದ್ದ. ಆದರೆ ಇಂದು ಮನುಷ್ಯ ಉಪ್ಪರಿಗೆ ಮೇಲೆ ಮಲಗುತ್ತಿದ್ದಾನೆ. ಇದರಿಂದ ಮನುಷ್ಯ ಮತ್ತು ಭೂಮಿ ಅಂತರ ಕಮ್ಮಿ ಆಗಿದೆ. ಭೂಮಿ ಬಿಟ್ಟು ಮನುಷ್ಯ ಏನೂ ಮಾಡಲಾಗದು. ಸಾವಿರ ಸಾಗರ ಒಬ್ಬ ಮಗನಿಗೆ ಸಮಾನ. ಸಾವಿರ ಮಗ ಒಂದು ಮರಕ್ಕೆ ಸಮಾನ. ಅಂತ ಮರವನ್ನ ನಾವು ಕಾಪಾಡಲೇಬೇಕು. ಮನುಷ್ಯ ಧ್ಯಾನಸ್ಥನಾಗಿ ಎಲ್ಲವನ್ನೂ ಜಯಿಸಬೇಕು ಎಂದು ಕೋಡಿಶ್ರೀಗಳು ಕೊರೊನಾದಂತ ರೋಗ ತಡೆಯುವ ಬಗ್ಗೆ ತಿಳಿ ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *