ಕೊಡಗಿನಲ್ಲಿ ಅಂತ್ಯ ಕ್ರಿಯೆಗೆ ಹಣ – ಪ್ರತಾಪ್ ಸಿಂಹ ಸ್ಪಷ್ಟೀಕರಣ

Public TV
1 Min Read

ಕೊಡಗು: ಪ್ರವಾಹಕ್ಕೆ ಸಿಕ್ಕಿ ಸಾವನ್ನಪ್ಪಿದವರ ಅಂತ್ಯ ಕ್ರಿಯೆ ಮಾಡಲು 8 ಸಾವಿರ ಹಣ ಕೇಳುತ್ತಿದ್ದಾರೆ ಎಂದು ಒಂದು ಕುಟುಂಬ ಆರೋಪ ಮಾಡಿತ್ತು. ಈಗ ಈ ವಿಚಾರದ ಬಗ್ಗೆ ಸ್ಪಷ್ಟೀಕರಣ ನೀಡಿರುವ ಸಂಸದ ಪ್ರತಾಪ್ ಸಿಂಹ ಈ ವಿಡಿಯೋ ಇವತ್ತಿನದಲ್ಲ ಅ ಕುಟುಂಬಕ್ಕೆ ಬೆಳಗ್ಗೆ ಸರ್ಕಾರದಿಂದ ಹಣ ನೀಡಲಾಗಿದೆ ಎಂದು ಹೇಳಿದ್ದಾರೆ.

ಈ ಬಗ್ಗೆ ಫೇಸ್‍ಬುಕ್‍ನಲ್ಲಿ ಪೋಸ್ಟ್ ವೊಂದನ್ನು ಹಾಕಿರುವ ಪ್ರತಾಪ್ ಸಿಂಹ, ಈ ವಿಡಿಯೋ ಇಂದು ಹರಿದಾಡುತ್ತಿದೆ. ಆದರೆ ನಿನ್ನೆ 3 ಗಂಟೆಗೆ ಅಂತ್ಯ ಸಂಸ್ಕಾರ ನಡೆದಿದ್ದು, ಮಮತಾ ಮತ್ತು ನಿಖಿತಾ ಅವರ ಕುಟುಂಬಕ್ಕೆ ಕೇಂದ್ರ ಸರ್ಕಾರದಿಂದ ತಲಾ 4 ಲಕ್ಷ ರೂ. ಹಾಗೂ ರಾಜ್ಯದಿಂದ 1 ಲಕ್ಷದ (ಒಟ್ಟು 10 ಲಕ್ಷ ರೂ.) ಚೆಕ್ಕನ್ನು ಇಂದು ಬೆಳಗ್ಗೆಯೇ ನೀಡಲಾಗಿದೆ. ಯಾರೂ ಹಣ ಕೇಳಿದ ವಿಚಾರವನ್ನು ಗಮನಕ್ಕೆ ತಂದಿರಲಿಲ್ಲ, ಬಂದ ಕೂಡಲೇ ಎಫ್‍ಐರ್ ಮಾಡಿಸಿದ್ದೇವೆ ಎಂದಿದ್ದಾರೆ.

ನನ್ನ ಕ್ಷೇತ್ರದ 4 ತಾಲೂಕುಗಳು ಜಲಾವೃತಗೊಂಡಿವೆ. ನಾನು ಒಂದೇ ಕಡೆ ಇರುವುದಕ್ಕಾಗುವುದಿಲ್ಲ, ಲೋಪಗಳಿದ್ದರೆ ಆರೋಪದ ಬದಲು ಗಮನಕ್ಕೆ ತನ್ನಿ. ಸ್ಪಂದಿಸದಿದ್ದರೆ, ಮನಸ್ಸೋಯಿಚ್ಛೆ ಮಾತಾಡಿ, ಪರವಾಗಿಲ್ಲ. ನಮ್ಮ ಇಬ್ಬರು ಶಾಸಕರಾದ ಬೋಪಯ್ಯ ಮತ್ತು ರಂಜನ್ ಅವರು ಕಾರ್ಯಕರ್ತರ ಪಡೆಯೊಂದಿಗೆ ಕೊಡಗಿನಲ್ಲಿ ಪರಿಹಾರ ಕಾರ್ಯದಲ್ಲಿ ತೊಡಗಿದ್ದು, ನೀನು ಹುಣಸೂರು ಪಿರಿಯಾಪಟ್ಟಣದ ಬಗ್ಗೆ ಗಮನಹರಿಸು ಎಂದು ಬೋಪಯ್ಯನವರು ಸೂಚಿಸಿದ ಕಾರಣ ಇಲ್ಲಿ ಹೆಚ್ಚು ಸಮಯ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ.

ಯಾರೂ ತಪ್ಪು ಭಾವಿಸಬೇಡಿ. ನಮ್ಮ ಮುಖ್ಯಮಂತ್ರಿ ಯಡಿಯೂರಪ್ಪನವರು ಮೈಸೂರು-ಚಾಮರಾಜನಗದ ವರದಿ ಕೊಡುವಂತೆ ಆದೇಶ ಮಾಡಿದ್ದಾರೆ. ನಾವ್ಯಾರೂ ಸಬೂಬು ಹೇಳುತ್ತಾ ಕುಳಿತಿಲ್ಲ ಎಂದು ಬರೆದುಕೊಂಡಿದ್ದಾರೆ.

ಕೊಡಗಿನ ಪ್ರವಾಹದಲ್ಲಿ ಸಾವನ್ನಪ್ಪಿದವರನ್ನು ಸುಡಲು ಸ್ಮಶಾನದವರು 8 ಸಾವಿರ ಕೇಳಿದ್ದಾರೆ. ಇದರಿಂದ ಮನನೊಂದು ಕುಟುಬಂದವರು ಮನೆ-ಮಠ ಕಳೆದುಕೊಂಡು ಉಟ್ಟ ಬಟ್ಟೆಯಲ್ಲೇ ನಿರಾಶ್ರಿತ ಕೇಂದ್ರಕ್ಕೆ ಬಂದಿದ್ದೇವೆ ಆದರೆ, ಹೀಗಿರುವಾಗ ನಮ್ಮ ಕುಟುಂಬಸ್ಥರ ಶವ ಸಂಸ್ಕಾರಕ್ಕೂ ಹಣ ಕೇಳುತ್ತಿದ್ದಾರೆ ಎಲ್ಲಿಂದ ತರುವುದು ಎಂದು ಗೋಳಾಡಿದ್ದರು. ಸಾವಿನಲ್ಲೂ ಹಣ ಮಾಡಲು ನೋಡುತ್ತಾರೆ ಎಂದು ಮೃತರ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದರು.

Share This Article
Leave a Comment

Leave a Reply

Your email address will not be published. Required fields are marked *