ಕೊಡಗಿನಲ್ಲಿ ಕೊಂಚ ಕಡಿಮೆಯಾದ ವರುಣನ ಅರ್ಭಟ- ನಿಲ್ಲದ ಭೂಕುಸಿತ

Public TV
1 Min Read

– ನೆರವಿನ ನಿರೀಕ್ಷೆಯಲ್ಲಿ ಜನ

ಕೊಡಗು: ಜಿಲ್ಲೆಯನಲ್ಲಿ ಮಳೆ ಕೊಂಚ ತಗ್ಗಿದ್ದರೂ ಮಳೆಯ ಅವಾಂತರ ಮಾತ್ರ ನಿಂತಿಲ್ಲ. ಅಲ್ಲಲ್ಲಿ ಸಣ್ಣ ಪ್ರಮಾಣದಲ್ಲಿ ಭೂಕುಸಿತ, ಮರಗಳು, ವಿದ್ಯುತ್ ಕಂಬಗಳು ಧರೆಗುರುಳುತ್ತಿದೆ. ಪರಿಣಾಮ ಜಿಲ್ಲೆಯ ಜನತೆ ಮಾತ್ರ ಆತಂಕದಲ್ಲಿಯೇ ದಿನದೂಡುತ್ತಿದ್ದಾರೆ.

ನಿನ್ನೆಯವರೆಗೆ ಸುರಿದ ಮಳೆಯಿಂದಾಗಿ ಅಪಾರ ಪ್ರಮಾಣದ ನಷ್ಟವಾಗಿದ್ದು, ಬೆಳೆ, ಆಸ್ತಿ-ಪಾಸ್ತಿ ಹಾನಿಯಿಂದ ಕಂಗಾಲಾಗಿರುವ ಜನತೆ ಮುಂದೇನೂ ತಿಳಿಯದ ಸ್ಥಿತಿಗೆ ಬಂದು ತಲುಪಿಸಿದ್ದಾರೆ. ಹಲವು ಮನೆಗಳಿಗೆ ನೀರು ನುಗ್ಗಿದ ಪರಿಣಾಮ ದಿನಬಳಕೆ ವಸ್ತುಗಳೆಲ್ಲ ನೀರು ಪಾಲಾಗಿದೆ. ಮರುಬಳಕೆಗೂ ಉಪಯೋಗವಿಲ್ಲದ ಸ್ಥಿತಿಯಲ್ಲಿರುವ ಸಾಮಾಗ್ರಿಗಳು ನೀರಲ್ಲಿ ತೇಲಾಡುತ್ತಿದೆ. ಭೂಕುಸಿತ, ಪ್ರವಾಹದಿಂದ ತತ್ತರಿಸಿದ ಬೆಳೆಗಾರರು ನೆರವಿನ ನಿರೀಕ್ಷೆಯಲ್ಲಿದ್ದಾರೆ.

ಕಳೆದ ಬಾರಿಯ ವಿಕೋಪದಿಂದಲೇ ಚೇತರಿಸಿಕೊಳ್ಳದ ಜಿಲ್ಲೆಯ ಜನತೆಗೆ ಈ ಬಾರಿ ವರುಣ ಗಾಯದ ಮೇಲೆ ಮತ್ತೆ ಬರೆ ಎಳೆದಿದ್ದಾನೆ. ನಾಟಿ ಕಾರ್ಯಕ್ಕೆ ತಯಾರಿಯಲ್ಲಿದ್ದವರಿಗೆ ಪ್ರವಾಹದ ಆಘಾತ ಉಂಟಾಗಿದ್ದು, ಗದ್ದೆಗಳಲ್ಲಿ ಸಂಗ್ರಹಗೊಂಡಿರುವ ಭೂಕುಸಿತದ ಮಣ್ಣು ಜನತೆಯನ್ನು ಕಂಗೆಡಿಸಿದೆ. ನದಿಪಾತ್ರದ ಸ್ಥಳಗಳಲ್ಲಿ ಭತ್ತದ ಗದ್ದೆ ಮೇಲೆ ನೀರು ನಿಂತು ಮೂರಕ್ಕೂ ಹೆಚ್ಚು ದಿನಗಳಾಗಿದೆ. ಇದರ ನಡುವೆ ಮೂಕ ಪ್ರಾಣಿಗಳು ರೋಧಿಸುವ ದೃಶ್ಯ ಮನಕಲಕುತ್ತಿದ್ದು, ಹಲವು ಜಾನುವಾರುಗಳು ಪ್ರವಾಹಕ್ಕೆ ಬಲಿಯಾಗಿದೆ.

ಸದ್ಯ ಮೂರು ತಾಲೂಕಿನಲ್ಲಿಯೂ ಜಾನುವಾರು ರಕ್ಷಣೆಗೆ ಕ್ರಮ ವಹಿಸಲಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಸ್ಥಳಕ್ಕಾಗಮಿಸಲು ಮನವಿ ಮಾಡುತ್ತಿರುವ ಸಂತ್ರಸ್ತರು, ಸರ್ಕಾರದ ಮೇಲೆ ಮಹಾ ನಿರೀಕ್ಷೆ ಇಟ್ಟು ಪರಿಹಾರಕ್ಕೆ ಕಾಯುತ್ತಿದ್ದಾರೆ. ಮುಂಜಾನೆಯಿಂದ ಕೊಂಚ ಬಿಡುವು ನೀಡುತ್ತಾ, ಅಲ್ಲಲ್ಲಿ ಸಾಧಾರಣ ಮಳೆಯಾಗುತ್ತಿದ್ದು, ಮಡಿಕೇರಿ ನಗರ ಸೇರಿದಂತೆ ಗಾಳಿಬೀಡು, ವಣಚಲು, ಭಾಗಮಂಡಲ, ನಾಪೋಕ್ಲು, ಚೇರಂಬಾಣೆ, ಜೋಡುಪಾಲ, ಸಂಪಾಜೆ, ಕಾಟಕೇರಿ, ತಾಳತ್ತ್‍ಮನೆ, ಮದೆನಾಡು ವ್ಯಾಪ್ತಿಯಲ್ಲಿ ಸಾಧಾರಣ ಮಳೆಯಾಗಿದೆ.

ಕಳೆದ ವರ್ಷ ಪ್ರಕೃತಿ ವಿಕೋಪಕ್ಕೆ ತುತ್ತಾಗಿದ್ದ ಮೇಘಾತ್ತಾಳು ಗ್ರಾಮದ ರಸ್ತೆ ಪ್ರವಾಹ ಹಿನ್ನೆಲೆಯಲ್ಲಿ ಬರೆ ಕುಸಿದು ಸಂಪರ್ಕ ಕಡಿತಗೊಂಡಿದೆ. ಮರದ ನಾಟಗಳು ರಸ್ತೆಯಲ್ಲಿ ಆವರಿಸಿಕೊಂಡು ಸಂಚಾರಕ್ಕೆ ತೊಂದರೆಯಾಗುತ್ತಿದೆ. ಇತ್ತ ವಿರಾಜಪೇಟೆ ಗೋಣಿಕೊಪ್ಪ ಭಾಗದಲ್ಲಿ ರಕ್ಷಣಾ ಕಾರ್ಯಗಳು ಭರದಿಂದ ಸಾಗುತ್ತಿದ್ದು, ಮಳೆ ಕೊಂಚ ಕಡಿಯಾಗುತ್ತಿರುವುದರಿಂದ ಗೋಣಿಕೊಪ್ಪ ನಗರ ಸಹಜ ಸ್ಥಿತಿಯತ್ತ ಮರಳುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *