ಸಾಧುಗಳ ವೇಷ ಧರಿಸಿ ಹಣ, ಮೊಬೈಲ್ ದೋಚುತ್ತಿದ್ದ ನಾಲ್ವರು ಖದೀಮರು ಅಂದರ್

Public TV
1 Min Read

ಮಡಿಕೇರಿ: ನಾಗಾ ಸಾಧುಗಳ ವೇಷ ಧರಿಸಿ ಹಣ, ಮೊಬೈಲ್ ದೋಚುತ್ತಿದ್ದ ನಾಲ್ವರು ಖತರ್ನಾಕ್ ಖದೀಮರನ್ನು ಕೊಡಗು ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ.

ರಾಜಸ್ಥಾನ ಮೂಲದ ನಾಗನಾಥ್, ಮಜೂರ್ ನಾಥ್, ಸುರಬ್ ನಾಥ್ ಮತ್ತು ಉಮೇಶ್ ನಾಥ್ ಬಂಧಿತ ಕಳ್ಳರು. ಆರೋಪಿಗಳು ಜಿಲ್ಲೆಯ ವಿವಿಧ ಕಡೆ ತಮ್ಮ ಕೈಚಳಕ ತೋರಿದ್ದರು. ಆರೋಪಿಗಳಿ ಬಲೆ ಬೀಸಿದ್ದ ಸೋಮವಾರಪೇಟೆ ತಾಲೂಕಿನ ಕುಶಾಲನಗರ ಪೊಲೀಸರು ಸೋಮವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳು ನಾಗಾ ಸಾಧುಗಳ ವೇಷ ಧರಿಸಿ ಇಬ್ಬರು ಉದ್ಯಮಿಗಳನ್ನು ಮರುಳು ಮಾಡಿ ನಗದು ಹಾಗೂ ಭಾರೀ ಮೌಲ್ಯದ ಮೊಬೈಲ್‍ಗಳನ್ನು ಎಗರಿಸಿದ್ದರು. ಕುಶಾಲನಗರದ ಜನಶ್ರೀ ಫೈನಾನ್ಸ್ ಮಾಲೀಕ ನಾಗೇಗೌಡ ಅವರಿಗೆ ನವೆಂಬರ್ 24ರಂದು ಕೆಂಪು ಪುಡಿ ನೀಡಿದ್ದರು. ಬಳಿಕ ತಾವು ಹೇಳಿದ ಜಾಗಕ್ಕೆ ಬರುವಂತೆ ಮಾಡಿ 25 ಸಾವಿರ ಮೌಲ್ಯದ ಮೊಬೈಲ್ ಹಾಗೂ ಒಂದೂವರೆ ಸಾವಿರ ರೂಪಾಯಿ ನಗದು ಎಗರಿಸಿದ್ದರು.

ಇದಕ್ಕೂ ಹದಿನೈದು ದಿನಗಳ ಮುನ್ನ ಫೋಟೊ ಶಾಫ್ ಮಾಲೀಕ ನಾಗೇಶ್ ಅವರಿಗೂ ಇದೇ ರೀತಿ ಮಾಡಿದ್ದರು. ಇದರಿಂದ ಎಚ್ಚೆತ್ತುಕೊಂಡ ಕುಶಾಲನಗರ ಸಿಪಿಐ ಕುಮಾರ್ ಆರಾಧ್ಯ ಅವರ ನೇತೃತ್ವದಲ್ಲಿ ತಂಡ ರಚಿಸಿ, ಆರೋಪಿಗಳಿಗೆ ಶೋಧಕಾರ್ಯ ನಡೆದಿತ್ತು. ಸೋಮವಾರ ಕುಶಾಲನಗರದಲ್ಲಿ ಆರೋಪಿಗಳು ಇರುವಾಗ ಜಾಗದ ಬಗ್ಗೆ ಮಾಹಿತಿ ಸಿಕ್ಕಿತ್ತು. ತಕ್ಷಣವೇ ಕಾರ್ಯಾಚರಣೆ ಚುರುಕುಕೊಳಿಸಿದ ಪೊಲೀಸರು ನ್ವಾರನ್ನೂ ಬಂಧಿಸಿ, ಕೃತ್ಯಕ್ಕೆ ಬಳಸುತ್ತಿದ್ದ ಕಾರು ಹಾಗೂ ರಸಾಯನಿಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಸಂಬಂಧ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆರೋಪಿಗಳು ಕುಶಾಲನಗರ ಅಷ್ಟೇ ಅಲ್ಲದೆ ಜಿಲ್ಲೆ ಹಾಗೂ ರಾಜ್ಯದ ವಿವಿಧೆಡೆ ಇದೇ ರೀತಿ ಕೃತ್ಯ ಎಸಗಿರಬಹುದು ಎಂಬ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *