‘ಕೊಡಗಿಗೆ ನಮ್ಮ ಕೊಡುಗೆ’ ಆದಿಚುಂಚನಗಿರಿ ಮಠದಿಂದ ಪಾದಯಾತ್ರೆ

Public TV
1 Min Read

ಬೆಂಗಳೂರು: ಮಹಾಮಳೆಯಿಂದ ತತ್ತರಿಸಿದ್ದ ಕೊಡಗು ನೆರೆ ಸಂತ್ರಸ್ತರ ನೆರವಿಗೆ ನಗರದಲ್ಲಿ ಇಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದಿಂದ ದೇಣಿಗೆ ಸಂಗ್ರಹ ಮಾಡಲಾಯಿತು. ಮಠದ ನಿರ್ಮಲಾನಂದ ಸ್ವಾಮೀಜಿ ಜೊತೆಗೆ ಹಲವು ರಾಜಕಾರಣಿಗಳು, ಗಣ್ಯರು, ಉದ್ಯಮಿಗಳು ಹಾಗೂ ವಿದ್ಯಾರ್ಥಿಗಳು ಹೆಜ್ಜೆ ಹಾಕಿ ದೇಣಿಗೆ ಸಂಗ್ರಹಿಸಿದರು.

‘ಕೊಡಗಿಗೆ ನಮ್ಮ ಕೊಡುಗೆ’ ಎಂಬ ಹೆಸರಿನಲ್ಲಿ ಆರಂಭವಾದ ಪಾದಯಾತ್ರೆ ವಿಜಯನಗರ ಶಾಖಾ ಮಠದಿಂದ ಹಂಪಿನಗರದ ವರೆಗೂ ಬರೋಬ್ಬರಿ 4 ಕಿಮೀ ಪಾದಯಾತ್ರೆ ನಡೆಯಿತು. ಈ ವೇಳೆ ಮಾಜಿ ಸಚಿವ ವಿ.ಸೋಮಣ್ಣ 20 ಲಕ್ಷ ರೂ. ವಿಜಯನಗರ ಶಾಸಕ ಎಂ.ಕೃಷ್ಣಪ್ಪ 25 ಲಕ್ಷ ರೂ. ಶಾಸಕ ಗೋಪಾಲಯ್ಯ 2 ಲಕ್ಷ ರೂ. ಹಾಗೂ ನಮ್ಮವರು ಎಂಬ ತಂಡದಿಂದ 1 ಕೋಟಿ ರೂ. ದೇಣಿಗೆ ಸೇರಿದಂತೆ ಭಾರೀ ಮೊತ್ತದ ದೇಣಿಗೆ ಸಂಗ್ರಹ ಮಾಡಲಾಯಿತು.

ಪಾದಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ನಿರ್ಮಲಾನಂದ ಸ್ವಾಮೀಜಿ, ನಮ್ಮ ತ್ಯಾಗದಿಂದ ಮತ್ತೊಬ್ಬರಿಗೆ ಸಹಾಯ ಮಾಡಬೇಕೆಂಬ ಮನೋಭಾವ ಬೆಳೆಸಿಕೊಳ್ಳಬೇಕು. ಅಲ್ಲದೇ ಪ್ರಕೃತಿ ಮಾತೆಯ ರಕ್ಷಣೆಗೆ ಮುಂದಾಗಬೇಕು ಎಂದು ಕರೆ ನೀಡಿದರು.

ಕೊಡಗಿನ ಜನರ ಕಷ್ಟಕ್ಕೆ ಬೆಂಗಳೂರಿಗರ ಮನ ಮಿಡಿದಿದ್ದು, ಕೋಟಿಗಟ್ಟಲೇ ಹಣವನ್ನು ದಾನಿಗಳು ಇಂದು ಮಠದ ಪರಿಹಾರ ನಿಧಿಗೆ ನೀಡಿದ್ದಾರೆ. ಮಠದಿಂದ ಕೊಡಗಿಗೆ ಶಾಶ್ವತ ಪರಿಹಾರ ಕಲ್ಪಿಸುವ ಬಗ್ಗೆ ಆದಿಚುಂಚನಗಿರಿ ಮಠ ಯೋಜನೆ ತಯಾರಿಸಿ ದೇಣಿಗೆ ಹಣವನ್ನು ಸದ್ಬಳಕೆ ಮಾಡಿಕೊಳ್ಳಲಿದೆ ಎಂದು ಸ್ವಾಮೀಜಿ ತಿಳಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ಹೇಳಿಕೆ ನೀಡಿದ್ದ ಸಿಎಂ ಕುಮಾರಸ್ವಾಮಿ ಅವರು ಅನಿವಾರ್ಯ ಕಾರಣಗಳಿಂದ ಗೈರು ಹಾಜರಿ ಆಗಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *