ಸೈಕಲ್ ವಿಚಾರಕ್ಕೆ ಕಾಲೇಜು ವಿದ್ಯಾರ್ಥಿ ಕಿಡ್ನಾಪ್

Public TV
2 Min Read

ಕಲಬುರಗಿ: ಸೈಕಲ್ ವಿಚಾರದಲ್ಲಿ ಗಲಾಟೆ ನಡೆದು ಪಿಯುಸಿ ವಿದ್ಯಾರ್ಥಿಯನ್ನು ಅಪಹರಣ ಮಾಡಿಲಾಗಿದೆ ಎಂಬ ಆರೋಪ ವಿವಿ ಠಾಣಾ ವ್ಯಾಪ್ತಿಯಲ್ಲಿ ಕೇಳಿಬಂದಿದೆ. ಮೂರು ದಿನಗಳ ಹಿಂದೆ ಟ್ಯೂಷನ್‍ಗೆ ಹೋಗಿ ಬರುವುದಾಗಿ ಹೇಳಿ ಹೋದವ ಇಲ್ಲಿವರೆಗೆ ಮನೆಗೆ ಬಾರದ ಕಾರಣ ಪೋಷಕರು ಆತಂಕದಲ್ಲಿದ್ದಾರೆ.

ನಗರದ ಪ್ರತಿಷ್ಠಿತ ಕಾಲೇಜೊಂದರಲ್ಲಿ ಪಿಯುಸಿ ಸೈನ್ಸ್ ಓದುತ್ತಿರುವ ಸಂತೋಷ್ ಚೌವ್ಹಾಣ್(17) ಕಿಡ್ನಾಪ್ ಆಗಿರುವ ವಿದ್ಯಾರ್ಥಿ. ಕಲಬುರಗಿಯ ಶಹಬಾದ ರಸ್ತೆ ಮಾತಾ ಮಾಣಿಕೇಶ್ವರಿ ಕಾಲೋನಿ ನಿವಾಸಿಯಾದ ಸಂತೋಷ್, ಪ್ರತಿನಿತ್ಯ ಕಾಲೇಜು ಹಾಗೂ ಮನೆಗೆ ಓಡಾಡಲು ತನ್ನ ಸ್ನೇಹಿತನ ಬಳಿ ಮೂರು ಸಾವಿರಕ್ಕೆ ಸೈಕಲೊಂದನ್ನು ಖರೀದಿ ಮಾಡಿರುತ್ತಾನೆ. ನಂತರ ಅದೇ ಸೈಕಲ್ ಕಾಲೇಜಿಗೆ ತೆಗೆದುಕೊಂಡು ಹೋದಾಗ ಅದು ಕಳ್ಳತನ ಮಾಡಿರುವ ಸೈಕಲ್ ಎಂದು ತಿಳಿದುಬಂದಿದೆ. ನಿನ್ನೆ ಸ್ನೇಹಿತ ಸೈಕಲ್‍ನನ್ನು ಕದ್ದು ಮಾರಾಟ ಮಾಡಿದ್ದಾನೆ ಎಂದು ಸೈಕಲ್‍ನ ಮೂಲ ವಾರಸುದಾರ ಕಾಲೇಜ್‍ಗೆ ಬಂದಿದ್ದಾನೆ. ಈ ವೇಳೆ ಸಂತೋಷ್ ಜೊತೆ ಗಲಾಟೆ ಮಾಡಿ ಸೈಕಲ್ ತೆಗೆದುಕೊಂಡು ಹೋಗಿದ್ದಾನೆ. ಇದನ್ನೂ ಓದಿ: ತಾಯಿ ಕಳೆದುಕೊಂಡ ಮೂರೇ ತಿಂಗ್ಳಿಗೆ ಕೋಮು ದ್ವೇಷಕ್ಕೆ ತಂದೆ ಬಲಿ- ಅಜ್ಜಿ ಆಸರೆಯಲ್ಲಿರೋ ಯಶಸ್ ದಾನಿಗಳ ಮೊರೆ 

ನಂತರ ಅಂದು ಸಂಜೆ ಮನೆಯಿಂದ ರಾಜಾಪುರ ಬಡಾವಣೆಯಲ್ಲಿರುವ ಟ್ಯೂಷನ್‍ಗೆ ಹೋಗಿ ಬರುವುದಾಗಿ ಮನೆಯಿಂದ ಸಂತೋಷ ಹೋಗಿದ್ದು, ಮೂರು ದಿನವಾದರೂ ಮನೆಗೆ ಮರಳಿಲ್ಲ. ಮಾರ್ಗ ಮಧ್ಯೆ ದುಷ್ಕರ್ಮಿಗಳು ಸಂತೋಷ್‍ನನ್ನು ಕಿಡ್ನಾಪ್ ಮಾಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ಈ ಘಟನೆ ಮಾರ್ಚ್ 11 ರಂದು ನಡೆದಿದೆ.

ಕಿಡ್ನಾಪ್ ಮಾಡಿದ ದುಷ್ಕರ್ಮಿಗಳು ಸಂತೋಷ್‍ನ ನಂಬರ್‍ನಿಂದಲೇ ಕರೆ ಮಾಡಿದ್ದಾರೆ. ಈ ವೇಳೆ ಸಂತೋಷ್ ಸಹಾಯಕ್ಕಾಗಿ ಅಂಗಲಾಚುವ ಶಬ್ದ ಕೂಡಾ ಕೇಳಿಬಂದಿದೆ. ಕಾಲ್ ಕಟ್ ಆದ ನಂತರ ಮೊಬೈಲ್ ಸ್ವಿಚ್ ಆಫ್ ಮಾಡಲಾಗಿದೆ. ಯಾವುದೋ ದುರುದ್ದೇಶದಿಂದ ಸಂತೋಷ್‍ನನ್ನು ಕಿಡ್ನಾಪ್ ಮಾಡಲಾಗಿದೆ ಎಂದು ಆತನ ಸಹೋದರ ದೂರಿದ್ದಾನೆ.

ಸದ್ಯ ವಿಶ್ವವಿದ್ಯಾಲಯದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಾರ್ಯಪ್ರೌರುತ್ತರಾಗಿದ್ದಾರೆ. ಮಗ ಕಾಣೆಯಾಗಿ ಮೂರು ದಿನಗಳು ಕಳೆದರು ಸಹ ಪೊಲೀಸರು ಮಗನನ್ನು ಹುಡುಕಿಕೊಡಲು ಆಸಕ್ತಿ ತೋರುತ್ತಿಲ್ಲ ಎಂದು ಕಾಣೆಯಾದ ಯುವಕನ ತಾಯಿ ಆರೋಪಿಸಿದ್ದು, ಬೇಗ ನನ್ನ ಮಗನನ್ನು ಹುಡುಕಿಕೊಡಿ ಎಂದು ಅಂಗಲಾಚುತ್ತಿದ್ದಾರೆ. ಇದನ್ನೂ ಓದಿ: ‘ಜೇಮ್ಸ್’ ಜೊತೆ ‘ಬೈರಾಗಿ’ ಟೀಸರ್ – ಪುನೀತ್ ಹುಟ್ಟುಹಬ್ಬಕ್ಕೆ ಶಿವಣ್ಣನ ಝಲಕ್

 

Share This Article
Leave a Comment

Leave a Reply

Your email address will not be published. Required fields are marked *