ಭೋಪಾಲ್: ಶಾಲಾ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ 6 ವರ್ಷದ ಬಾಲಕನೊಬ್ಬ ದಾರುಣವಾಗಿ ಮೃತಪಟ್ಟ ಘಟನೆ ಇಲ್ಲಿನ ಹೋಶಂಗಾಬಾದ್ ಜಿಲ್ಲೆಯಲ್ಲಿ ನಡೆದಿದೆ.
ಮೃತ ದುರ್ದೈವಿ ಬಾಲಕನನ್ನು ನೈತಿಕ್ ಗೌರ್ ಎಂದು ಗುರುತಿಸಲಾಗಿದೆ. ಈತ ಹೋಶಂಗಾಬಾದ್ ನಲ್ಲಿರೋ ಖಾಸಗಿ ಶಾಲೆಯೊಂದರಲ್ಲಿ ಓದುತ್ತಿದ್ದನು. ಈ ಘಟನೆ ಮಾರ್ಚ್ 19ರಂದು ನಡೆದಿದ್ದು, ಬಾಲಕ ಭಾನುವಾರ ಮೃತಪಟ್ಟಿದ್ದಾನೆ.
ಏನಿದು ಘಟನೆ?: ಶಾಲೆಯ ಅಧಿಕಾರಿಗಳು ಬಾಲಕನನ್ನು ಕಾರೊಳಗೆ ಲಾಕ್ ಮಾಡಿ ಹೋಗಿದ್ದಾರೆ. ಹೀಗಾಗಿ ಬರೋಬ್ಬರಿ 4 ಗಂಟೆಗೂ ಅಧಿಕ ಕಾಲ ಕಾರೊಳಗಿದ್ದರಿಂದ ಬಾಲಕನಿಗೆ ಉಸಿರಾಡಲು ಸಾಧ್ಯವಾಗಲಿಲ್ಲ. ಕೂಡಲೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಾಯಿಸಿತಾದ್ರೂ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಮೃತಪಟ್ಟಿದ್ದಾನೆ.
ಶಾಲೆಯ ಅಧಿಕಾರಿಗಳು ನೈತಿಕ್ ನನ್ನು 4 ಗಂಟೆಗೂ ಅಧಿಕ ಕಾರೊಳಗೆ ಕೂಡಿ ಹಾಕಿದ್ದರಿಂದ ಆತ ಉಸಿರಾಟದ ತೊಂದರೆ ಅನುಭವಿಸಿದ್ದಾನೆ. ಅಲ್ಲದೇ ಘಟನೆಯಿಂದ ಆತ ಶಾಕ್ ಗೊಳಗಾಗಿದ್ದಾನೆ ಅಂತ ವೈದ್ಯರು ತಿಳಿಸಿದ್ದರು. ಶಾಲೆಯ ಅಧಿಕಾರಿಗಳು ನಿರ್ಲಕ್ಷ್ಯದಿಂದಲೇ ಈ ಘಟನೆ ನಡೆದಿದೆ ಅಂತ ನೈತಿಕ್ ಪೋಷಕರು ಆರೋಪಿಸಿದ್ದಾರೆ. ಸದ್ಯ ಪ್ರಕರಣವನ್ನು ಸಿಬಿಐ ತನಿಖೆ ಮಾಡುವಂತೆ ಬಾಲಕನ ಪೋಷಕರು ಒತ್ತಾಯಿಸಿದ್ದಾರೆ.
ಕಾರಿನಿಂದಿಳಿಯಲು ನಿರಾಕರಣೆ: ಶಾಲೆಯ ನಿರ್ದೇಶಕ ಹಾಗೂ ಕೆಲ ಶಿಕ್ಷಕರ ಜೊತೆ ನೈತಿಕ್ ನನ್ನು ಕಾರಿನಲ್ಲಿ ಶಾಲೆಗೆ ಕಳುಹಿಸಿಕೊಡಲಾಗಿತ್ತು. ಶಾಲೆಗೆ ತಲುಪಿದ ಬಳಿಕ ನೈತಿಕ್ ಕಾರಿನಿಂದ ಇಳಿಯಲು ನಿರಾಕರಿಸಿದ್ದಾನೆ. ಹೀಗಾಗಿ ಶಾಲಾ ನಿರ್ದೇಶಕರು ಆತನನ್ನು ಕಾರಿನಲ್ಲೇ ಬಿಟ್ಟು ಲಾಕ್ ಮಾಡಿ ಹೋಗಿದ್ದಾರೆ. ನಂತರ ಶಿಕ್ಷಕಿಯೊಬ್ಬರಲ್ಲಿ ಬಾಲಕನನ್ನು ಕಾರಿನಿಂದಿಳಿಸಿ ಕರೆತರುವಂತೆ ಹೇಳಿದ್ದಾರೆ. ಆದ್ರೆ ಶಿಕ್ಷಕಿ ಇದನ್ನು ಮರೆತಿದ್ದು, ಹೀಗಾಗಿ ಬಾಲಕ ಬರೋಬ್ಬರಿ 4 ಗಂಟೆಗೂ ಅಧಿಕ ಕಾರಿನೊಳಗಡೆಯೇ ಇದ್ದನು. ಪರಿಣಾಮ ಆತನಿಗೆ ಉಸಿರಾಡಲು ಸಾಧ್ಯವಾಗದೇ ತೊಂದರೆ ಅನುಭವಿಸಿದ್ದ ಎಂದು ಅಂತ ತಂದೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಘಟನೆ ಸಂಬಂಧ ಹೋಶಂಗಾಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ.