ಕೇಂದ್ರದಲ್ಲಿ ರಚನೆ ಆಗಿರುವುದು ಕಿಚಡಿ ಸರ್ಕಾರ, ಬಹಳ ದಿನ ಮೋದಿ ಅಧಿಕಾರದಲ್ಲಿ ಇರಲ್ಲ: ಶಾಮನೂರು ಭವಿಷ್ಯ

Public TV
1 Min Read

ದಾವಣಗೆರೆ: ಕೇಂದ್ರದಲ್ಲಿ ರಚನೆ ಆಗಿರುವುದು ಕಿಚಡಿ ಸರ್ಕಾರ. ಎಲ್ಲರಿಗೂ ಪ್ರಧಾನಿ ಹಾಗೂ ಪ್ರಭಾವಿ ಸಚಿವ ಸ್ಥಾನಗಳ ಮೇಲೆ ಆಸೆ ಇರುತ್ತದೆ. ಹೀಗಾಗಿ ಬಹಳ ದಿನ ಪ್ರಧಾನಿ ನರೇಂದ್ರ ಮೋದಿ (Narendra Modi) ಅಧಿಕಾರದಲ್ಲಿ ಇರಲ್ಲ ಎಂದು ಕಾಂಗ್ರೆಸ್ ಹಿರಿಯ ಶಾಸಕ ಹಾಗೂ ಅಖಿಲ ಭಾರತ ವೀರಶೈವ -ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ (Shamanur Shivashankarappa) ಕೇಂದ್ರ ಸರ್ಕಾರದ ಭವಿಷ್ಯ ನುಡಿದರು.

ದಾವಣಗೆರೆಯ (Davanagere) ಬಾಪೂಜಿ ಎಂಬಿಎ ಹಾಲ್‌ನಲ್ಲಿ ನಡೆದ ಅಖಿಲ ಭಾರತ ವೀರಶೈವ -ಲಿಂಗಾಯತ ಮಹಾಸಭಾ ಏರ್ಪಡಿಸಿದ್ದ ನೂತನ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಅಭಿನಂದನೆ ಸಲ್ಲಿಸಿ ಅವರು ಮಾತನಾಡಿದರು. ಎನ್‌ಡಿಎ ಪಾಲುದಾರರಾಗಿರುವ ತೆಲುಗು ದೇಶಂ ಪಕ್ಷದ ಮುಖ್ಯಸ್ಥ, ಆಂಧ್ರದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಮತ್ತು ಜೆಡಿಯು ಮುಖಂಡ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶನಿಯಂತೆ ಕಾಡಲಿದ್ದಾರೆ ಎಂದರು. ಇದನ್ನೂ ಓದಿ: ದರ್ಶನ್‌ ಪೊಲೀಸ್‌ ಕಸ್ಟಡಿಗೆ, ಪವಿತ್ರಾ ಗೌಡ ಜೈಲಿಗೆ

ಮೋದಿ ಸರ್ಕಾರ ಬಹಳ ದಿನ ಮುಂದುವರಿಯುವುದಿಲ್ಲ. ಬಿಜೆಪಿಗೆ ಈಗಿರುವ ಸ್ಥಾನಕ್ಕಿಂತ ಹತ್ತು ಸ್ಥಾನಗಳು ಕಡಿಮೆ ಬಂದಿದ್ದರೆ ಮೋದಿ ಪ್ರಧಾನಿ ಆಗುತ್ತಿರಲಿಲ್ಲ. ಎಷ್ಟೇ ಮೋದಿ ಜಪ ಮಾಡಿದರೂ ಬಿಜೆಪಿ ಸ್ವತಂತ್ರವಾಗಿ ಅಧಿಕಾರ ಹಿಡಿಯುವಲ್ಲಿ ವಿಫಲವಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಈ ರೀತಿಯ ಕ್ರೂರತನ ನಾನು ನೋಡಿಯೇ ಇಲ್ಲ, ಅನಗತ್ಯವಾಗಿ ತುಟಿ ಬಿಚ್ಚಬೇಡಿ – ಮಂತ್ರಿಗಳಿಗೆ ಸಿಎಂ ವಾರ್ನಿಂಗ್‌

Share This Article