ಪ್ರೇಕ್ಷಕರನ್ನು ಥೇಟರಿನಾಚೆಗೂ ಕಾಡಲಿದೆ ಖನನ ಕಥೆ!

Public TV
1 Min Read

ಬೆಂಗಳೂರು:  ಅಚ್ಚುಕಟ್ಟಾದ ಕಂಟೆಂಟ್ ಹೊಂದಿರುವ ಹೊಸತನದ ಚಿತ್ರಗಳನ್ನು ಕನ್ನಡದ ಪ್ರೇಕ್ಷಕರು ಯಾವತ್ತಿದ್ದರೂ ಗೆಲ್ಲಿಸಿಯೇ ತೀರುತ್ತಾರೆ. ಅದರಲ್ಲಿಯೂ ಹೊಸಾ ಪ್ರಯೋಗಗಳಿಗಂತೂ ಪ್ರೇಕ್ಷಕರ ಪ್ರೋತ್ಸಾಹ ಸದಾ ಇದ್ದೇ ಇರುತ್ತದೆ. ಈ ನಿಟ್ಟಿನಲ್ಲಿ ನೋಡ ಹೋದರೆ ಆರ್ಯವರ್ಧನ್ ನಾಯಕರಾಗಿ ನಟಿಸಿರುವ ಖನನ ಚಿತ್ರದ ಗೆಲುವು ನಿಚ್ಚಳವಾಗಿದೆ!

ಶೀರ್ಷಿಕೆಯ ಬಗ್ಗೆಯೇ ಪ್ರೇಕ್ಷಕರು ಆಕರ್ಷಿತರಾಗಿ ತಲೆ ಕೆಡಿಸಿಕೊಳ್ಳುವಂತೆ ಮಾಡುವಂಥಾ ಟ್ರೆಂಡ್ ಇತ್ತೀಚೆಗೆ ಶುರುವಾಗಿದೆ. ಹುಡುಕಿದರೆ ಬಹಳಷ್ಟು ಅರ್ಥವತ್ತಾದ ವಿಚಾರಗಳನ್ನು ಹೊಮ್ಮಿಸುವಂಥಾ ಶೀರ್ಷಿಕೆಗಳೂ ಹಲವಾರಿವೆ. ಖನನ ಕೂಡಾ ಅದೇ ಥರದ ಸಮ್ಮೋಹಕ ಶೀರ್ಷಿಕೆ ಹೊಂದಿರುವ ಚಿತ್ರ.

ಖನನ ಎಂಬುದು ಸಂಸ್ಕೃತ ಪದ. ಇದರ ಅರ್ಥಕ್ಕೆ ತಕ್ಕುದಾದ ಕಥೆಯನ್ನೂ ಈ ಚಿತ್ರ ಹೊಂದಿದೆ. ಸಸ್ಪೆನ್ಸ್ ಥ್ರಿಲ್ಲರ್ ಜಾನರಿನ ಖನನ ಪಕ್ಕಾ ಕಮರ್ಶಿಯಲ್ ಮಾದರಿಯಲ್ಲಿಯೇ ತಯಾರಾಗಿದೆ. ನಿರ್ದೇಶಕ ರಾಧಾ ಹೇಳಿ ಕೇಳಿ ತೆಲುಗು ಚಿತ್ರರಂಗದಲ್ಲಿ ಪಳಗಿಕೊಂಡಿರುವವರು. ಭಾರೀ ಬಜೆಟ್ಟಿನ ಸೂಪರ್ ಹಿಟ್ ಚಿತ್ರಗಳಿಗೂ ಕೆಲಸ ಮಾಡಿರುವವರು. ಆದ್ದರಿಂದಲೇ ಕನ್ನಡಕ್ಕೆ ತುಂಬಾ ಅಪರೂಪವಾಗಿರೋ ಖನನ ಕಥೆಯನ್ನವರು ಕಮರ್ಶಿಯಲ್ ರೂಪದಲ್ಲಿಯೇ ಕಟ್ಟಿ ಕೊಟ್ಟಿದ್ದಾರಂತೆ.

ಇಲ್ಲಿಯ ಕಥೆ ಬರೀ ಕಲ್ಪನೆಯ ಮೂಸೆಯಲ್ಲಿ ಅರಳಿಕೊಂಡಿರೋದಲ್ಲ. ಬದುಕಿಗೆ ಹತ್ತಿರವಾದ, ಗೊಂದಲದ ಸಿಕ್ಕು ಬಿಡಿಸುತ್ತಲೇ ಥರ ಥರದ ಸಾಕ್ಷಾತ್ಕಾರ ಮಾಡಿಸುವಂಥಾ ತಿರುಳನ್ನು ಹೊಂದಿದೆಯಂತೆ. ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವಂಥಾ ಈ ಕಥೆ ಥೇಟರಿನಿಂದ ಹೊರಬಂದ ನಂತರವೂ ಪ್ರೇಕ್ಷಕರನ್ನು ಬಿಟ್ಟೂ ಬಿಡದಂತೆ ಕಾಡುವಂತಿದೆಯಂತೆ.

ಖನನ ಚಿತ್ರದಲ್ಲಿ ಅಂಥಾದ್ದೇನಿದೆ ಅನ್ನೋದು ಮುಂದಿನ ತಿಂಗಳು ಖಂಡಿತಾ ಜಾಹೀರಾಗಲಿದೆ. ಯಾಕೆಂದರೆ ಮೇ ತಿಂಗಳಲ್ಲಿ ಈ ಚಿತ್ರ ಕನ್ನಡವೂ ಸೇರಿದಂತೆ ಮೂರು ಭಾಷೆಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.

Share This Article
Leave a Comment

Leave a Reply

Your email address will not be published. Required fields are marked *