ದಕ್ಷಿಣ ಭಾರತದ ಸೆನ್ಸೇಷನ್ ಕೆಜಿಎಫ್-2ಗೆ ವಿಘ್ನಗಳ ಮೇಲೆ ವಿಘ್ನ

Public TV
3 Min Read

– ಕೋರ್ಟ್ ಖಟ್ಲೆ ಬೆನ್ನಲ್ಲೇ ಈಗ ಪ್ರಕೃತಿಯ ಸವಾಲು
– 2 ತಿಂಗಳಿನಿಂದ ಶೂಟಿಂಗ್ ಸ್ಥಗಿತ ಹಾಳಾಯ್ತು ಸಂಪೂರ್ಣ ಸೆಟ್

ಕೋಲಾರ: ಕನ್ನಡದ ಬಹು ನಿರೀಕ್ಷಿತ, ಬಹು ಭಾಷಾ ಕೆಜಿಎಫ್-2 ಸಿನಿಮಾ ಸೆಟ್‍ಗೆ ಗಂಡಾಂತರ ಎದುರಾಗಿದೆ. ಕೋಟಿ ನಿರ್ಮಾಪಕ ವಿಜಯ್ ಕಿರಗಂದೂರು ಅವರ ಹಣ, ನಿರ್ದೇಶಕ ಪ್ರಶಾಂತ್ ನೀಲ್ ಕ್ರಿಯೇಟಿವಿಟಿ, ನಟ ಯಶ್ ಜೋಷ್ ಜೊತೆ ನೂರಾರು ಕಾರ್ಮಿಕರ ಶ್ರಮದಿಂದ ಕೋಲಾರದ ಕೆಜಿಎಫ್‍ನ ಕೆನಡೀಸ್ ಸೈನೈಡ್ ಗುಡ್ಡದ ಮೇಲೆ ನಿರ್ಮಾಣಗೊಂಡಿದ್ದ ಸೆಟ್ ಸಂಪೂರ್ಣ ಹಾಳಾಗಿದೆ.

ದಕ್ಷಿಣ ಭಾರತದಲ್ಲೇ ಹೊಸ ಸಂಚಲನ ಸೃಷ್ಟಿಸಿದ್ದ ನಾಯಕ ನಟ ಯಶ್ ಅಭಿನಯಿಸಿರುವ ಕೆಜಿಎಫ್-2 ಸಿನಿಮಾದ ಶೂಟಿಂಗ್ ಕಳೆದ 2 ತಿಂಗಳಿನಿಂದ ಸ್ಥಗಿತಗೊಂಡಿದೆ.

ಕೋಲಾರದ ಕೆಜಿಎಫ್‍ನ ಕೆನಡೀಸ್ ಸೈನೈಡ್ ಗುಡ್ಡದ ಮೇಲೆ ನಟ ಯಶ್ ಸೇರಿದಂತೆ ಪ್ರಶಾಂತ್ ನೀಲ್ ನೇತೃತ್ವದಲ್ಲಿ ನೂರಾರು ಕಾರ್ಮಿಕರು ದುಬಾರಿ ಸೆಟ್ ನಿರ್ಮಾಣ ಮಾಡಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಆದರೆ ಸೈನೈಡ್ ಗುಡ್ಡದ ಮೇಲೆ ಬೃಹತ್, ದುಬಾರಿ ಸೆಟ್ ನಿರ್ಮಾಣ ಮಾಡಿದ್ದರಿಂದ ಪರಿಸರ ಹಾನಿ ಹಾಗೂ ಚಿತ್ರೀಕರಣದಿಂದ ಸ್ಥಳೀಯರಿಗೆ ತೊಂದರೆಯಾದ ಹಿನ್ನೆಲೆ ಸಾಮಾಜಿಕ ಹೋರಾಟಗಾರ ಶ್ರೀನಿವಾಸ್ ಆಗಸ್ಟ್ ತಿಂಗಳಲ್ಲಿ ಕೋರ್ಟ್ ಮೊರೆ ಹೋಗಿದ್ದರು.

ಅರ್ಜಿಯನ್ನು ಮಾನ್ಯ ಮಾಡಿದ ಕೆಜಿಎಫ್‍ನ ಜೆಎಂಎಫ್‍ಸಿ ನ್ಯಾಯಾಲಯ ಚಿತ್ರೀಕರಣ ಮಾಡದಂತೆ ತಡೆಯಾಜ್ಞೆ ನೀಡಿತ್ತು. ಬಳಿಕ ಹೈಕೋರ್ಟ್ ತಡೆಯಾಜ್ಞೆ ತೆರವುಗೊಳಿಸಿ ಚಿತ್ರೀಕರಣ ಮಾಡುವಂತೆ ಅನುಮತಿ ನೀಡಿದೆ. ಆದರೆ ರೌಡಿ ತಂಗಂ ಕುಟುಂಬ ಚಿತ್ರ ಕಥೆ ನಮ್ಮ ಕುಟುಂಬದ್ದೆ ಆಗಿದ್ದು, ನಮ್ಮ ಅನುಮತಿ ಇಲ್ಲದೆ ಚಿತ್ರೀಕರಣ ಮಾಡುತ್ತಿರುವುದಾಗಿ ಕೆಜಿಎಫ್ ನ್ಯಾಯಾಲಯದಲ್ಲಿ ದಾವೆ ಸಲ್ಲಿಸಿದೆ. 2 ತಿಂಗಳಿನಿಂದ ಚಿತ್ರೀಕರಣ ನಿಲ್ಲಿಸಿರುವ ಚಿತ್ರ ತಂಡ ಕಾನೂನು ಹೋರಾಟದಲ್ಲಿ ಗೆಲುವು ಸಾಧಿಸಿಯಾದರೂ ದುಬಾರಿ ಸೆಟ್ ಸಂಪೂರ್ಣ ಹಾಳಾಗಿದೆ. ನರಾಚಿ ಲೋಕ ಮಳೆ ಗಾಳಿಗೆ ಹಾಳಾಗಿದ್ದು, ಚಿತ್ರೀಕರಣ ನಡೆದಿದ್ದೆ ಆದಲ್ಲಿ ಮತ್ತೆ ಹೊಸದಾಗಿ ಸೆಟ್ ನಿರ್ಮಾಣ ಮಾಡಬೇಕಾದ ಸನ್ನಿವೇಶ ಚಿತ್ರ ತಂಡಕ್ಕೆ ಎದುರಾಗಿದೆ. ಇದನ್ನೂ ಓದಿ: ಇರ್ಫಾನ್ ಪಠಾಣ್ ಚಿತ್ರದಲ್ಲಿ ಕೆಜಿಎಫ್ ನಟಿ ಶ್ರೀನಿಧಿ ನಾಯಕಿ

ತಂಗಂ ತಾಯಿ ಆರೋಪ ಏನು?
ಕೆಜಿಎಫ್ ಚಾಪ್ಟರ್-1 ಚಿತ್ರದಲ್ಲಿ ಬರುವ ಯಶ್ ಪಾತ್ರ ತಮ್ಮ ಮಗನ ನಿಜ ಜೀವನದ ಪಾತ್ರ ಹೋಲುತ್ತದೆ ಎಂದು ತಂಗಂ ತಾಯಿ ಪೌಳಿ ಕೋರ್ಟ್‍ನಲ್ಲಿ ದಾವೆ ಹೂಡಿದ್ದಾರೆ. ನಮ್ಮ ಕುಟುಂಬದ ಅನುಮತಿ ಪಡೆಯದೆ ಚಿತ್ರದಲ್ಲಿ ನಮ್ಮ ಮಗನ ನಿಜ ಜೀವನದ ಪಾತ್ರ ಬಳಸಿಕೊಳ್ಳಲಾಗಿದೆ. ಕೆಜಿಎಫ್‍ನಲ್ಲಿ ಚಿನ್ನದ ಗಣಿಗಾರಿಕೆ ನಡೆಯುತ್ತಿದ್ದ 1990 ರ ದಶಕದಲ್ಲಿ ರೌಡಿಯಾಗಿದ್ದ ತಂಗಂ ನೈಜ ಕಥೆ ಇದಾಗಿದೆ ಎಂಬುದು ತಂಗಂ ಕುಟುಂಬದ ಆರೋಪ.

ಕೆಜಿಎಫ್ ಚಿತ್ರದಲ್ಲಿ ನಾಯಕ ಯಶ್ ಮುಂಬೈನಲ್ಲಿ ರೌಡಿಯಾಗಿದ್ದು ಸುಪಾರಿ ಪಡೆದು ಕೆಜಿಎಫ್‍ಗೆ ಬರುತ್ತಾನೆ. ತಂಗಂ ಕೆಜಿಎಫ್‍ನಲ್ಲಿ ಕಿಲ್ಲರ್ ರೌಡಿಯಾಗಿದ್ದು ಪೊಲೀಸರ ಕಾಟ ಜಾಸ್ತಿಯಾದ ಮೇಲೆ ಮುಂಬೈನಲ್ಲಿ ತಲೆ ಮರೆಸಿಕೊಳ್ಳುತ್ತಾನೆ. ಮುಂಬೈನಲ್ಲಿ ಕೊಲೆ, ದರೋಡೆ ಇನ್ನಿತರ ಅಪರಾಧ ಚಟುವಟಿಕೆಗಳಲ್ಲಿ ತೊಡಗಿ ಮತ್ತೆ ಕೆಜಿಎಫ್‍ಗೆ ಬರುತ್ತಾನೆ. ಇದು ಕೆಜಿಎಫ್ ಚಿತ್ರದಲ್ಲಿ ಬರುವ ಯಶ್ ಹಲವು ಸನ್ನಿವೇಶಗಳು ನಮ್ಮ ಮಗನನ್ನೇ ಹೋಲುತ್ತವೆ ಎನ್ನುವುದು ತಂಗಂ ತಾಯಿ ಪೌಳಿ ಆರೋಪ.

ಚಿತ್ರದಲ್ಲಿ ಯಶ್ ಪೊಲೀಸರಿಗೆ ಬಿಯರ್ ಬಾಟಲ್ ಹೊಡೆಯುವ ಸನ್ನಿವೇಶ ಸೇರಿದಂತೆ ಹಲವು ನೈಜ ಕಥೆಯನ್ನು ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಕೆಜಿಎಫ್ ಚಾಪ್ಟರ್-2 ಚಿತ್ರದಲ್ಲಿ ಕೂಡ ತಂಗಂ ಜೀವನದ ಪಾತ್ರ ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಿ ತಂಗಂ ತಾಯಿ ಪೌಳಿ ಕೋರ್ಟ್ ಮೊರೆ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 23ಕ್ಕೆ ವಿಚಾರಣೆಗೆ ಹಾಜರಾಗುವಂತೆ ಚಿತ್ರ ತಂಡಕ್ಕೆ ಕೋರ್ಟ್ ಸಮನ್ಸ್ ನೀಡಿದೆ.

ಕೆಜಿಎಫ್‍ನಲ್ಲಿ ದರೋಡೆ ಮಾಡಿದ ಚಿನ್ನವನ್ನು ಮುಂಬೈ, ಕೇರಳದಲ್ಲಿ ಮಾರಾಟ ಮಾಡುತ್ತಿದ್ದ ತಂಗಂ ಕುರಿತು 2016ರಲ್ಲಿ ಕೋಲಾರ ತಂಗಂ ಹೆಸರಿನಲ್ಲಿ ಸಿನಿಮಾ ಕೂಡ ಬಂದಿದೆ.

https://www.youtube.com/watch?v=0ksoizu9lIQ

Share This Article
Leave a Comment

Leave a Reply

Your email address will not be published. Required fields are marked *