‘ಕೆಜಿಎಫ್ – 2’ ಆಡಿಷನ್‍ಗೆ ಜನವೋ ಜನ

Public TV
1 Min Read

ಬೆಂಗಳೂರು: ಕೆಜಿಎಫ್ ಆಡಿಷನ್‍ಗೆ ಭಾರೀ ಸಂಖ್ಯೆಯಲ್ಲಿ ಯುವಕರು ಭಾಗವಹಿಸಿದ್ದರಿಂದ ಪೊಲೀಸರು ಅವರನ್ನು ನಿಯಂತ್ರಿಸಲು ಹರಸಾಹಸ ಪಟ್ಟಿದ್ದಾರೆ.

ನಿರ್ದೇಶಕ ಪ್ರಶಾಂತ್ ನೀಲ್ ಅವರು ಹೊಸ ಕಲಾವಿದರಿಗೆ ಕೆಜಿಎಫ್-2ನಲ್ಲಿ ನಟಿಸುವ ಸುವರ್ಣಾವಕಾಶ ನೀಡಿದ್ದರು. ಹೀಗಾಗಿ ಇಂದು ‘ಕೆಜಿಎಫ್ – 2’ ಆಡಿಷನ್‍ಗೆ ಅಪಾರ ಸಂಖ್ಯೆ ಯುವಕರ ಬಂದಿದ್ದಾರೆ.

ಬೆಂಗಳೂರಿನ ಮಲ್ಲೇಶ್ವರಂನ ಖಾಸಗಿ ಹೋಟೆಲ್‍ನಲ್ಲಿ ‘ಕೆಜಿಎಫ್ – 2’ ಆಡಿಷನ್ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಆಡಿಷನ್‍ನಲ್ಲಿ ಭಾಗಿಯಾಗಲು ಜನರು ಕಿಲೋಮೀಟರ್ ಗಟ್ಟಲೆ ಕ್ಯೂ ನಿಂತಿದ್ದಾರೆ. ಬೆಂಗಳೂರು ಮಾತ್ರವಲ್ಲದೇ ಹುಬ್ಬಳ್ಳಿ, ಧಾರವಾಡ ಮತ್ತು ಹಾವೇರಿ ಸೇರಿದಂತೆ ಅನೇಕ ಜಿಲ್ಲೆಯಗಳಿಂದಲೂ ಆಡಿಷನ್‍ಗೆ ಬಂದಿದ್ದಾರೆ. ಜನರನ್ನ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ಆಡಿಷನ್‍ಗೆ ಮಕ್ಕಳನ್ನು ಕರೆದುಕೊಂಡು ತಾಯಿಯಂದಿರು ಬಂದಿದ್ದಾರೆ. ಇನ್ನೂ ಮೊದಲ ಸಿನಿಮಾದಲ್ಲಿ ಗಡ್ಡಧಾರಿಯಾಗಿ ಮಿಂಚಿದ್ದ ವಿಲನ್‍ಗಳನ್ನು ನೋಡಿ ಅವರಂತೆಯೇ ಗಡ್ಡ ಬೆಳೆಸಿರುವ ಯುವಕರು ಕೂಡ ಬಂದಿದ್ದಾರೆ. ಬಿಸಿಲಿಗೆ ಕ್ಯೂ ನಿಂತು ಸುಸ್ತಾದರೂ ಸರತಿ ಸಾಲಿನಲ್ಲೇ ಕುಳಿತುಕೊಂಡು ಆಡಿಷನ್‍ಗಾಗಿ ಕಾಯುತ್ತಿದ್ದಾರೆ.

ಡೈಲಾಗ್ ಹೇಳಿ ಆಯ್ಕೆಯಾದೆ:
ನಾನು ಆಡಿಷನ್ ಕೊಟ್ಟು ವಿಲನ್ ಪಾತ್ರಕ್ಕೆ ಆಯ್ಕೆಯಾಗಿದ್ದೇನೆ. ತುಂಬಾ ಖುಷಿಯಾಗುತ್ತಿದೆ. 20 ಸಿನಿಮಾ ಮಾಡುವುದು ಒಂದೇ, ಕೆಜಿಎಫ್ ಸಿನಿಮಾ ಮಾಡುವುದು ಒಂದೇ. ಇದಕ್ಕಾಗಿ ತುಂಬಾ ಕಷ್ಟ ಪಟ್ಟಿದ್ದೀನಿ. ನಾನು ಅರುಣ್, ಚಾಮರಾಜನಗರದಿಂದ ಬಂದಿದ್ದೀನಿ. ಬಿ.ಕಾಂ ಮಾಡಿದ್ದೇನೆ. ಮುಂದಿನ ದಿನ ಕೆಜಿಎಫ್ ಪಾರ್ಟ್ 2 ನಲ್ಲಿ ನನ್ನನ್ನು ನೋಡಬಹುದು. ನಾನು ಶ್ರೀಮುರಳಿ, ಧ್ರುವಾ ಸರ್ಜಾ ಮತ್ತು ಉದಯ್ ಡೈಲಾಗ್ ಹೇಳಿದೆ. ಮೊದಲು ನಮ್ಮ ಮೇಲೆ ನಮಗೆ ವಿಶ್ವಾಸ ಇದ್ದರೆ, ಖಂಡಿತ ನಾವು ಆಯ್ಕೆಯಾಗುತ್ತೇವೆ ಎಂದು ಹೇಳಿದ್ದಾರೆ.

ಪ್ರಶಾಂತ್ ನೀಲ್ ಆಡಿಷನ್ ದಿನಾಂಕವನ್ನು ಟ್ವಿಟ್ಟರ್ ನಲ್ಲಿ ಪ್ರಕಟಿಸಿದ್ದರು. “ಇದೇ ಏಪ್ರಿಲ್ 26ರಂದು ಬೆಂಗಳೂರಿನ ಜಿಎಂ ರಿಜಾಯಜ್‍ನಲ್ಲಿ ಆಡಿಷನ್ ನಡೆಯಲಿದೆ. ಏಪ್ರಿಲ್ 26ರ ಬೆಳಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ಆಡಿಷನ್ ನಡೆಯಲಿದ್ದು, 8 ರಿಂದ 16 ವರ್ಷದ ಹುಡುಗರು ಮತ್ತು 25 ವರ್ಷ ಮೇಲ್ಪಟ್ಟ (ಪುರುಷರು)ಆಸಕ್ತಿಯುಳ್ಳ ಕಲಾವಿದರು ಆಡಿಷನ್‍ನಲ್ಲಿ ಭಾಗವಹಿಸಬಹುದು. ಎಲ್ಲರೂ ಕೇವಲ ಒಂದು ನಿಮಿಷದಲ್ಲಿ ತಮ್ಮ ಡೈಲಾಗ್ ನ್ನು ಒಪ್ಪಿಸಬೇಕು” ಎಂದು ಬರೆದುಕೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *