ಕನ್ನಡ ಬರುತ್ತಾ ಅಂತ ಕೇಳಿ ಯುವಕನ ಎದೆಗೆ ಚಾಕು ಇರಿದು ಕೊಲೆಗೈದ್ರು!

Public TV
1 Min Read

ಬೆಂಗಳೂರು: ಕನ್ನಡ ಬರುತ್ತಾ ಅಂತ ಕೇಳಿ ಕೇರಳ ಮೂಲದ ಯುವಕನೊಬ್ಬನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದ ಘಟನೆ ನಡೆದಿದೆ. ಗೌತಮ್ ಕೃಷ್ಣ ಕೊಲೆಗೀಡಾದ ಯುವಕ. ಈತ ಮೂರು ದಿನಗಳ ಹಿಂದೆ ನಗರದ ಕೊರಿಯರ್ ಒಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದನು.

ನಡೆದಿದ್ದೇನು?:
ಗೌತಮ್ ಹಾಗೂ ಆತನ ಗೆಳೆಯರು ವಾರದ ಹಿಂದೆ ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಬಂದಿದ್ದರು. ಮೊದಲು ಎರ್ನಾಕುಲಮ್ ನಲ್ಲಿ ಸ್ಯಾಮ್ ಸಂಗ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಗೌತಮ್ ಗೆ ಮೂರು ದಿನಗಳ ಹಿಂದೆಯಷ್ಟೇ ನಗರದ ಕೊರಿಯರ್ ಒಂದರಲ್ಲಿ ಕೆಲಸ ಸಿಕ್ಕಿತ್ತು. ಹೀಗಾಗಿ ಹಳೆ ಕಂಪನಿಯ ಸಂಬಳ ಬಂದ ಹಿನ್ನಲೆಯಲ್ಲಿ ಗೌತಮ್ ಮತ್ತು ಗೆಳೆಯರು ಮೆಜೆಸ್ಟಿಕ್ ನಲ್ಲಿ ಪಾರ್ಟಿ ಮಾಡಿದ್ದರು.

ಪಾರ್ಟಿ ಮುಗಿಸಿ ಬರುವಾಗ ಕೆ.ಜಿ ರಸ್ತೆಯ ಬಳಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಈ ವೇಳೆ ಡಿಯೊ ಬೈಕ್ ನಲ್ಲಿ ಬಂದ ಮೂರು ಜನ ಯುವಕರಲ್ಲಿ ಇಬ್ಬರು ಬೈಕಿನಿಂದ ಇಳಿದು ಕನ್ನಡ ಬರುತ್ತಾ ಎಂದು ಗೌತಮ್ ನನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಗೌತಮ್ ಉತ್ತರಿಸುತ್ತಿದ್ದಂತೆಯೇ ಆತನ ಎದೆಗೆ ಚಾಕುವಿನಿಂದ ಇರಿದಿದ್ದಾರೆ. ಪರಿಣಾಮ ಗೌತಮ್ ನೆಲಕ್ಕುರುಳಿದ್ದಾನೆ.

ಕೂಡಲೇ ಗೌತಮ್ ನನ್ನು ಆಟೋ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದ್ರೆ ಅದಾಗಲೇ ಆತ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಉಪ್ಪಾರಪೇಟೆ ಪೊಲೀಸರು, ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಹಾಗೆಯೇ ಹತ್ಯೆ ಮಾಡಿ ಎಸ್ಕೇಪ್ ಆದ ಯುವಕರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *