ಕೈಗೆ ಮತ್ತೊಂದು ಶಾಕ್: ಕೇರಳ ಯೂಥ್ ಕಾಂಗ್ರೆಸ್ ಮುಖಂಡ ರಾಜೀನಾಮೆ

Public TV
1 Min Read

ತಿರುವನಂತಪುರಂ: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ನಡೆಯನ್ನು ಬಹಿರಂಗವಾಗಿ ಟೀಕಿಸಿದ್ದ ಕೇರಳದ ಯುವ ಕಾಂಗ್ರೆಸ್ ಉಪಾಧ್ಯಕ್ಷ ಸಿಆರ್ ರಮೇಶ್ ಪಕ್ಷಕ್ಕೆ ಗುಡ್‍ಬೈ ಹೇಳಿದ್ದಾರೆ.

ಹಿರಿಯ ನಾಯಕರ ಗುಂಪುಗಾರಿಕೆಯಿಂದ ಬೇಸತ್ತು ಪಕ್ಷಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಮಾಧ್ಯಮಗಳಿಗೆ ರಮೇಶ್ ತಿಳಿಸಿದ್ದಾರೆ.

ನಾನು ರಾಜಕೀಯದಿಂದ ಹೊರಬರಲು ಇದು ಸರಿಯಾದ ಸಮಯ. ರಾಜೀನಾಮೆ ನೀಡಿದ್ದೇನೆ ಎಂದಲ್ಲಿಗೆ ಬೇರೆ ಪಕ್ಷಕ್ಕೆ ಸೇರುತ್ತಿದ್ದೇನೆ ಎಂದರ್ಥವಲ್ಲ. ಕೆಲ ವರ್ಷಗಳಿಂದ ನಡೆಯುತ್ತಿರುವ ಗುಂಪುಗಾರಿಕೆಯಿಂದ ನಾನು ಬೇಸತ್ತು ಹೋಗಿದ್ದೇನೆ. ಪಕ್ಷದಲ್ಲಿ ಯಾವುದೇ ಸುಧಾರಣೆ ಕಾಣುತ್ತಿಲ್ಲ ಎಂದು ಟೀಕಿಸಿದರು.

ಪಂಚರಾಜ್ಯಗಳ ಫಲಿತಾಂಶದ ಬಳಿಕ ಸಿಆರ್ ರಮೇಶ್ ಫೇಸ್‍ಬುಕ್‍ನಲ್ಲಿ ರಾಹುಲ್ ಗಾಂಧಿ ಅವರನ್ನು ಟೀಕಿಸಿ ಪೋಸ್ಟ್ ಅಪ್ಲೋಡ್ ಮಾಡಿದ್ದರು.

2016ರ ವಿಧಾನಸಭಾ ಚುನಾವಣೆಯಲ್ಲಿ ಕೊಲ್ಲಂ ಜಿಲ್ಲೆಯ ಕರುನಾಗಪಳ್ಳಿ ಕ್ಷೇತ್ರದಿಂದ ಮಹೇಶ್ ಸ್ಪರ್ಧಿಸಿದ್ದರು. ಆದರೆ ಸಿಪಿಐ ಅಭ್ಯರ್ಥಿ ಎದುರು 1,759 ಮತಗಳ ಅಂತರದಿಂದ ಸೋತಿದ್ದರು.

ಪಂಚರಾಜ್ಯಗಳ ಚುನಾವಣೆ ಫಲಿತಾಂಶದ ಬಳಿಕ ಕಾಂಗ್ರೆಸ್‍ಗೆ ಗುಡ್‍ಬೈ ಹೇಳುವ ನಾಯಕರಲ್ಲಿ ಸಿಆರ್ ರಮೇಶ್ ಮೊದಲೆನಲ್ಲ. ಮಾರ್ಚ್ 16ರಂದು ಗೋವಾ ಕಾಂಗ್ರೆಸ್‍ನ ಹಿರಿಯ ನಾಯಕ ಪ್ರತಾಪ್ ಸಿಂಗ್ ರಾಣೆ ಅವರ ಮಗ ವಿಶ್ವಜಿತ್ ರಾಣೆ ಅವರು ಹೈಕಮಾಂಡ್ ವಿರುದ್ಧ ಅಸಮಾಧಾನಗೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಕಾಂಗ್ರೆಸ್ ಕಾರ್ಯವೈಖರಿಯ ಬಗ್ಗೆ ಬೇಸತ್ತು ಹೋಗಿದ್ದು, ಇನ್ನು ಮುಂದೆ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಜೊತೆ ಮುಂದುವರಿಯುವುದಿಲ್ಲ. ಹೊಸದಾಗಿ ಚುನಾವಣೆ ಎದುರಿಸುತ್ತೇನೆ ಎಂದು ವಿಶ್ವಜಿತ್ ರಾಣೆ ಮಾಧ್ಯಮಗಳಿಗೆ ತಿಳಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *