ನಾನು ತಪ್ಪು ಮಾಡಿದ್ರೆ, ಸಾರ್ವಜನಿಕ ಜೀವನದಿಂದ ನಿವೃತ್ತಿ: ವೇಣುಗೋಪಾಲ್

Public TV
2 Min Read

ಬೆಂಗಳೂರು: ನಾನು ತಪ್ಪು ಮಾಡಿದ್ದೇನೆಂದು ಸಾಬೀತಾದರೆ ಸಾರ್ವಜನಿಕ ಜೀವನದಿಂದ ನಿವೃತ್ತಿ ಪಡೆಯುತ್ತೇನೆ ಎಂದು ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ಹೇಳಿದ್ದಾರೆ.

ಶಾಂತಿನಗರದಲ್ಲಿ ಇಂದು ಬೆಂಗಳೂರಿನಿಂದ ಕೇರಳದ ಆಲೆಪ್ಪಿಗೆ ಜೆಎಸ್‍ಆರ್‍ಡಿಸಿ ಬಸ್ಸು ಸೇವೆಗೆ ಹಸಿರು ನಿಶಾನೆ ತೋರಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸೋಲಾರ್ ಹಗರಣದ ಪ್ರಮುಖ ಆರೋಪಿ ಸರಿತಾ ನಾಯರ್ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎನ್ನುವ ಆರೋಪಕ್ಕೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

ನಾನು 40 ವರ್ಷದಿಂದ ರಾಜಕಾರಣದಲ್ಲಿದ್ದೇನೆ, ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ. ಈ ರೀತಿಯ ಆರೋಪಗಳನ್ನು ವಿಪಕ್ಷಗಳು ಮೊದಲಿನಿಂದಲೂ ಮಾಡಿಕೊಂಡು ಬಂದಿವೆ. ನಾನು ಚುನಾವಣೆಗೆ ನಿಂತಾಗ ಹೆಚ್ಚು ಅಪಪ್ರಚಾರ ಮಾಡಿದ್ದರು. ಸರೀತಾ ನಾಯರ್ ಮೇಲೆ 36 ಕ್ರಿಮಿನಲ್ ಕೇಸುಗಳಿವೆ. ಅವರು ನನ್ನ ಬಗ್ಗೆ ಆರೋಪ ಮಾಡಿದ್ದು ವಿರುದ್ಧ ನಾನು ಎರ್ನಾಕುಲಂ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ ಎಂದರು.

ಬೆಂಗಳೂರಿನ ಮಳೆಗೆ 5 ಜನ ಸಾವನ್ನಪ್ಪಿದ್ದಾರೆ. ಇದು ಆಕಸ್ಮಿಕವಾಗಿ ಆಗಿರುವ ಘಟನೆ. ಇನ್ನು ಮುಂದೆ ಈ ರೀತಿ ಆಗದ ರೀತಿಯಲ್ಲಿ ಸರಿಪಡಿಸಿಕೊಳ್ಳುತ್ತೇವೆಂದು ತಿಳಿಸಿದರು.

ಪ್ರಧಾನಿ ಮೋದಿ ವಿರುದ್ಧ ಸಚಿವ ರೋಷನ್ ಬೇಗ್ ಅವಾಚ್ಯ ಶಬ್ದ ಬಳಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಎಐಸಿಸಿಯ ಪರವಾಗಿ ಮಾತನಾಡುತ್ತಿದ್ದೇನೆ. ಬಿಜೆಪಿಯ ನಾಯಕರು ಇದಕ್ಕಿಂತ ಹೆಚ್ಚಾಗಿ ಕಾಮೆಂಟ್ ಮಾಡಿದ್ದಾರೆ. ರೋಷನ್ ಬೇಗ್‍ಗಿಂತ ಕೆಟ್ಟದಾಗಿ ಮಾತನಾಡಿದ್ದು ಕೇಳಿದ್ದೇನೆ. ರೋಷನ್ ಬೇಗ್ ಉದ್ದೇಶ ಪೂರಕವಾಗಿ ಮಾತನಾಡಿಲ್ಲ. ಇದರ ಬಗ್ಗೆ ಸ್ಪಷ್ಟನೆ ನೀಡಿದರೂ ಸಹ ಇಂತಹ ಪದ ಬಳಕೆ ಸರಿ ಅಲ್ಲ. ರಾಹುಲ್ ಗಾಂಧಿ ಅವರು ಕೆಲವೇ ದಿನಗಳಲ್ಲಿ ಎಐಸಿಸಿ ಅಧ್ಯಕ್ಷರಾಗಲಿದ್ದಾರೆ. ಕೆಪಿಸಿಸಿ ಸಹ ಇದರ ಪರವಾಗಿದೆ ಎಂದು ತಿಳಿಸಿದರು.

ಏನಿದು ಪ್ರಕರಣ?
ಸೋಲಾರ್ ಹಗರಣದ ಪ್ರಮುಖ ಆರೋಪಿ ಸರಿತಾ ನಾಯರ್ 2013ರ ಜುಲೈನಲ್ಲಿ ಜೈಲಿನಿಂದಲೇ ಒಂದು ಪತ್ರ ಬರೆದಿದ್ದರು. ಆ ಪತ್ರವನ್ನು ಆಧರಿಸಿ ರಾಜ್ಯದ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ವಿರುದ್ಧ ಲೈಂಗಿಕ ದೌರ್ಜನ್ಯ ಕೇಸ್ ದಾಖಲಾಗುವ ಸಾಧ್ಯತೆಯಿದೆ.

ಸೋಲಾರ್ ಹಗರಣದ ಬಗ್ಗೆ ಈ ಹಿಂದೆ ತಿರುವನಂತಪುರಂನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ್ದ ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್, ಸರಿತಾ ನಾಯರ್ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ನಡೆದಿದೆ. ಹೀಗಾಗಿ ಸರಿತಾ ನಾಯರ್ ಪತ್ರದಲ್ಲಿ ಯಾರ ಹೆಸರನ್ನು ಬರೆದಿದ್ದಾರೋ ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ತಿಳಿಸಿದ್ದರು.

ಕೇರಳ ಸಿಎಂ ಪಿಣರಾಯ್ ವಿಜಯನ್ ನೇತೃತ್ವದ ಎಡಪಕ್ಷಗಳ ಒಕ್ಕೂಟದ ಸರ್ಕಾರಕ್ಕೆ ಸೋಲಾರ್ ತನಿಖಾ ಆಯೋಗದ ವರದಿ ಬಂದಿದ್ದು, ಆರೋಪಿ ಸರಿತಾ ಪತ್ರದಲ್ಲಿ ಉಲ್ಲೇಖ ಮಾಡಿರುವ ವ್ಯಕ್ತಿಗಳ ವಿರುದ್ಧ ಎಫ್‍ಐಆರ್ ದಾಖಲಿಸಬಹುದು ಎಂದು ಹೇಳಿದೆ. ಲೈಂಗಿಕ ಬಯಕೆ ಈಡೇರಿಸುವಂತೆ ಬೇಡಿಕೆ ಇಡುವುದು ಭ್ರಷ್ಟಾಚಾರದ ಭಾಗವೆಂದು ಪರಿಗಣಿಸಲಾಗಿದೆ. ವರದಿಯನ್ನೇ ಆಧರಿಸಿ ಕಾಂಗ್ರೆಸ್‍ಗೆ ಶಾಕ್ ನೀಡಲು ಕೇರಳದ ಎಡಪಕ್ಷಗಳ ಸರ್ಕಾರ ಮುಂದಾಗಿದೆ.

ಮಾಧ್ಯಮಗಳಿಗೆ ಸೋರಿಕೆಯಾಗಿರುವ ಮಾಹಿತಿ ಪ್ರಕಾರ ಮಾಜಿ ಸರಿತಾ ನಾಯರ್ ಪತ್ರದಲ್ಲಿ, ಮುಖ್ಯಮಂತ್ರಿ ಉಮ್ಮನ್ ಚಾಂಡಿ, ಸಂಸದ ಮತ್ತು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಆಗಿರುವ ವೇಣುಗೋಪಾಲ್, ಹೈಬಿ ಈಡನ್, ಅರ್ಯಾಡನ್ ಮೊಹಮ್ಮದ್, ಅಡೂರ್ ಪ್ರಕಾಶ್, ಲೋಕಸಭಾ ಸಂಸದ ಜೋಸ್ ಕೆ ಮನಿ, ಕೆಪಿ ಅನಿಲ್ ಕುಮಾರ್ ಹೆಸರು ಇದೆ.

 

Share This Article
Leave a Comment

Leave a Reply

Your email address will not be published. Required fields are marked *