ಐಸಿಸ್ ಸೇರಲು ಕೇರಳ ತೊರೆದಿದ್ದ ವ್ಯಕ್ತಿ ಪಾಕ್ ಜೈಲಿನಲ್ಲಿ ಸಾವು

Public TV
1 Min Read

ತಿರುವನಂತಪುರಂ: ಐಸಿಸ್ (ISIS) ಸೇರಲು ಭಾರತ ತೊರೆದಿದ್ದ ಕೇರಳದ (Kerala) ವ್ಯಕ್ತಿಯೊಬ್ಬ ಪಾಕ್ ಜೈಲಿನಲ್ಲಿ ಮೃತಪಟ್ಟಿದ್ದಾನೆ. ಆತನ ಮೃತ ದೇಹವನ್ನು ಅಟ್ಟಾರಿ ಗಡಿಯಲ್ಲಿ ಹಸ್ತಾಂತರಿಸಲಾಗುವುದು ಎಂದು ಪಾಕಿಸ್ತಾನ (Pakistan) ಸರ್ಕಾರ ಕೇಂದ್ರ ಗೃಹ ಸಚಿವಾಲಯಕ್ಕೆ (Union Home Ministry) ತಿಳಿಸಿದೆ.

ಮೃತನನ್ನು ಪಾಲಕ್ಕಾಡ್ (Palakkad) ಜಿಲ್ಲೆಯ ಕಪೂರ್‌ನ ಜುಲ್ಫಿಕರ್ (48) ಎಂದು ಗುರುತಿಸಲಾಗಿದೆ. ಜುಲ್ಫಿಕರ್ 2018ರಲ್ಲಿ ಕೇರಳ ತೊರೆದಿದ್ದ. ನಂತರ ಐಸಿಸ್ ಸೇರಲು ಅಬುಧಾಬಿ (Abu Dhabi) ತೊರೆದಿದ್ದನ್ನು ಗುಪ್ತಚರ ಸಂಸ್ಥೆಗಳು ಪತ್ತೆ ಹಚ್ಚಿದ್ದವು. ಅಲ್ಲಿಂದ ಇರಾನ್‍ಗೆ (Iran) ತೆರಳಿದ್ದ ನಂತರ ಪಾಕಿಸ್ತಾನಕ್ಕೆ ತಲುಪಿದ್ದ ಮಾಹಿತಿ ಸಿಕ್ಕಿತ್ತು. ಇದನ್ನೂ ಓದಿ: ಶೀಘ್ರವೇ ಮುಂಬೈ ಬ್ಲಾಸ್ಟ್ ಮಾಡ್ತೀನಿ – ಬೆದರಿಕೆ ಹಾಕಿದಾತ ಅರೆಸ್ಟ್

ಆತ ಅಬುಧಾಬಿಯಿಂದ ನಾಪತ್ತೆಯಾಗಿದ್ದಾಗಿನಿಂದ ಗುಪ್ತಚರ ಸಂಸ್ಥೆಗಳು ಆತನ ಮೇಲೆ ನಿಗಾ ಇರಿಸಿದ್ದವು. ಈಗ ಪಾಕ್‍ನಲ್ಲಿ ಮೃತಪಟ್ಟಿರುವುದು ದೃಢಪಟ್ಟಿದೆ. ಪ್ರಕರಣದಲ್ಲಿ ನಿಗೂಢತೆ ಇದೆ, ಹೆಚ್ಚಿನ ವಿವರಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ ಎಂದು ಮಧ್ಯಮಗಳು ತಿಳಿಸಿವೆ.

ಪಾಕಿಸ್ತಾನ ಪೊಲೀಸರಿಂದ ಜುಲ್ಫಿಕರ್ ಸಾವಿನ ಬಗ್ಗೆ ಭಾರತಕ್ಕೆ ಮಾಹಿತಿ ಲಭಿಸಿದೆ. ಮೃತದೇಹವನ್ನು ಅಮೃತಸರದ (Amritsar) ಎಫ್‌ಆರ್‌ಒ ಮೂಲಕ ಭಾರತ ಸರ್ಕಾರಕ್ಕೆ ಅಟ್ಟಾರಿ ಗಡಿಯಲ್ಲಿ ಹಸ್ತಾಂತರಿಸುವುದಾಗಿ ತಿಳಿಸಿದೆ. ಬಳಿಕ ಪಾಲಕ್ಕಾಡ್‍ಗೆ ಕೊಂಡೊಯ್ಯುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈಗ ಜುಲ್ಫಿಕರ್ ಐಸಿಸ್ ಸೇರಲು ದೇಶ ತೊರೆದಿದ್ದ ಎಂಬ ಸುದ್ದಿ ಹೊರಬೀಳುತ್ತಿದ್ದಂತೆ ಕುಟುಂಬಸ್ಥರು ಮೃತದೇಹ ಸ್ವೀಕರಿಸಲು ಹಿಂದೇಟು ಹಾಕಿದ್ದಾರೆ. ಇದನ್ನೂ ಓದಿ: ಟ್ರಕ್‍ಗೆ ಬಸ್ ಡಿಕ್ಕಿ – ಏಳು ಸಾವು, 13 ಮಂದಿಗೆ ಗಾಯ

Share This Article