ಉಪ್ಪಿಟ್ಟು ಬದಲು ಬಿರಿಯಾನಿ, ಚಿಕನ್‌ ಫ್ರೈ ಕೊಡಿ: ಅಂಗನವಾಡಿ ಬಾಲಕನ ಮನವಿಗೆ ಸಚಿವರ ಒಪ್ಪಿಗೆ

By
1 Min Read

ತಿರುವನಂತಪುರಂ: ಅಂಗನವಾಡಿಯಲ್ಲಿ (Anganwadi) ಉಪ್ಪಿಟ್ಟು ಬದಲಿಗೆ ಬಿರಿಯಾನಿ ಮತ್ತು ಚಿಕನ್‌ ಫ್ರೈ (Biriyani & Chicken Fry) ನೀಡುವಂತೆ ಬಾಲಕ ಮಾಡಿದ ಮನವಿಗೆ ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್‌ ಒಪ್ಪಿಗೆ ಸೂಚಿಸಿದ್ದಾರೆ.

ಊಟದ ಮೆನುವಿನಲ್ಲಿ ಉಪ್ಪಿಟ್ಟು ಬದಲಿಗೆ ಬಿರಿಯಾನಿ, ಚಿಕನ್‌ ಫ್ರೈ ನೀಡಬೇಕು ಎಂದು ಪುಟ್ಟ ಬಾಲಕ ಮನವಿ ಮಾಡಿರುವ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ವೀಡಿಯೋಗೆ ಸಚಿವರು ಸ್ಪಂದಿಸಿದ್ದಾರೆ. ಅಂಗನವಾಡಿಗಳಲ್ಲಿನ ಆಹಾರ ಮೆನುವನ್ನು ಪರಿಶೀಲಿಸಲು ಮತ್ತು ಪರಿಷ್ಕರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

ಶಂಕು ಎಂಬ ಮಗು ಮುಗ್ಧ ರೀತಿಯಲ್ಲಿ ತನ್ನ ಅಂಗನವಾಡಿಯಲ್ಲಿ ರುಚಿಕರ ಊಟ ಬೇಕು ಎಂದು ಕೇಳಿ ಕೊಂಡಿದ್ದಾನೆ. ಜ.30 ರಂದು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೋವನ್ನು ಹರಿಬಿಡಲಾಗಿತ್ತು. ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಪಡೆದಿರುವ ವೀಡಿಯೋ ಕೊನೆಗೆ ಸಚಿವರ ಗಮನಕ್ಕೆ ಬಂದಿದೆ.

ಕೇರಳದಲ್ಲಿ ಅಂಗನವಾಡಿಗಳ ಮೂಲಕ ಮಕ್ಕಳಿಗೆ ಪೌಷ್ಟಿಕ ಆಹಾರವನ್ನು ಒದಗಿಸಲು ಸರ್ಕಾರ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಮಕ್ಕಳ ಪೋಷಣೆಗೆ ಪೂರಕವಾಗಿ ಊಟ ನೀಡಲಾಗುತ್ತಿದೆ. ಮೊಟ್ಟೆ ಮತ್ತು ಹಾಲನ್ನು ಸಹ ಸರ್ಕಾರ ನೀಡುತ್ತಿದೆ. ಮಕ್ಕಳು ಪೌಷ್ಟಿಕ ಆಹಾರದಿಂದ ಆರೋಗ್ಯದ ಪ್ರಯೋಜನ ಪಡೆಯಲು ಸಹಕಾರಿಯಾಗಿದೆ.

Share This Article