ಕೆದಂಬಾಡಿ ರಾಮಯ್ಯ ಗೌಡರ ಸ್ಮಾರಕ ಬೆಂಗ್ಳೂರಲ್ಲೂ ಮಾಡ್ತೇವೆ, ಅವರ ವಿಚಾರಗಳನ್ನು ಪಠ್ಯದಲ್ಲಿ ತರುತ್ತೇವೆ: ಬೊಮ್ಮಾಯಿ

Public TV
4 Min Read

– ರೈತರು ಯಾವಾಗ ಹೋರಾಟಗಾರರಾಗುತ್ತಾರೋ ಅಂದೇ ಕ್ರಾಂತಿಯಾಗುತ್ತೆ

ಮಂಗಳೂರು: ಕೆದಂಬಾಡಿ ರಾಮಯ್ಯ ಗೌಡರ (Kedambadi Ramaiah Gowda) ಸ್ಮಾರಕ ಬೆಂಗಳೂರಿನಲ್ಲೂ (Bengaluru) ಮಾಡ್ತೇವೆ. ಅವರ ವಿಚಾರಗಳನ್ನು ಮುಂದೆ ಪಠ್ಯಗಳಲ್ಲೂ (Text Book)  ತರುತ್ತೇವೆ. ನಮ್ಮ ಎಲ್ಲಾ ಸಾಧನೆಗಳಿಗೆ ನಮ್ಮ ಸಾಧಕರ ಹೆಸರುಗಳೇ ಇರಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅಭಿಪ್ರಾಯಪಟ್ಟರು.

ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆಯನ್ನು ಮಂಗಳೂರಿನ (Mangaluru) ಬಾವುಟಗುಡ್ಡೆಯಲ್ಲಿ ಲೋಕಾರ್ಪಣೆ ಮಾಡಿದ ಬಳಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬ್ರಿಟಿಷರು ವ್ಯಾಪಾರಕ್ಕೆ ಬಂದು ನಮ್ಮ ನಮ್ಮೊಳಗೆ ದ್ವೇಷ ಹುಟ್ಟಿಸಿ ಆಡಳಿತ ಮಾಡಿದರು. ಬ್ರಿಟಿಷರ ವಿರುದ್ಧ ರೈತರು ತಿರುಗಿ ಬಿದ್ದಾಗ ರೈತ ಕುಟುಂಬದಲ್ಲಿ ಹುಟ್ಟಿದ್ದ ರಾಮಯ್ಯ ಗೌಡರು ರೈತರನ್ನೇ ಯೋಧರನ್ನಾಗಿಮಾಡಿದ್ದಾರೆ. ರೈತರು ಯಾವಾಗ ಹೋರಾಟಗಾರರಾಗುತ್ತಾರೋ ಅಂದೇ ಕ್ರಾಂತಿಯಾಗುತ್ತೆ ಎಂದು ನುಡಿದರು. ಇದನ್ನೂ ಓದಿ: ನಳಿನ್ ಕುಮಾರ್ ಕಟೀಲ್ ಆರೋಗ್ಯ ವಿಚಾರಿಸಿದ ಸಿಎಂ

ನಾವು ಭಾರತ್ ಮಾತಕೀ ಜೈ ಅಂತ ಕೂಗಲು ಸ್ವಾತಂತ್ರ್ಯ ಹೋರಾಟಗಾರರ ಕೆಜ್ಜೆದೆ ಕಾರಣ. ಅದರಲ್ಲಿ ಕೆದಂಬಾಡಿ ರಾಮಯ್ಯ ಗೌಡರು ಕೂಡ ಒಬ್ಬರು. ನಾವು ಸ್ವಾತಂತ್ರ್ಯ ನಂತರ ಹುಟ್ಟಿದವರು, ಪರಕೀಯರ ಆಡಳಿತದ ಬಿಸಿ ನಮಗೆ ಮುಟ್ಟಿಲ್ಲ. 1837 ಅಂದರೆ ಪೂರ್ಣ ಪ್ರಮಾಣದ ಗುಲಾಮಗಿರಿಯ ವಾತಾವರಣ. ಅಂತಹ ವಾತಾವರಣದಲ್ಲಿ ರಾಮಯ್ಯ ಗೌಡರು ಸ್ವಾತಂತ್ರ್ಯದ ಕಲ್ಪನೆ ಭಿತ್ತಿದ್ದರು. ಬ್ರಿಟಿಷರ ವಿರುದ್ಧ ಹೋರಾಡಿದ ಅವರ ದೇಶಭಕ್ತಿ ಹೇಗಿತ್ತು ಯೋಜನೆ ಮಾಡಿ. ವ್ಯಾಪಾರಕ್ಕೆ ಬಂದ ಬ್ರಿಟಿಷರು ನಮ್ಮ ಒಡಕಿನ ಪೂರ್ಣ ಪ್ರಯೋಜನ ಪಡೆದರು. ನಮ್ಮನ್ನೇ ಉಪಯೋಗಿಸಿ ಆಡಳಿತ ಮಾಡುವ ಕೆಲಸ ಮಾಡಿದರು. ಆದರೆ ನಮ್ಮಲ್ಲಿ ಸ್ವಾತಂತ್ರ್ಯದ ಕಿಚ್ಚು ಇತ್ತು. ಅವರಿಗೆ ಮೊದಲ ಬಾರಿಗೆ ದೇಶ ಬಿಡಬೇಕೆಂದು ಆಗಿದ್ದು ರೈತರು ತಿರುಗಿ ಬಿದ್ದಾಗ. ರಾಮಯ್ಯ ಗೌಡರು ರೈತ ಕುಟುಂಬದಲ್ಲಿ ಹುಟ್ಟಿ ರೈತರನ್ನೇ ಯೋಧರನ್ನಾಗಿ ಮಾಡಿದ್ರು. ರೈತರೇ ಯೋಧರಾಗಿ ತಿರುಗಿ ಬಿದ್ದಾಗ ಅವರಿಗೆ ಆತಂಕವಾಯಿತು. ದುಡಿಯೋ ವರ್ಗ ತಿರುಗಿ ಬಿದ್ದಾಗ ಬ್ರಿಟಿಷರು ಎಚ್ಚೆತ್ತುಕೊಂಡರು. ಆಗಲೇ ಅವರು ದೇಶ ಬಿಡೋ ಚಿಂತನೆ ಮಾಡಿದರು. ಅನಾಮಧೇಯ ಸ್ವಾತಂತ್ರ್ಯ ಹೋರಾಟಗಾರರ ಸಂಖ್ಯೆ ದೊಡ್ಡದು. ಆದರೆ ಯಾರೂ ಅವರ ಬಗ್ಗೆ ಬರೆಯಲಿಲ್ಲ, ಇತಿಹಾಸದಲ್ಲಿ ಇಲ್ಲ. ಅಂತವರಲ್ಲಿ ನಮ್ಮ ರಾಮಯ್ಯ ಗೌಡರು ಕೂಡ ಒಬ್ಬರು. ಇಂತಹ ನೂರಾರು ಜನ ನಮ್ಮ ರಾಜ್ಯದಲ್ಲಿ ಇದ್ದಾರೆ ಎಂದರು.

ನಮ್ಮ ಮಣ್ಣಲ್ಲೇ ಹುಟ್ಟಿದ ಕ್ರಾಂತಿ ಪುರುಷರನ ಪ್ರತಿಮೆ ಸ್ಥಾಪನೆಗೆ ಇಷ್ಟು ವರ್ಷ ಬೇಕಾಯ್ತಾ? ನಮ್ಮ ಯು.ಟಿ.ಖಾದರ್ ಒಳ್ಳೆ ಭಾಷಣ ಮಾಡ್ತಾರೆ, ಅವರ ಭಾಷಣದಲ್ಲಿ ಒಳಾರ್ಥ ಇರುತ್ತದೆ. ಖಾದರ್ ಆತ್ಮೀಯ ಸ್ನೇಹಿತನಾಗಿ ನನಗೆ ಅವರ ಒಳಾರ್ಥ ಗೊತ್ತು. ವಿಧಾನಸಭೆಯಲ್ಲಿ ಕೆಲವು ಮಾತನಾಡಬೇಕು, ಆದರೆ ಈ ಸಭೆ ಅತ್ಯಂತ ಪವಿತ್ರವಾಗಿದ್ದು. ಏರ್‌ಪೋರ್ಟ್‌, ವಿಮಾನನಿಲ್ದಾಣಕ್ಕೆ ನಿಮ್ಮ ಸರ್ಕಾರವೇ ಇದ್ದಾಗ ಹೆಸರು ಇಡಬಹುದು. ಈ ದೇಶದಲ್ಲಿ ಬಹಳ ಪುಕ್ಕಟೆಯಾಗಿ ಸಲಹೆ ಸೂಚನೆ ಕೊಡಬಹುದು. ಆದರೆ ಮೊದಲು ಯಾಕೆ ಮಾಡಿಲ್ಲ ಅನ್ನೋದನ್ನು ಯೋಚಿಸಬೇಕು. ಕಳೆದುಹೋದ ಇತಿಹಾಸ ಹುಡುಕಿ ಕೊಟ್ಟ ಮಂಗಳೂರಿಗರಿಗೆ ಧನ್ಯವಾದಗಳು. ನನಗೆ ರಾಮಯ್ಯ ಗೌಡರ ಪ್ರತಿಮೆ ಅನಾವರಣ ಮಾಡಿ ಒಂದು ಹೊಳೆದಿದೆ. ಬೆಂಗಳೂರಿನಲ್ಲಿ ಅನಾಮಧೇಯ ಹೋರಾಟಗಾರರ ಸ್ಮಾರಕ ನಿರ್ಮಿಸುತ್ತೇನೆ. ಇದಕ್ಕೆ ಸ್ಪೂರ್ತಿಯಾದ ಮಂಗಳೂರಿನ ಎಲ್ಲರಿಗೂ ಧನ್ಯವಾದ ತಿಳಿಸಿದರು. ಇದನ್ನೂ ಓದಿ: ದಶಪಥ ರಸ್ತೆ ನೋಡಿದ್ರೆ ಅಸಹ್ಯವಾಗುತ್ತೆ- ಸಂಸದರ ಮನೆ ಮುಂದೆ ಧರಣಿ ಮಾಡ್ತೀನಿ: ಶಾಸಕ ಎಚ್ಚರಿಕೆ

ಬಂಧುಗಳೇ ನಾನು ಇಲ್ಲಿ ಸಿಎಂ ಆಗಿ ಬಂದಿಲ್ಲ. ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸಲು ಸೇವಕನಾಗಿ ಬಂದಿದ್ದೇನೆ. ನಾವು ನಮ್ಮ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಬೇಕು. ದೇಶಕ್ಕಾಗಿ ಪ್ರಾಣ ಕೊಡುವ ಕಾಲ ಇಲ್ಲ. ಈಗ ದೇಶಕ್ಕಾಗಿ ಬದುಕಬೇಕಿದೆ. ದೇಶದ ಭವಿಷ್ಯ ಉಜ್ವಲವಾಗಲಿ ಅಂತಹ ಹೆಜ್ಜೆಗಳನ್ನು ನಾವು ಇಡಬೇಕು. ನಮ್ಮ ಸಂಸ್ಕೃತಿ ಮತ್ತು ನಮ್ಮ ಪರಂಪರೆ ನಮ್ಮನ್ನು ಕಾಪಾಡ್ತಾ ಇದೆ. ಇಡೀ ದೇಶದಲ್ಲಿ ಹಣದುಬ್ಬರ ಸಮಸ್ಯೆ ಇದ್ದರೂ ನಮ್ಮಲ್ಲಿ ಇಲ್ಲ. ನಮ್ಮ ಜನರಿಗೆ ಉಳಿತಾಯ ಮಾಡುವ ಸಂಸ್ಕೃತಿ ಇದೆ. ಇದರಿಂದ ನಾವು ದೇಶದ ಆರ್ಥಿಕತೆಯಲ್ಲಿ ಭಾಗಿಯಾಗಲು ಸಾಧ್ಯವಾಗುತ್ತೆ. ಎಲ್ಲಾ ಧರ್ಮವೂ ದೇಶ ಭಕ್ತಿಯ ಬಗ್ಗೆ ಅತ್ಯಂತ ಸ್ಪಷ್ಟವಾಗಿ ಹೇಳಿದೆ. ನೀನು ಹುಟ್ಟಿದ ಮಣ್ಣಿಗೆ ನಿನ್ನ ಮೊದಲ ಆದ್ಯತೆ ಅಂತ ಹೇಳಿದೆ. ಆದರೆ ನಮ್ಮ ದೇಶದಲ್ಲಿ ಆಗ್ತಿರೋದನ್ನು ನೋಡಿದ್ರೆ ಬೇಸರ ಆಗುತ್ತದೆ. ಕಾಲಾಪಾಣಿಗೆ ವೀರಸಾವರ್ಕರ್ ಹೋದ್ರು, ಅಲ್ಲೂ ಅವರನ್ನು ಕ್ರೂರವಾಗಿ ನಡೆಸಿಕೊಳ್ಳಲಾಗಿದೆ. ಅವರ ತ್ಯಾಗ ಬಲಿದಾನ ಮರೆಯಬಾರದು, ಅದನ್ನು ಮರೆತವರು ದೇಶ ಪ್ರೇಮಿಗಳೇ ಅಲ್ಲ. ನಾವು ಮುಂದಿನ ಜನಾಂಗ ಕಟ್ಟುವ ಕೆಲಸ ಮಾಡಬೇಕು. ದಾಸ್ಯದ ಕುರುಹುಗಳು ಕೂಡ ಮುಂದೆ ನಮ್ಮ ದೇಶದಲ್ಲಿ ಇರಬಾರದು. ರಾಣಿ ಅಬ್ಬಕ್ಕ, ನಾರಾಯಣ ಗುರುಗಳ ಹೆಸರಿಡಲು ಸರ್ಕಾರ ಸ್ಪಂದಿಸುತ್ತೆ. ನಾನು ಸಾಕಷ್ಟು ಶಕ್ತಿ ಮತ್ತು ಪ್ರೇರಣೆ ಈ ಕಾರ್ಯಕ್ರಮದಲ್ಲಿ ಪಡೆದಿದ್ದೇನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ನಿರ್ಮಲಾನಂದ ಮಹಾ ಸ್ವಾಮೀಜಿ. ದ.ಕ ಉಸ್ತುವಾರಿ ಸಚಿವ ಸುನೀಲ್ ಕುಮಾರ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭಾಗಿ, ಸಚಿವರಾದ ಎಸ್.ಅಂಗಾರ, ಅಶ್ವಥ್ ನಾರಾಯಣ, ಜಿಲ್ಲೆಯ ಶಾಸಕರಾದ ಸಂಜೀವ ಮಠಂದೂರು, ವೇದವ್ಯಾಸ ಕಾಮತ್ ಮತ್ತು ಭರತ್ ಶೆಟ್ಟಿ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *