ಚಪ್ಪಲಿ ಎಸೆದಿದ್ದು, ಹಲ್ಲೆ ಮಾಡಿದ್ದು ಓರಗಿತ್ತಿ ಪ್ರೇಮಾ – ಸಾಕ್ಷ್ಯ ಬಯಲು ಮಾಡಿದ ನಟಿ ಕಾವ್ಯ ಗೌಡ

3 Min Read

‘ರಾಧಾ ರಮಣ’, ‘ಗಾಂಧಾರಿ’ ಸೀರಿಯಲ್ ಖ್ಯಾತಿಯ ನಟಿ ಕಾವ್ಯ ಗೌಡ (Kavya Gowda) ಮತ್ತು ಓರಗಿತ್ತಿ ಕಲಹ ಮತ್ತೆ ಮುನ್ನೆಲೆಗೆ ಬಂದಿದೆ. ಓರಗಿತ್ತಿ ಪ್ರೇಮಾ ಮಧ್ಯೆ ನಡೆದಿದ್ದ ಗಲಾಟೆಯ ಸಿಸಿಟಿವಿ ಸಾಕ್ಷ್ಯವನ್ನ ನಟಿ ಬಯಲು ಮಾಡಿದ್ದಾರೆ.

ನಟಿ ಕಾವ್ಯ ಗೌಡ – ಓರಗಿತ್ತಿ ಪ್ರೇಮಾ ಮಧ್ಯೆ ಗಲಾಟೆ ನಡೆದಿತ್ತು. ಸಹೋದರರಾಗಿ ಸೋಮಶೇಖರ್ – ನಂದೀಶ್ ಕೈ ಕೈ ಮಿಲಾಯಿಸಿದ್ದರು. ಪ್ರಕರಣ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿತ್ತು. ಪ್ರೇಮಾ ವಿರುದ್ಧ ಕಾವ್ಯ ಗೌಡ ದೂರು ದಾಖಲಿಸಿದ್ದರು. ಕಾವ್ಯ ಗೌಡ ಮೇಲೆ ಪ್ರೇಮಾ ಸಹ ಪ್ರತಿ ದೂರು ನೀಡಿದ್ದರು. ಈಗ ನೋಡಿದ್ರೆ, ತಮ್ಮ ಮೇಲೆ ಚಪ್ಪಲಿ ಎಸೆದಿದ್ದು, ಹಲ್ಲೆ ಮಾಡಿದ್ದು ಓರಗಿತ್ತಿ ಪ್ರೇಮಾ ಎಂಬುದಕ್ಕೆ ಸಿಸಿಟಿವಿ ಸಾಕ್ಷ್ಯ ಒದಗಿಸಿದ್ದಾರೆ ನಟಿ ಕಾವ್ಯ ಗೌಡ.

ಕೌಟುಂಬಿಕ ಕಲಹ ಮುನ್ನಲೆಗೆ ತಂದ ಕಾವ್ಯಗೌಡ
ಪ್ಯಾಲೇಸ್‌ನಂತಿರುವ ಮನೆಗಾಗಿ ಆಸೆಪಟ್ಟು ಕಾವ್ಯ ಗೌಡ ಕಿರಿಕ್ ಮಾಡುತ್ತಿದ್ದಾರೆ ಅಂತ ಪ್ರೇಮಾ ದೂರಿದ್ದರು. ನನ್ನ ತಂಗಿಗೆ ಹೊಡೆದಿದ್ದಕ್ಕೆ ನನ್ನ ತಂದೆ ಮನೆ ತನಕ ಬಂದಿದ್ದಾರೆ. ನನ್ನ ತಂದೆಯನ್ನೇ ಕಾವ್ಯ ಗೌಡ ಪತಿ ಸೋಮಶೇಖರ್ ಹೊಡೆದಿದ್ದಾರೆ. ಸೋಮಶೇಖರ್ ಪ್ಯಾಂಟ್‌ ರಿಮೂವ್ ಮಾಡಿ ಮಿಸ್ ಬಿಹೇವ್ ಮಾಡಿದ್ದಾರೆ. ಕಾವ್ಯ ಅಕ್ಕ ಭವ್ಯಾ ಗೌಡ ನಮ್ಮ ಮೇಲೆ ಅಟ್ಯಾಕ್ ಮಾಡಿದ್ದಾರೆ. ನನ್ನ ತಂಗಿ ಮೇಲೆ ಸೋಮಶೇಖರ್‌ ಹಲ್ಲೆ ಮಾಡಿ, ಡ್ರೆಸ್ ಹರಿದು ಹಾಕಿ, ರೇಪ್ ಮಾಡ್ತೀನಿ ಅಂತ ಬೆದರಿಕೆ ಹಾಕಿದ್ದಾರೆ. ನಮ್ಮನ್ನ ಮನೆಯಿಂದ ಆಚೆ ಹಾಕೋಕೆ ಕಿರಿಕ್ ಮಾಡುತ್ತಿದ್ದಾರೆ ಎಂದು ಪ್ರೇಮಾ ಮಾಧ್ಯಮಗಳ ಮುಂದೆ ಆರೋಪ ಮಾಡಿದ್ದರು.

ಈಗ ಕಾವ್ಯ ಗೌಡ ಕೆಲ ಸಿಸಿಟಿವಿ ದೃಶ್ಯಾವಳಿಗಳನ್ನ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಸಿಸಿಟಿವಿ ವಿಡಿಯೋಗಳಲ್ಲಿ ಕಾವ್ಯ ಗೌಡ ಮೇಲೆ ಪ್ರೇಮಾ ತಂಗಿ ಹಲ್ಲೆ ಮಾಡುತ್ತಿರುವುದು, ಕಾವ್ಯ ಗೌಡ ಮೇಲೆ ಪ್ರೇಮಾ ಚಪ್ಪಲಿ ಎಸೆದಿರುವುದು ಸ್ಪಷ್ಟವಾಗಿದೆ.

ಕಾವ್ಯಗೌಡ ಇನ್‌ಸ್ಟಾ ಸ್ಟೋರಿಯಲ್ಲಿ ಏನಿದೆ?
ನೀವು ಬರೀ ಒನ್‌ ಸೈಡ್‌ ಕಥೆ ಮತ್ತು ಸುಳ್ಳು ಆರೋಪಗಳನ್ನ ಮಾತ್ರ ಕೇಳಿದ್ದೀರಿ. ಇದೀಗ ನಾನು ಸತ್ಯವನ್ನ ಹೊರಗೆ ಹಾಕಬೇಕು. ಇದರ ಹಿಂದಿರುವ ಕ್ರೂರ ಮುಖಗಳನ್ನ ನಾನು ಹೊರಗೆ ತರಬೇಕು ಎಂದು ಇನ್ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.

ಹಾಗೇ, ‘’ನಮಸ್ತೆ ಎಲ್ಲರಿಗೂ.. ನಾಲಿಗೆಗೆ ಎಲುಬಿಲ್ಲ ಎಂದುಕೊಂಡು, ಯಾರ ಜೀವನದ ಬಗ್ಗೆ ಏನು ಬೇಕಾದರೂ ಮಾತನಾಡೋದು ನ್ಯಾಯ ಅಲ್ಲ. ಮಾತುಗಳಿಗೂ ಜವಾಬ್ದಾರಿ ಇರಬೇಕು. ನಾನು ಯಾವತ್ತೂ ಮಾಧ್ಯಮದ ಮುಂದೆ ಮಾತನಾಡುವವಳಲ್ಲ. ಮೌನವೇ ನನ್ನ ಉತ್ತರ ಎಂದು ನಂಬಿ ಬದುಕಿದವಳು ನಾನು. ಆದರೆ ಇವತ್ತು ಮಾತನಾಡಬೇಕಾದ ಪರಿಸ್ಥಿತಿ ಬಂದಿದೆ. ಯಾಕೆಂದರೆ ನಾನು ಸತ್ಯವನ್ನು ನಂಬಿ ಬದುಕಿದವಳು. ಯಾರಿಗೂ ಕೆಟ್ಟದ್ದನ್ನು ಮಾಡದೆ, ನನ್ನ ಜೀವನವನ್ನು ಗೌರವದಿಂದ ಸಾಗಿಸಿದವಳು ನಾನು. ನೋವು, ಅವಮಾನ, ಕಣ್ಣೀರು.. ಇವೆಲ್ಲವನ್ನೂ ನಾನು ಮೌನವಾಗಿ ಸಹಿಸಿಕೊಂಡಿದ್ದೇನೆ. ಆ ದಿನಗಳಲ್ಲಿ ನನ್ನ ಸ್ಥಿತಿ ನನಗೆ ಮಾತ್ರ ಗೊತ್ತಿತ್ತು. ತೊಂದರೆ ಕೊಟ್ಟರೂ ಸಹಿಸಿಕೊಂಡೆ. ಕೈ ಎತ್ತಿದರೂ ಸಹಿಸಿಕೊಂಡೆ. ಏಕೆಂದರೆ ನನ್ನ ಮರ್ಯಾದೆ, ನನ್ನ ಕುಟುಂಬ, ನನ್ನ ಮಗು ಇವೆಲ್ಲ ನನಗೆ ಮುಖ್ಯವಾಗಿತ್ತು. ನನ್ನ ಗಂಡನ ಸ್ಥಿತಿ, ನನ್ನ ಮಗುವಿನ ನೋವು, ನನಗೆ ಮಾತ್ರ ಗೊತ್ತು. ಇವುಗಳನ್ನು ನಾನು ಮಾತ್ರ ಕಂಡಿದ್ದೇನೆ. ಆದರೂ ನಾನು ಕುಸಿಯಲಿಲ್ಲ. ನ್ಯಾಯಾಲಯ ಮತ್ತು ಸತ್ಯದ ಮೇಲೆ ನನ್ನ ನಂಬಿಕೆಯನ್ನು ಕಳೆದುಕೊಳ್ಳಲಿಲ್ಲ. ನನ್ನ ಮೇಲೆ ಅಪವಾದಗಳು ಬಂದವು. ಆಸ್ತಿ ವಿಚಾರದ ಹೆಸರಿನಲ್ಲಿ ನನ್ನ ಹೆಸರನ್ನು ಹಾಳುಮಾಡಲು ಪ್ರಯತ್ನವಾಯಿತು. ಆದರೂ ನಾನು ಸತ್ಯದ ದಾರಿಯನ್ನು ಬಿಟ್ಟಿಲ್ಲ. ಏಕೆಂದರೆ ಸತ್ಯ ಯಾವತ್ತೂ ತಲೆಬಾಗುವುದಿಲ್ಲ. ಸತ್ಯ ಸಮಯ ತೆಗೆದುಕೊಳ್ಳಬಹುದು, ಆದರೆ ಸೋಲುವುದಿಲ್ಲ. ಇವತ್ತು ಸತ್ಯ ನನ್ನ ಜೊತೆ ನಿಂತಿದೆ. ನಾನು ತಪ್ಪು ಮಾಡಿಲ್ಲ ಎಂಬುದಕ್ಕೆ ಇದೇ ಸಾಕ್ಷಿ. ಸತ್ಯಮೇವ ಜಯತೆ. ಸತ್ಯ ಮಾತ್ರ ಗೆಲ್ಲುತ್ತದೆ’’ ಎಂದು ಇನ್ಸ್ಟಾಗ್ರಾಮ್‌ನಲ್ಲಿ ಕಾವ್ಯ ಗೌಡ ಬರೆದುಕೊಂಡಿದ್ದಾರೆ.

ಭಾನುವಾರ (ಫೆ.22) ಸುದ್ದಿಗೋಷ್ಠಿ ನಡೆಸಲಿರುವ ನಟಿ ಇನ್ನಷ್ಟು ವಿಚಾರಗಳನ್ನು ಬಯಲಿಗೆಳೆಯುವುದಾಗಿ ತಿಳಿಸಿದ್ದಾರೆ.

Share This Article