ಕಾವ್ಯಾ ಅಸಹಜವಾಗಿ ಸಾವನ್ನಪ್ಪಿದ್ದಾಳೆ: ಉಗ್ರಪ್ಪ ಕಾಲೇಜಿಗೆ ಭೇಟಿ ನೀಡಿದಾಗ ಸಿಕ್ಕಿರೋ ಸ್ಫೋಟಕ ಮಾಹಿತಿ ಇಲ್ಲಿದೆ

Public TV
3 Min Read

ಮಂಗಳೂರು: ರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ್ತಿ ಕಾವ್ಯಾ ಸಾವಿನ ಪ್ರಕರಣ ಮೂಡಬಿದ್ರೆಯ ಆಳ್ವಾಸ್ ವಿದ್ಯಾಸಂಸ್ಥೆಗೆ ಕಂಟಕವಾಗುವ ಸಾಧ್ಯತೆ ಗೋಚರಿಸಿದೆ. ಕಾವ್ಯಾಳ ನಿಗೂಢ ಸಾವಿನಿಂದಾಗಿ ಆಳ್ವಾಸ್ ಶಿಕ್ಷಣ ಸಂಸ್ಥೆ ಪರವಾನಗಿ ಇಲ್ಲದೆ ವಸತಿ ಶಾಲೆ ನಡೆಸುತ್ತದೆ ಎನ್ನುವ ವಿಚಾರ ಬಹಿರಂಗಗೊಂಡಿದೆ.

ಹೌದು. ಕಾವ್ಯ ಸಾವಿನ ಹಿನ್ನಲೆಯಲ್ಲಿ ಮಕ್ಕಳ ಮತ್ತು ಮಹಿಳಾ ದೌರ್ಜನ್ಯ ತಡೆ ಸಮಿತಿಯ ಅಧ್ಯಕ್ಷ ವಿ.ಎಸ್.ಉಗ್ರಪ್ಪ ನೇತೃತ್ವದ ತಂಡ ಆಳ್ವಾಸ್ ಶಿಕ್ಷಣ ಸಂಸ್ಥೆಗೆ ತೆರಳಿ ಪರಿಶೀಲಿಸಿದಾಗ ಈ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಅಷ್ಟೇ ಅಲ್ಲದೇ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಅವರು ಕಾವ್ಯ ಅಸಹಜವಾಗಿ ಸಾವನ್ನಪ್ಪಿದ್ದಾಳೆ ಎಂದು ಹೇಳಿದ್ದಾರೆ.

ಭೇಟಿಯ ವೇಳೆ ರೆಸಿಡೆನ್ಶಿಯಲ್ ಸ್ಕೂಲ್ ನಡೆಸಲು ಆಳ್ವಾಸ್ ಸಂಸ್ಥೆಗೆ ಅನುಮತಿ ಇಲ್ಲದಿರುವುದನ್ನು ಉಗ್ರಪ್ಪ ಕಂಡುಕೊಂಡಿದ್ದಾರೆ. ಅಲ್ಲದೆ, ಶಿಕ್ಷಣ ಸಂಸ್ಥೆಯಲ್ಲಿ 18 ಸಾವಿರ ಮಕ್ಕಳಿಗೆ ಹಾಸ್ಟೆಲ್ ವ್ಯವಸ್ಥೆಯಿದ್ದು, ಹಾಸ್ಟೆಲಿಗೆ ಅನುಮತಿ ಇಲ್ಲದೇ ಇರುವುದರಿಂದ ಕಾನೂನು ಉಲ್ಲಂಘನೆ ಎಸಗಿರುವುದು ಬೆಳಕಿಗೆ ಬಂದಿದೆ.

ಕಾವ್ಯಾ ಆತ್ಮಹತ್ಯೆ ಮಾಡಿಕೊಂಡ ಹಾಸ್ಟೆಲ್ ಮತ್ತು ಹೈಸ್ಕೂಲಿಗೆ ಭೇಟಿ ನೀಡಿದ ತಂಡ, ಅಲ್ಲಿನ ಸಿಬ್ಬಂದಿ ಮತ್ತು ವಿದ್ಯಾರ್ಥಿನಿಯರನ್ನು ಪ್ರಶ್ನೆ ಮಾಡಿತು. ಬಳಿಕ ರೆಸಿಡೆನ್ಶಿಯಲ್ ಸ್ಕೂಲ್ ಬಗ್ಗೆ ಶಿಕ್ಷಣ ಅಧಿಕಾರಿಗಳು ಮತ್ತು ಆಳ್ವಾಸ್ ಆಡಳಿತ ಮಂಡಳಿಯನ್ನು ಪ್ರಶ್ನಿಸಿ ತೀವ್ರ ತರಾಟೆಗೆತ್ತಿಕೊಂಡಿದೆ. ಅನುಮತಿ ಇಲ್ಲದೇ ವಸತಿ ಶಾಲೆ ನಡೆಸುತ್ತಿರುವ ಬಗ್ಗೆ ಅಧಿಕಾರಿಗಳಿಂದ ವರದಿ ಕೇಳಲಾಗಿದ್ದು,ಅಷ್ಟೇ ಅಲ್ಲದೆ, ಕಾವ್ಯಾಳನ್ನು ಹಾಸ್ಟೆಲಿನಿಂದ ಆಸ್ಪತ್ರೆಗೆ ಕೊಂಡೊಯ್ದಿದ್ದ ವಿದ್ಯಾರ್ಥಿನಿಯರನ್ನು ಪ್ರಶ್ನಿಸಿ ಮಾಹಿತಿಯನ್ನು ತಂಡ ಪಡೆದುಕೊಂಡಿದೆ.

ಘಟನೆ ನಡೆದಿದ್ದ ಸಂದರ್ಭದಲ್ಲಿ ಹಾಸ್ಟೆಲ್ ವಾರ್ಡನ್ ಇರಲಿಲ್ಲ. ಹೀಗಾಗಿ ಆಕೆಯನ್ನು ಇತರೇ ವಿದ್ಯಾರ್ಥಿಗಳು ಆಸ್ಪತ್ರೆಗೆ ಕರೆದೊಯ್ದಿದ್ದಾರೆಂಬ ಮಾಹಿತಿ ಹಿನ್ನೆಲೆಯಲ್ಲಿ ಮಾಹಿತಿ ಪಡೆದಿದ್ದೇನೆ. ರೆಸಿಡೆನ್ಸಿಯಲ್ ಸ್ಕೂಲ್‍ಗೆ ಇರಬೇಕಾದ ಮಾನದಂಡಗಳನ್ನು ಅನುಸರಿಸದೇ ಇದ್ದ ಕಾರಣ ಕಾವ್ಯಾ ಸಾವು ಸಂಭವಿಸಿದೆ. ಹೀಗಾಗಿ ಈ ಸಾವಿಗೆ ಆಳ್ವಾಸ್ ಸಂಸ್ಥೆಯೇ ಹೊಣೆ ಹೊರಬೇಕು ಉಗ್ರಪ್ಪ ಹೇಳಿದರು.

ಹಾಸ್ಟೆಲ್ ಸುರಕ್ಷತೆಗೆ ಸಂಬಂಧಿಸಿದ ಎಲ್ಲಾ ಕಾನೂನುಗಳನ್ನು ಗಾಳಿಗೆ ತೂರಲಾಗಿದೆ. ಸಂಸ್ಥೆಯ ಸಿಬ್ಬಂದಿಗೆ ಕನಿಷ್ಠ ವೇತನ ನೀಡುತ್ತಿಲ್ಲ. 7 ರಿಂದ 24 ಸಾವಿರ ರೂ. ಸಂಬಳ ನೀಡುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಆಳ್ವಾಸ್ ಶಿಕ್ಷಣ ಸಂಸ್ಥೆಯ ಕಟ್ಟಡದಲ್ಲಿ ಲೋಪಗಳಿವೆ. ಕೆಳ ಅಂತಸ್ತಿನಲ್ಲಿ ಸ್ಕೂಲ್, ಮೇಲಂತಸ್ತಿನಲ್ಲಿ ಹಾಸ್ಟೆಲ್ ಇದೆ. ಕಾನೂನಿನಲ್ಲಿ ಇದಕ್ಕೆ ಅವಕಾಶ ಇಲ್ಲ. ಇದರಲ್ಲಿ ಮಕ್ಕಳ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆಯ ಲೋಪ ಕಂಡು ಬಂದಿದೆ. ಹೀಗಾಗಿ ಆಳ್ವಾಸ್ ಸಂಸ್ಥೆಯಿಂದ ಕಾವ್ಯಾ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಸರ್ಕಾರಕ್ಕೆ ಶಿಫಾರಸು ಮಾಡುತ್ತೇನೆ ಎಂದು ಅವರು ಹೇಳಿದರು.

ಇದೇ ವೇಳೆ, ಜಿಲ್ಲೆಯಲ್ಲಿ ಸುಮಾರು 28 ವಸತಿಯುತ ಖಾಸಗಿ ಶಾಲೆಗಳು ಅನುಮತಿಯಿಲ್ಲದೆ ಕಾರ್ಯನಿರ್ವಹಿಸುತ್ತಿರುವುದೂ ಬೆಳಕಿಗೆ ಬಂದಿದ್ದು, ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ಕ್ರಮ ಕೈಗೊಳ್ಳಲು ಸೂಚನೆ ನೀಡುತ್ತೇನೆ ಎಂದು ಉಗ್ರಪ್ಪ ತಿಳಿಸಿದರು.

ಪಬ್ಲಿಕ್ ಟಿವಿಗೆ ಜೊತೆ ಮಾತನಾಡಿದ ಉಗ್ರಪ್ಪ ಅವರು ಪರಿಶೀಲನೆ ನಡೆಸಿದ ವೇಳೆ ಕಂಡುಕೊಂಡ ವಿಚಾರಗಳನ್ನು ತಿಳಿಸಿದರು. ಇದೇ ವೇಳೆ ತನಿಖೆ ನಡೆಸುವ ಸಂದರ್ಭದಲ್ಲಿ ಎಲ್ಲ ವಿಚಾರಗಳನ್ನು ನಾನು ಈಗ ಬಹಿರಂಗ ಪಡಿಸುವುದು ಅಷ್ಟು ಸರಿಯಲ್ಲ. ಸತ್ಯಾಸತ್ಯತೆ ಪೊಲೀಸ್ ತನಿಖೆಯಿಂದ ಬರಬೇಕಿದೆ. ಈ ಸಾವಿಗೆ ಅನೇಕ ಮಂದಿ ಒಂದು ರೀತಿಯಲ್ಲಿ ಕಾರಣರಾಗಿದ್ದಾರೆ ಎಂದು ಅವರು ಹೇಳಿದರು.

ಕುಸಿದುಬಿದ್ದ ಅಧಿಕಾರಿ: ಕಾವ್ಯಾ ನಿಗೂಢ ಸಾವಿನ ಹಿನ್ನೆಲೆಯಲ್ಲಿ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ಸುಂದರ್ ಪೂಜಾರಿ ಕುಸಿದು ಬಿದ್ದ ಘಟನೆಯೂ ನಡೆಯಿತು. ಕಾವ್ಯ ಸಾವಿನ ಹಿನ್ನೆಲೆಯಲ್ಲಿ ಸುಂದರ್ ಪೂಜಾರಿ ಅವರನ್ನು ಉಗ್ರಪ್ಪ ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಈ ವೇಳೆ ಕುಸಿದು ಬಿದ್ದ ಸುಂದರ್ ಪೂಜಾರಿ ಅವರನ್ನು ಸಭೆಯಿಂದ ಅಧಿಕಾರಿಗಳು ಆಸ್ಪತ್ರೆಗೆ ದಾಖಲಿಸಿದರು. ಕಳೆದ ವರ್ಷವೂ ಈ ಅಧಿಕಾರಿ ಉಗ್ರಪ್ಪ ಪ್ರಶ್ನೆಗೆ ಕುಸಿದು ಬಿದ್ದಿದ್ದರು.

ಇದನ್ನೂ ಓದಿ: ವಿದ್ಯಾರ್ಥಿನಿ ಕಾವ್ಯಶ್ರೀ ನಿಗೂಢ ಸಾವು ಪ್ರಕರಣ: ಆಳ್ವಾಸ್ ಬೆನ್ನಿಗೆ ನಿಂತ ಎಚ್‍ಡಿಕೆ

https://youtu.be/afDao6a6_FM

https://youtu.be/HNGQPVsAIq4

 

https://www.youtube.com/watch?v=75vzrVm8Z6w

https://www.youtube.com/watch?v=BgvrrloxXoQ

https://www.youtube.com/watch?v=9upWi0NOWqw

Share This Article
Leave a Comment

Leave a Reply

Your email address will not be published. Required fields are marked *