ಕಳ್ಳತನವಾಗಿದ್ದ ಕೆಎಎಸ್ ಅಧಿಕಾರಿ ಭೀಮಾನಾಯ್ಕ್ ಸಹೋದರನ ವಜ್ರ-ಚಿನ್ನಾಭರಣ ಪತ್ತೆ!

Public TV
1 Min Read

ಬಳ್ಳಾರಿ: ಸಂಡೂರು ತಾಲೂಕಿನ ಸುಶೀಲನಗರ ಗ್ರಾಮದಲ್ಲಿ ನಡೆದ ಕಳ್ಳತನ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶ್ವಸಿಯಾಗಿದ್ದು, ಈ ಮೂಲಕ ಕೆಎಎಸ್ ಅಧಿಕಾರಿ ಭೀಮಾನಾಯ್ಕ್ ಸಹೋದರ ಕೃಷ್ಣಾನಾಯ್ಕ್ ಗೆ ಸೇರಿದ ವಜ್ರಾಭರಣಗಳು ಪತ್ತೆಯಾಗಿವೆ.

ಸುಶೀಲನಗರ ನಿವಾಸಿ ಖೀರೂನಾಯ್ಕ ಬಂಧಿತ ಆರೋಪಿ. ಬಂಧಿತ ಆರೋಪಿಯಿಂದ ಸುಮಾರು 132.700 ಮಿ.ಗ್ರಾಂ ತೂಕದ ವಜ್ರ ಮತ್ತು ಚಿನ್ನಾಭರಣವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ವಜ್ರಾಭರಣಗಳ ಮೌಲ್ಯ ಸುಮಾರು 15.90 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಏನಿದು ಪ್ರಕರಣ?: 2017ರ ಜನವರಿ 3 ರಂದು ಸುಶೀಲ ನಗರ ಗ್ರಾಮದ ಉಮಾನಾಯ್ಕ್ ರ ಪತ್ನಿ ಜ್ಯೋತಿಬಾಯಿಯರನ್ನು ಕಟ್ಟಿ, ಜೀವ ಬೆದರಿಕೆ ಹಾಕಿ ಸುಮಾರು 17 ಲಕ್ಷ ರೂ. ಮೌಲ್ಯದ ಬಂಗಾರ ಮತ್ತು ವಜ್ರದ ಅಭರಣಗಳನ್ನು ದೋಚಿಕೊಂಡು ಪರಾಗಿಯಾಗಿದ್ದರು. ಈ ಸಂಬಂಧ ಜ್ಯೋತಿಬಾಯಿ ಸಂಡೂರು ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಈ ಬಂಗಾರದ ಆಭರಣಗಳು ಬೆಂಗಳೂರಿನ ವಿಶೇಷ ಭೂ ಸ್ವಾಧಿನಾಧಿಕಾರಿ ಹಾಗೂ ಕೆಎಎಸ್ ಅಧಿಕಾರಿ ಭೀಮಾನಾಯ್ಕ್ ಸಹೋದರ ಕೃಷ್ಣಾನಾಯ್ಕ್ ಗೆ ಸೇರಿದ್ದಾಗಿದೆ. ಕೃಷ್ಣಾನಾಯ್ಕ್ ರಿಂದ ತಗೆದುಕೊಂಡು ಬಂದಿದ್ದ ಬಂಗಾರದ ಆಭರಣಗಳನ್ನು ಜ್ಯೋತಿಭಾಯಿ ತಮ್ಮ ಮನೆಯಲ್ಲಿರಿಸಿದ್ದಾಗ ಆರೋಪಿಗಳು ಕಳ್ಳತನ ಮಾಡಿದ್ದರೆಂದು ದೂರು ದಾಖಲಾಗಿತ್ತು. ಕಳ್ಳತನದ ಆರೋಪಿ ಖೀರೂನಾಯ್ಕ್ , ಜ್ಯೋತಿಭಾಯಿ ಅವರ ಅಕ್ಕನ ಗಂಡ ಎಂದು ತಿಳಿದುಬಂದಿದೆ.

ಬಳ್ಳಾರಿ ಡಿಸಿಬಿ ವಿಶೇಷ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಹಸನ್‍ಸಾಬ್ ಮತ್ತು ಪಿ.ಎಸ್.ಐ. ರಷೀದ್ ಅಹಮ್ಮದ್ ನೇತೃತ್ವದಲ್ಲಿ ಎಸ್.ದಿನಕರ, ಎಸ್.ಮಂಜುನಾಥ, ಸುಧೀರ್‍ಕುಮಾರ್, ಎಂ.ನವಾಬ್, ಬಿ.ಎಂ.ಸದ್ಯೋಜಾತಯ್ಯ, ಧಾರಾಸಿಂಗ್ ಉಮಾಮಹೇಶ್ವರ, ಕೆ.ಸುರೇಶ್, ಪಿ.ಲಲಿತಮ್ಮ ಅವರನ್ನು ಒಳಗೊಂಡ ತಂಡವನ್ನು ಈ ಪ್ರಕರಣದ ಪತ್ತೆಗಾಗಿ ನಿಯೋಜಿಸಲಾಗಿತ್ತು.

 

Share This Article
Leave a Comment

Leave a Reply

Your email address will not be published. Required fields are marked *