ಒಂದು ಲಕ್ಷ ರೂ.ಗೆ ಹರಾಜಾಯ್ತು ದೇವರ ಪ್ರಸಾದ

Public TV
1 Min Read

ಕಾರವಾರ: ನಗರದ ಮಾರುತಿ ಮಂದಿರದ ಜಾತ್ರೆ ಪ್ರಯುಕ್ತ ದೇವರ ಪ್ರಸಾದವನ್ನು ಹರಾಜು ಹಾಕಲಾಗಿದ್ದು, ಒಂದು ಲಕ್ಷ ರೂ.ಗೆ ಹರಾಜಾಗುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.

ಪ್ರತಿ ವರ್ಷದಂತೆ ಈ ವರ್ಷವೂ ನಗರದ ಮಾರುತಿ ಗಲ್ಲಿಯ ಆಂಜನೇಯ ಸ್ವಾಮಿ ದೇವಸ್ಥಾನದ ಜಾತ್ರಾ ಮಹೋತ್ಸವ ನಡೆಯಿತು. ಈ ಸಂದರ್ಭದಲ್ಲಿ ಜಾತ್ರೆಯ ಕೊನೆಯ ದಿನದಂದು ಹಣ್ಣು, ಕಾಯಿ, ಹೂವುಗಳನ್ನೊಳಗೊಂಡ ದೇವರ ಪ್ರಸಾದವನ್ನು ದೇವಸ್ಥಾನದ ಆಡಳಿತ ಮಂಡಳಿ ಭಕ್ತರ ಮುಂದೆ ಹರಾಜು ಹಾಕಿತು. ಈ ಬಾರಿ ಅತಿ ಹೆಚ್ಚು ಹಣಕ್ಕೆ ಪ್ರಸಾದ ಹರಾಜಾಗಿದ್ದು, ಮೊದಲ ಬಾರಿಗೆ ಒಂದು ಲಕ್ಷ ರೂ. ತಲುಪಿದೆ.

ನಗರದ ಮಾರುತಿ ಗಲ್ಲಿಯ ಎಲ್.ಐ.ಸಿ ಏಜೆಂಟ್ ಉಲ್ಲಾಸ್ ಮುಂಜ್ ರವರು ಮಾರುತಿ ಪ್ರಸಾದವನ್ನು ಒಂದು ಲಕ್ಷ ರೂ.ಗೆ ಹರಾಜಿನ ಮೂಲಕ ಸ್ವೀಕರಿಸಿದರು. ದೇವರ ಪ್ರಸಾದದ ಬಿಡ್ ನಲ್ಲಿ ಸುಮಾರು 100 ಕ್ಕೂ ಹೆಚ್ವು ಭಕ್ತರು ಭಾಗವಹಿಸಿದ್ದರು. ಮೊದಲು 55,555 ರೂ.ಗಳಿಗೆ ಹರಾಜು ಕೂಗಲಾಯಿತು. ಕೊನೆಯಲ್ಲಿ ಉಲ್ಲಾಸ್ ಮಂಜ್ ಅವರು ಒಂದು ಲಕ್ಷ ರೂ. ಎಂದು ಕೂಗಿದರು. ಹೀಗಾಗಿ ಪ್ರಸಾದ ಅವರ ಪಾಲಾಯಿತು.

ದೇವರ ಮೇಲಿನ ಭಕ್ತಿಗಾಗಿ ಈ ಪ್ರಸಾದವನ್ನು ಹರಾಜಿನಲ್ಲಿ ಪಡೆದಿದ್ದೇನೆ. ಪ್ರತಿ ವರ್ಷ ದೇವರ ಪ್ರಸಾದವನ್ನು ಹರಾಜಿನಲ್ಲಿ ಪಡೆದುಕೊಂಡು ಭಕ್ತರು ಧನ್ಯತಾ ಭಾವ ಮೆರೆಯುತ್ತಾರೆ. ಈ ಬಾರಿ ದೇವರ ಆಶಿರ್ವಾದ ನನಗೆ ಸಿಕ್ಕಿದೆ, ಪ್ರಸಾದ ಸ್ವೀಕರಿಸುವ ಭಾಗ್ಯ ನನ್ನದಾಗಿದೆ ಎಂದು ಪ್ರಸಾದವನ್ನು ಹರಾಜಿನಲ್ಲಿ ಸ್ವೀಕರಿಸಿದ ಉಲ್ಲಾಸ್ ಮಂಜ್ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *