ಚೆನ್ನೈ: ಮಾಜಿ ಮುಖ್ಯಮಂತ್ರಿ ಹಾಗೂ ಡಿಎಂಕೆ ನಾಯಕ ಕರುಣಾನಿಧಿಯವರ ಗೋಪಾಲಪುರಂನಲ್ಲಿರುವ ನಿವಾಸವನ್ನು ಬಡವರ ಆಸ್ಪತ್ರೆಯಾಗಿ ಪರಿವರ್ತಿಸಲಾಗುತ್ತದೆ ಎಂಬುದಾಗಿ ತಿಳಿದುಬಂದಿದೆ.
ಗೋಪಾಲಪುರಂನಲ್ಲಿರುವ ಅಂಜುಗಂ ಇಲ್ಲಂ ನಲ್ಲಿ ಕರುಣಾನಿಧಿಯವರು ಕಳೆದ ಐದು ದಶಕಗಳಿಗೂ ಹೆಚ್ಚು ಕಾಲ ವಾಸವಾಗಿದ್ದರು. ಹೀಗಾಗಿ ಪ್ರತೀ ದಿನ ಇಲ್ಲಿ ಪಕ್ಷದ ಕಾರ್ಯಕರ್ತರು, ಜನಸಾಮಾನ್ಯರ ಭೇಟಿ ಮಾಡುತ್ತಿದ್ದರು. 2010ರಲ್ಲಿ ತಮ್ಮ 86ನೇ ಹುಟ್ಟುಹಬ್ಬದ ಸಂದರ್ಭದಲ್ಲಿ, ಈ ಮನೆಯನ್ನು ಅಣ್ಣಾ ಅಂಜುಗಂ ಟ್ರಸ್ಟ್ ಗೆ ದೇಣಿಗೆಯಾಗಿದ್ದ ನೀಡಿದ್ದ ಅವರು, ಬಡವರಿಗಾಗಿ ಆಸ್ಪತ್ರೆ ನಡೆಸುವಂತೆ ತಿಳಿಸಿದ್ದರು ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಇದೀಗ ಅವರ ನಿಧನದ ನಂತರ ಟ್ರಸ್ಟ್, ಕಲೈನಾರ್ ಕರುಣಾನಿಧಿ ಆಸ್ಪತ್ರೆ ಎಂಬ ಹೆಸರಿನಡಿ ಆಸ್ಪತ್ರೆಯೊಂದನ್ನು ಆರಂಭಿಸಲು ಮುಂದಾಗಿದೆ. ನಾನು ವಿಚಾರವಾದಿ ಎಂಬ ತೃಪ್ತಿ ನನಗಿದೆ. ಒಂದು ವೇಳೆ ನಾನು ಆಧ್ಯಾತ್ಮದಲ್ಲಿ ನಂಬಿಕೆಯುಳ್ಳ ವ್ಯಕ್ತಿಯಾಗಿದ್ದರೆ ನನ್ನ ಆತ್ಮಕ್ಕೂ ತೃಪ್ತಿಯಾಗುತ್ತಿತ್ತು ಎಂದು ತಮ್ಮ ಮನೆಯನ್ನು ಕೊಡುಗೆಯಾಗಿ ನೀಡುವ ಸಮಾರಂಭದಲ್ಲಿ ಅವರು ತಿಳಿಸಿದ್ದರು.
ತಮಿಳು ಚಿತ್ರರಂಗದ ಕಥೆಗಾರ, ಸಂಭಾಷಣಾಕಾರರಾಗಿ ಮುಂಚೂಣಿಯಲ್ಲಿದ್ದ ಕರುಣಾನಿಧಿ ಈ ಮನೆಯನ್ನು ಶರಭೇಶ್ವರ ಅಯ್ಯರ್ ಎಂಬವರಿಂದ 1955ರಲ್ಲಿ ಮನೆ ಖರೀದಿ ಮಾಡಿದ್ದರು.
ತಮಿಳುನಾಡಿನ ಮಾಜಿ ಸಿಎಂ ಮತ್ತು ಡಿಎಂಕೆ ಮುಖ್ಯಸ್ಥ ಎಂ. ಕಲೈನರ್ ಕರುಣಾನಿಧಿ(94) ಅವರು ಉಸಿರಾಟದ ತೊಂದರೆ, ಜ್ವರ ಹಾಗೂ ಮೂತ್ರನಾಳದ ಸೋಂಕಿನಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಜುಲೈ 22ರ ರಾತ್ರಿ ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜುಲೈ 22ರ ಬಳಿಕ ಕರುಣಾನಿಧಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತ್ತು. ಆದರೆ ಆರೋಗ್ಯದಲ್ಲಿ ಮತ್ತೇ ಏರಿಳಿತ ಕಂಡು ಬಂದ ಹಿನ್ನೆಲೆಯಲ್ಲಿ ಕರುಣಾನಿಧಿ ಅವರನ್ನು ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಸಂಜೆ ವಿಧಿವಶರಾದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews