ಕರ್ನಾಟಕದ ತೊಗಲುಗೊಂಬೆ ಕಲಾವಿದೆ ಭೀಮವ್ವಗೆ ಪದ್ಮಶ್ರೀ ಗೌರವ

Public TV
2 Min Read

ನವದೆಹಲಿ: ರಾಷ್ಟ್ರಪತಿ ಭವನದಲ್ಲಿ ಸೋಮವಾರ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ತೊಗಲು ಗೊಂಬೆ ಕಲಾವಿದೆ ಭೀಮವ್ವ ಶಿಳ್ಳೆಕ್ಯಾತರ್ ಅವರಿಗೆ ಪದ್ಮಶ್ರೀ  (PadmaShri) ಪ್ರಶಸ್ತಿ ನೀಡಿ ಗೌರವಿಸಲಾಯಿತು.

ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿ ಪ್ರಮುಖ ಗಣ್ಯರ ಸಮ್ಮುಖದಲ್ಲಿ ಪದ್ಮಶ್ರೀ ಪ್ರದಾನ ಮಾಡಲಾಯಿತು.ಇದನ್ನೂ ಓದಿ: ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ ‘ನನ್ನರಸಿ ರಾಧೆ’ ನಟಿ

ಬಾಲ್ಯದಲ್ಲಿ ಅಪ್ಪ, ಮದುವೆಯ ನಂತರ ಪತಿ ಹಾಗೂ ಮಕ್ಕಳು, ಮೊಮ್ಮಕ್ಕಳೊಂದಿಗೆ ಕಲಿತ ತೊಗಲು ಗೊಂಬೆಯಾಟವನ್ನು 103 ವರ್ಷವಾದರೂ ತನ್ನ ಜೀವನಕ್ಕೆ ಆಧಾರವಾಗಿಸಿಕೊಂಡು, ಅದನ್ನೇ ಉಸಿರಾಗಿಸಿಕೊಂಡಿರುವ ಕೊಪ್ಪಳ (Koppal) ತಾಲೂಕಿನ ಮೋರನಾಳ ಗ್ರಾಮದ ಭೀಮವ್ವ ಶಿಳ್ಳೆಕ್ಯಾತರ್ ಅವರಿಗೆ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.

103 ವರ್ಷವಾದರೂ, ಕಂಠ ಮಾಸಿಲ್ಲ, ಸಂಭಾಷಣೆ ಹಾಗೂ ಹಾಡುಗಳನ್ನು ಮರೆತಿಲ್ಲ. ಹೀಗೆ ಸರಾಗವಾಗಿ ಹಾಡುತ್ತಿರುವ ಪದ್ಮಶ್ರೀ ಪುರಸ್ಕೃತೆ ಭೀಮವ್ವ ಅಜ್ಜಿ, ತೊಗಲು ಗೊಂಬೆಯಾಟದ ಕಲೆಯನ್ನು ನಶಿಸಿ ಹೋಗದಂತೆ ಕಾಪಾಡಿಕೊಂಡು ಬಂದಿದ್ದಾರೆ.

ಕಳೆದ 82 ವರ್ಷಗಳಿಂದ ತೊಗಲು ಗೊಂಬೆಯಾಟದಲ್ಲಿ ಸುದೀರ್ಘ ಸೇವೆ ಸಲ್ಲಿಸಿ, ಕೇಂದ್ರ ಸರ್ಕಾರದ ಮೂರನೇ ಅತ್ಯುನ್ನತ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿರುವುದು ಕೊಪ್ಪಳ ಜಿಲ್ಲೆಗೆ ಕೀರ್ತಿ ತಂದಿದೆ. ತಂದೆ, ಅಜ್ಜ, ಮುತ್ತಜ್ಜನ ಕಾಲದಿಂದ ಬಂದಿರುವ ತೊಗಲು ಗೊಂಬೆಯಾಟದ ಕಲೆ ಇವರಿಗೆ ರಕ್ತಗತವಾಗಿ ಬಂದಿದೆ. ಮದುವೆಯಾದ ನಂತರ ಕಲೆಯನ್ನು ಮುಂದುವರೆಸಿಕೊಂಡು, ಮಕ್ಕಳು ಹಾಗೂ ಮೊಮ್ಮಕ್ಕಳಿಗೂ ಕರಗತ ಮಾಡಿಸಿದ್ದಾರೆ. ತೊಗಲು ಗೊಂಬೆಯಾಟದಿಂದ ಮಗ ಕೇಶಪ್ಪ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.ಇದನ್ನೂ ಓದಿ: ಹಿಂದೂ ಧರ್ಮ, ದೇಶ ವಿರೋಧಿ ಪೋಸ್ಟ್‌ ಹಾಕಿದ್ದ ಮಂಗಳೂರು ಯುವತಿ ಕೆಲಸದಿಂದಲೇ ವಜಾ

ಭಾರತದಲ್ಲಿ ಮಾತ್ರವಲ್ಲದೆ, ಅಮೆರಿಕ, ಜಪಾನ್, ಸ್ವಿಡ್ಜರ್‌ಲ್ಯಾಂಡ್, ಜರ್ಮನಿ, ಇಟಲಿ, ಫ್ರಾನ್ಸ್, ಸೌದಿ ಅರೇಬಿಯಾ, ಐರ್ಲೆಂಡ್, ಪ್ಯಾರಿಸ್, ದುಬೈ ಸೇರಿದಂತೆ ಹಲವು ದೇಶಗಳಲ್ಲಿ ಭೀಮವ್ವ ಅವರು ತೊಗಲು ಗೊಂಬೆಯಾಟವನ್ನು ಪ್ರದರ್ಶಿಸಿದ್ದಾರೆ.

ನೂರಾರು ವರ್ಷಗಳಿಂದ ಇವರ ಅಜ್ಜ ಮುತ್ತಜ್ಜನ ಕಾಲದ ತೊಗಲುಗೊಂಬೆಗಳನ್ನು, ತೊಗಲು ಗೊಂಬೆಯಾಟ ಪ್ರದರ್ಶನಕ್ಕೆ ಬಳಸುತ್ತಾ ಬಂದಿದ್ದಾರೆ. ಅವುಗಳನ್ನು ಬದಲಾಯಿಸಿಲ್ಲ, ಅವುಗಳ ಬಣ್ಣ ಮಾಸಿಹೋಗಿದೆ. ಒಂದಿಷ್ಟು ಹರಿದುಹೋಗಿವೆ. ಹೊಸದಾಗಿ ಖರೀದಿಸಲು ಇವರ ಬಳಿ ಹಣದ ಕೊರತೆ ಇದೆ. ಖರೀದಿಸಲು ಹಾಗೂ ಅವುಗಳನ್ನು ಸಿದ್ಧಪಡಿಸಲು ಲಕ್ಷಾಂತರ ರೂಪಾಯಿ ಬೇಕಾಗಿದೆ. ಇನ್ನೂ ಬಾಬಾ ಸಾಹೇಬ್ ಅಂಬೇಡ್ಕರ್, ಮಹಾತ್ಮ ಗಾಂಧೀಜಿ, ಕೊಪ್ಪಳದ ಗವಿಸಿದ್ದಪ್ಪಜ್ಜನ ಕಥೆಗಳನ್ನು ತೊಗಲು ಗೊಂಬೆಯಾಟದ ಮೂಲಕ ಪ್ರದರ್ಶಿಸಲು ಭೀಮವ್ವ ಅಜ್ಜಿಯ ಮಕ್ಕಳು, ಮೊಮ್ಮಕ್ಕಳು ಯೋಚಿಸಿದ್ದಾರೆ. ಆದರೆ ಇದಕ್ಕೆ ಬೇಕಾದ ತೊಗಲು ಗೊಂಬೆಗಳನ್ನು ಪಕ್ಕದ ಆಂಧ್ರದ ಅನಂತಪುರನಿಂದ ತರಬೇಕಾಗಿದೆ. ಹೀಗಾಗಿ ಸ್ವತಃ ಭೀಮವ್ವ ಅಜ್ಜಿ ಸರ್ಕಾರ ನಮಗೆ ಆರ್ಥಿಕ ಸಹಾಯ ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಅಲ್ಲದೇ ಇದರಿಂದ ತೊಗಲು ಗೊಂಬೆಯಾಟಕ್ಕೆ ಹೊಸ ಮೆರಗನ್ನು ತರುತ್ತೇವೆ ಎಂದಿದ್ದಾರೆ.ಇದನ್ನೂ ಓದಿ:  ನಕಲಿ ನಾಗಸಾಧುವಿನಿಂದ ಕಾರು ಚಾಲಕನಿಗೆ ಮಂಕುಬೂದಿ – ರುದ್ರಾಕ್ಷಿ ಕೊಟ್ಟು ಉಂಗುರ ಕಸಿದು ಎಸ್ಕೇಪ್!

Share This Article