ಬೆಂಗಳೂರು: ದೇಶದ ವಿವಿಧ ರಾಜ್ಯಗಳಿಂದ ಬಂದಿರೋ ದಿವ್ಯಾಂಗರು ಶಿಕ್ಷಣ ಪಡೆದು ತಮ್ಮ ಬಾಳನ್ನು ಬೆಳಕು ಮಾಡಿಕೊಳ್ಳುವ ಕನಸು ಕಂಡಿದ್ದರು. ಆದರೆ ಆಡಳಿತ ಮಂಡಳಿಯ ಬೇಜಾವಾಬ್ದರಿತನ ಅವರ ಜೀವನವನ್ನು ಕತ್ತಲಿಗೆ ನೂಕುವಂತೆ ಮಾಡಿದೆ.
ಶಿವಾಜಿನಗರದ ಬಬೂ ಬಂಜಾರ್ ನಲ್ಲಿ ರಾಜ್ಯದ ಏಕೈಕ ಕಿವುಡು ವಿದ್ಯಾರ್ಥಿಗಳಿಗೆ ಐಟಿಐ ಕಾಲೇಜು ಇದೆ. ಈ ಕಾಲೇಜಿನಲ್ಲಿ ಚೆನ್ನಾಗಿ ಓದಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಅಂತಾ ಕಾಲೇಜಿಗೆ ಸೇರಿದ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ ದಿಡೀರ್ ಶಾಕ್ ನೀಡಿದೆ.
ಏಕಾಏಕಿ ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾಹಿತಿ ನೀಡದೆ ಕಾಲೇಜು ಮುಚ್ಚಲು ಹೊರಟಿದೆ. ಈ ಜಾಗದಲ್ಲಿ ಮೆಟ್ರೋ ಬರತ್ತೆ ಎನ್ನುವ ಕಾರಣವೊಡ್ಡಿ ಕಾಲೇಜು ಮುಚ್ಚುವುದ್ದಕ್ಕೆ ಪ್ಲಾನ್ ಮಾಡಿದೆ. ಆದರೆ ಮ್ಯಾನೇಜ್ಮೆಂಟ್ ನಿರ್ಧಾರದಿಂದಾಗಿ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ.
ಕಿವುಡರ ತಾಂತ್ರಿಕ ಕೇಂದ್ರ ಕಳೆದ 36 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಜೊತೆಗೆ ರಾಜ್ಯದ ಏಕೈಕ ಕಿವುಡರ ತಾಂತ್ರಿಕ ಕೇಂದ್ರ ಎಂಬ ಹೆಗ್ಗಳಿಕೆಯೂ ಇದೆ. ಸದ್ಯ ರಾಜ್ಯದ ವಿವಿಧ ಭಾಗ ಹಾಗೂ ಜಿಲ್ಲೆಯ 65 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ಮೆಟ್ರೋ ನೆಪವೊಡ್ಡಿ ಆಡಳಿತ ಮಂಡಳಿ ತರಬೇತಿ ಕೇಂದ್ರವನ್ನು ಬಂದ್ ಮಾಡಲು ಹೊರಟಿರೋದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಸಂಬಂಧ ಆಡಳಿತ ಮಂಡಳಿಯನ್ನು ಪ್ರಶ್ನಿಸಿದರೆ ಸಮರ್ಪಕ ಉತ್ತರ ನೀಡುತ್ತಿಲ್ಲ. ಮೆಟ್ರೋ ಅಧಿಕಾರಿಗಳಿಂದ ಬಂದಿರುವ ಪತ್ರದ ಬಗ್ಗೆಯೂ ಮಾಹಿತಿ ಇಲ್ಲ. ಕಾಲೇಜು ಕೂಡ ಮೂಲಭೂತ ಸೌಕರ್ಯಗಳಿಂದ ವಂಚಿತವಾಗುತ್ತಿದ್ದು ಅವಸಾನದತ್ತ ಸಾಗುತ್ತಿದೆ.
ಪರ್ಯಾರ ವ್ಯವಸ್ಥೆಯನ್ನು ಮಾಡದೇ ತರಬೇತಿ ಕೇಂದ್ರವನ್ನು ಮುಚ್ಚಲು ಹೊರಟಿರೋದು ಸಾಕಷ್ಟು ಅನುಮಾನಗಳಿಗೆ ಕಾರಣವಾಗುತ್ತಿದೆ. ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಆಡಳಿತ ಮಂಡಳಿ ದಿಡೀರ್ ನಿರ್ಧಾರದಿಂದ ದಿಕ್ಕು ತೋಚದಂತಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv