ಹೊಸ ವರ್ಷಕ್ಕೆ ಸದ್ದಿಲ್ಲದೇ ಸಾರಿಗೆ ಮುಷ್ಕರಕ್ಕೆ ಮುಂದಾದ ಸಿಬ್ಬಂದಿ

3 Min Read

ಬೆಂಗಳೂರು: ಸದ್ದಿಲ್ಲದೇ ಹೊಸ ವರ್ಷಕ್ಕೆ ಮುಷ್ಕರ (Transport Strike) ನಡೆಸಲು ಸಾರಿಗೆ ಸಿಬ್ಬಂದಿ ಮುಂದಾಗಿದ್ದಾರೆ.

ಮೆಜೆಸ್ಟಿಕ್ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ (Majestic Bus Stand) ಸಿಬ್ಬಂದಿಗಳಿಗೆ ಕರಪತ್ರ ವಿತರಣೆಯಾಗಿದ್ದು ಬೇಡಿಕೆ ಈಡೇರದೇ ಇದ್ದರೆ ಮುಷ್ಕರ ಅನಿವಾರ್ಯ ಎಂದು ತಿಳಿಸಲಾಗಿದೆ.

ಬೆಳಗಾವಿ ಅಧಿವೇಶನದ (Belagavi Session) ಬಳಿಕ ಸ್ಪಂದಿಸುವ ಬಗ್ಗೆ ಸರ್ಕಾರ ಭರವಸೆ ಕೊಟ್ಟಿದೆ. ಸರ್ಕಾರ ಬೇಡಿಕೆ ಈಡೇರಿಸದೇ ಇದ್ದರೆ ಮುಷ್ಕರಕ್ಕೆ ಸಿದ್ದರಾಗಿ ಎಂದು ಕರಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳಿ ಪರವಾಗಿ ಮಹಾ ಪ್ರಧಾನ ಕಾರ್ಯದರ್ಶಿ ಬಿ.ಜಯದೇವರಾಜೇ ಅರಸ್‌ ಮಾತನಾಡಿ, 38 ತಿಂಗಳ ಹಿಂಬಾಕಿ ನೀಡಬೇಕು. ಸರ್ಕಾರ ಕೂಡಲೇ ಬೇಡಿಕೆ ಈಡೇರಿಸಬೇಕು. ಇಲ್ಲದೇ ಇದ್ದರೆ ಜನವರಿ ಮೊದಲ ವಾರದಲ್ಲಿ ಮುಷ್ಕರದ ಬಿಸಿ ಜನರಿಗೆ ತಟ್ಟಲಿದೆ. ಒಂದೇ ಒಂದು ಬಸ್ ಡಿಪೋದಿಂದ ಹೊರಗೆ ಬರುವುದಿಲ್ಲ. ಸರ್ಕಾರಕ್ಕೆ ನೀಡುತ್ತಿರುವ ಕೊನೆಯ ಎಚ್ಚರಿಕೆಯಿದು ಎಂದು ಹೇಳಿದ್ದಾರೆ.

ಪ್ರತಿ 4 ವರ್ಷಗಳಿಗೊಮ್ಮೆ ಸಾರಿಗೆ ನೌಕರರ ವೇತನ ಪರಿಷ್ಕರಣೆ ನಡೆಯುತ್ತದೆ. ಈ ಹಿಂದೆ 2012-2016ರ ವರೆಗೆ ವೇತನ ಹೆಚ್ಚಳ ಮಾಡಿದಾಗ 2012ರಿಂದ ಜಾರಿಗೆ ಬರುವುದಾಗಿ, 2016-2020ರ ವರೆಗೆ ವೇತನ ಹೆಚ್ಚಳ ಮಾಡಿದಾಗ 2016ರಿಂದ ಜಾರಿಗೆ ಬರುವಂತೆ ಎಂದು ಸರ್ಕಾರದ ಆದೇಶದಲ್ಲಿ ಉಲ್ಲೇಖವಾಗಿತ್ತು.  ಇದನ್ನೂ ಓದಿ: `ಯುದ್ಧಕ್ಕೆ ಸಿದ್ಧ.. ನಾವು ನಮ್ಮ ಮಾತಿಗೆ ಬದ್ಧ’ – ಸುದೀಪ್ `ಯುದ್ಧ’ ಸಾರಿದ್ದು ಯಾರ ವಿರುದ್ಧ..?

2023ರ ಆದೇಶದಲ್ಲಿ 2023ರ ಮಾರ್ಚ್ 1ರಿಂದ ಜಾರಿಗೆ ಬರುವಂತೆ ಎಂದು ಉಲ್ಲೇಖಿಸಿದೆ. ಈ ಆದೇಶದಲ್ಲಿ 2020 ರಿಂದ ಎಂದು ಉಲ್ಲೇಖ ಮಾಡಿಲ್ಲ. ಈ ಆದೇಶದ ಅನ್ವಯ ಮುಂದಿನ 4 ವರ್ಷ ಅಂದರೆ 2027 ರವರೆಗೆ ವೇತನ ಪರಿಷ್ಕರಣೆ ಮಾಡಲು ಸಾಧ್ಯವಿಲ್ಲ. ಆದೇಶದಲ್ಲಿ ಎಲ್ಲಿಯೂ ಸ್ಪಷ್ಟವಾಗಿ 2020 ರಿಂದಲೇ ಜಾರಿಗೆ ಬರುವಂತೆ ಎಂದು ಉಲ್ಲೇಖ ಮಾಡದ ಕಾರಣ ವೇತನ ಪರಿಷ್ಕರಣೆ ಮಾಡಲು ಸಾಧ್ಯವಿಲ್ಲ ಎಂಬ ವಾದವನ್ನು ಕಾಂಗ್ರೆಸ್‌ ಸರ್ಕಾರ ಮುಂದಿಟ್ಟಿತ್ತು. ಈ ವಿಚಾರದ ಬಗ್ಗೆ ಸಾರಿಗೆ ಸಿಬ್ಬಂದಿ ಪ್ರತಿಭಟನೆ ನಡೆಸಿದಾಗ ಬೆಳಗಾವಿ ಅಧಿವೇಶನದ ಬಳಿಕ ಭರವಸೆ ಈಡೇರಿಸುವುದಾಗಿ ಸರ್ಕಾರ ಹೇಳಿತ್ತು.

2020ರಲ್ಲಿ ಏನಾಗಿತ್ತು?
ಕೋವಿಡ್‌ ಲಾಕ್‌ಡೌನ್‌ ಕಾರಣದಿಂದ 2020 ರಲ್ಲಿ ಕೆಲ ತಿಂಗಳು ಬಸ್ಸುಗಳ ಸಂಚಾರವನ್ನು ಬಂದ್‌ ಮಾಡಲಾಗಿತ್ತು. ನಂತರ ಸೇವೆ ಆರಂಭಗೊಂಡಿದ್ದರೂ ಜನ ಕಡಿಮೆ ಪ್ರಮಾಣದಲ್ಲಿ ಸಂಚರಿಸುತ್ತಿದ್ದರು. ಕೋವಿಡ್ ಸಮಯದಲ್ಲಿ ಪೂರ್ಣ/ ಅಪೂರ್ಣ ಪ್ರಮಾಣದಲ್ಲಿ ಬಸ್ಸುಗಳ ಕಾರ್ಯಾಚರಣೆ ಸ್ಥಗಿತಗೊಂಡಿದ್ದರಿಂದ ಸಾರಿಗೆ ಇಲಾಖೆ ಮುಳುಗುವ ಹಂತದಲ್ಲಿತ್ತು.

ಈ ಕಠಿಣ ಪರಿಸ್ಥಿತಿಯಲ್ಲಿ ನಾಲ್ಕು ಸಾರಿಗೆ ಸಂಸ್ಥೆಗಳ‌ ಸಿಬ್ಬಂದಿ ವೇತನ‌ ಹಾಗೂ ಇತರೇ ಭತ್ಯೆಗಳನ್ನು ಸರ್ಕಾರ ಪಾವತಿ ಮಾಡಿತ್ತು. ಆದರೆ ಸಂಬಳವನ್ನು ಪರಿಷ್ಕರಣೆ ಮಾಡುವ ನಿರ್ಧಾರ ಕೈಗೊಂಡಿರಲಿಲ್ಲ. ಕೋವಿಡ್‌ ನಂತರ ಬಸ್ಸುಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ಇಳಿದ ಬಳಿಕ 2023 ರಲ್ಲಿ ಬಿಜೆಪಿ ಸರ್ಕಾರ ವೇತನ ಪರಿಷ್ಕರಣೆ ಮಾಡಿತ್ತು.

ನೌಕರರ ವಾದ ಏನು?
ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಇರಲಿಲ್ಲ ಮತ್ತು ಕಡಿಮೆ ಸಂಖ್ಯೆಯಲ್ಲಿ ಮಹಿಳೆಯರು ಪ್ರಯಾಣ ಮಾಡುತ್ತಿದ್ದರು. ಆದರೆ ಈಗ ಬಸ್ಸುಗಳಲ್ಲಿ ಭಾರೀ ಸಂಖ್ಯೆಯಲ್ಲಿ ಮಹಿಳೆಯರು ಪ್ರಯಾಣಿಸುತ್ತಿದ್ದಾರೆ. ಮಹಿಳೆಯರಿಗೆ ಉಚಿತ ಟಿಕೆಟ್‌ ನೀಡಿದ್ದರೂ ನಿರ್ವಾಹಕರು ಟಿಕೆಟ್‌ ಹರಿಯುತ್ತಾರೆ. ಉಚಿತ ಟಿಕೆಟ್‌ ಹಣವನ್ನು ಸರ್ಕಾರ ಸಾರಿಗೆ ಸಂಸ್ಥೆಗಳಿಗೆ ಪಾವತಿ ಮಾಡಬೇಕು.

ಶಕ್ತಿ ಯೋಜನೆಯಡಿ ಉಚಿತ ಬಸ್ ಪ್ರಯಾಣದ ಮಹಿಳಾ ಫಲಾನುಭವಿಗಳ ಸಂಖ್ಯೆ 500 ಕೋಟಿ ದಾಟಿ ಮೈಲಿಗಲ್ಲು ಸ್ಥಾಪಿಸಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಳದಿಂದ ಆದಾಯವೂ ಜಾಸ್ತಿಯಾಗಿದೆ. ಆದಾಯ ಜಾಸ್ತಿಯಾಗಿರುವ ಕಾರಣ ಸರ್ಕಾರ ಸಂಬಳ ಏರಿಕೆ ಮಾಡಲೇಬೇಕು ಎಂದು ಆಗ್ರಹಿಸುತ್ತಿದ್ದಾರೆ.

Share This Article