ಸರ್ಕಾರಿ ವೆಚ್ಚದಲ್ಲೇ ಮಹಾ ಕುಂಭಮೇಳ ಅಧ್ಯಯನ ಪ್ರವಾಸಕ್ಕೆ ಹೊರಡಲು ಮುಂದಾದ ಶಾಸಕರು

Public TV
1 Min Read

ಬೆಂಗಳೂರು: ಪ್ರಯಾಗ್‌ರಾಜ್‌ನ (Prayagraj) ಮಹಾ ಕುಂಭಮೇಳದಲ್ಲಿ (MahaKumbh Mela) ಸ್ನಾನ ಮಾಡುವುದರಿಂದ ಬಡತನ ನಿರ್ಮೂಲನೆ ಆಗುತ್ತಾ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ಹೊರಹಾಕಿದ್ದರು. ಆದ್ರೆ ಕಾಂಗ್ರೆಸ್ ಸರ್ಕಾರದಲ್ಲಿ ಮಹಾ ಕುಂಭಮೇಳಕ್ಕೆ ಹೋಗಲು ಶಾಸಕರಿಗೆ ಆಸಕ್ತಿ ಹೆಚ್ಚಿದಂತಿದೆ.

ಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡಲು ಸರ್ಕಾರಿ ಹಣ ಬಳಕೆಗೆ ವಿಧಾನಸಭೆಯ ವಸತಿ ಸಮಿತಿಯ ಸಭೆಯಲ್ಲಿ ತೀರ್ಮಾನಿಸಿದೆ. ಅದಕ್ಕಾಗಿ ಇದೇ ಫೆ.23 ರಿಂದ 25ರ ವರೆಗೆ ಶಾಸಕರ ತಂಡ ಪ್ರಯಾಗ್‌ರಾಜ್‌ಗೆ ಪ್ರವಾಸ ಹೊರಡಲು ಸಿದ್ಧತೆ ನಡೆಸಿದೆ. ಶಾಸಕರಾದ ಸಿ.ಪಿ ಯೋಗೇಶ್ವರ್, ಹೆಚ್‌.ಸಿ ಬಾಲಕೃಷ್ಣ, ಬಿ.ನಾಗೇಂದ್ರ, ಬಿ.ಶಿವಣ್ಣ, ಶಿವರಾಮ್ ಹೆಬ್ಬಾರ್ ಭಾಗಿರಥಿ ಮುರುಳ್ಯಾ, ಸಿಮೆಂಟ್ ಮಂಜು, ಡಾಕ್ಟರ್ ಚಂದ್ರು ಲಮಾಣಿ, ಖನಿ ಫಾತಿಮಾ, ಸ್ವರೂಪ್ ಪ್ರಕಾಶ್, ರಾಜು ಕಾಗೆ ಸಮಿತಿಯಲ್ಲಿದ್ದಾರೆ.

ಶಾಸಕರ ಒತ್ತಾಯಕ್ಕೆ ಮಣಿದು ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ನೇತೃತ್ವದ ಸಮಿತಿ ಒಪ್ಪಿಗೆ ಸೂಚಿಸಿದೆ. ಬಳಿಕ ವಸತಿ ಸಮಿತಿಯ ಪ್ರಯಾಗರಾಜ್ ಪ್ರವಾಸಕ್ಕೆ ಸ್ಪೀಕರ್ ಅನುಮೋದನೆ ನೀಡಿದ್ದಾರೆ.

ಫೆ.23ರಂದು ಶಾಸಕರ ನಿಯೋಗ ಬೆಂಗಳೂರಿನಿಂದ (Bengaluru) ತೆರಳಲಿದ್ದು, ಲಕ್ನೋ, ಪ್ರಯಾಗರಾಜ್, ಅಯೋಧ್ಯ, ವಾರಣಾಸಿಯಲ್ಲಿ ಪ್ರಯಾಣ ಬೆಳೆಸಲಿದೆ. ಹಣಕಾಸು ಇಲಾಖೆಯಿಂದಲೂ ಪ್ರವಾಸದ ವೆಚ್ಚಕ್ಕೆ ಸಹಮತ ನೀಡಲಾಗಿದೆ.

ಅಧ್ಯಯನ ಪ್ರವಾಸಕ್ಕಿರುವ ಅವಕಾಶ ಬಳಕೆ ಮಾಡಿಕೊಂಡು ಪ್ರಯಾಗರಾಜ್ ಕುಂಭಮೇಳದಲ್ಲಿ ಶಾಸಕರು ಪುಣ್ಯಸ್ನಾನ ಮಾಡಲು ಮುಂದಾಗಿದ್ದಾರೆ.

Share This Article