ಪ್ರಧಾನಿ ಹೇಳಿಕೆಗೆ ಸಿಡಿದೆದ್ದ ರಾಜ್ಯ ನಾಯಕರು..!

Public TV
2 Min Read

ಬೆಂಗಳೂರು: ಬಿಜೆಪಿ ಸಭೆಯಲ್ಲಿ ಕಾಂಗ್ರೆಸ್ ಪಕ್ಷದವರು ಸಿಎಂ ಕುಮಾರಸ್ವಾಮಿ ಅವರನ್ನು ಕ್ಲರ್ಕ್ ರೀತಿ ನೋಡಿಕೊಳ್ಳುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದರು. ಈ ವಿಚಾರಕ್ಕೆ ಈಗ ಕರ್ನಾಟಕದಲ್ಲಿ ಕಾಂಗ್ರೆಸ್ ನಾಯಕರು ಗರಂ ಆಗಿದ್ದಾರೆ.

ಈ ವಿಚಾರವಾಗಿ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಪ್ರತಿಕ್ರಿಯಿಸಿದ ಮಾಜಿ ಸಿಎಂ ಸಿದ್ದರಾಮಯ್ಯ, ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಇದು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಕ್ಕೆ ಸಂಬಂಧಪಟ್ಟ ವಿಚಾರ. ನಮ್ಮ ಉಸಾಬರಿ ಮೋದಿಯವರಿಗೆ ಯಾಕೆ? ಅವರು ಯಾರು ಹೇಳೋದಕ್ಕೆ. ರಾಜ್ಯದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸರ್ಕಾರ ಮಾಡಿಕೊಂಡಿರೋದು, ಮೋದಿ ಅವರು ಮೈತ್ರಿಯಲ್ಲಿ ಇದ್ದಾರಾ? ಮೋದಿಯವರು ರಾಜಕೀಯವಾಗಿ ಹೀಗೆ ಹೇಳಿದ್ದಾರೆ. ಅವರಿಗೇನು ಗೊತ್ತಿಲ್ಲಾ. ಸುಮ್ಮನೆ ಕಾಂಗ್ರೆಸ್ ವಿರುದ್ಧ ಜೆಡಿಎಸ್ ಅವರನ್ನು ಎತ್ತಿಕಟ್ಟುವ ಕೆಲಸ ಮಾಡ್ತಿದ್ದಾರೆ ಅಂತಾ ಕಿಡಿಕಾರಿದರು.

ಮೋದಿಯವರ ಹೇಳಿಕೆಗೆ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿ, ಮೋದಿಯವರ ಪಾರ್ಟಿಯಲ್ಲಿ ಯಾರೂ ಹೇಳೋರಿಲ್ಲ, ಕೇಳೋರಿಲ್ಲ. ಇಂತಹವರ ಸಲಹೆಗಳನ್ನ ನಾವು ತೆಗೆದುಕೊಳ್ತೀವಾ? ಕ್ಯಾಬಿನೆಟ್‍ನಲ್ಲಿ ಅವರ ಪಕ್ಷದವರ ಮಾತನ್ನೇ ಅವರು ಕೇಳಲ್ಲ. ಸುಮ್ಮನೆ ಆರೋಪ ಮಾಡ್ತಾರೆ ಅಂತ ಪ್ರಧಾನಿಗೆ ತಿರುಗೇಟು ನೀಡಿದ್ದಾರೆ.

ಘಟಬಂಧನ ಕಳ್ಳರ ಸಂತೆ ಎಂಬ ಮೋದಿ ಆರೋಪ ವಿಚಾರ ಮಾತನಾಡಿ, ಪ್ರಧಾನಿ ನಾಲಗೆ ಬಿಗಿ ಹಿಡಿದು ಮಾತನಾಡಬೇಕು. ಅವರ ಸ್ಥಾನಕ್ಕೆ ಘನತೆಗೆ ತಕ್ಕಂತೆ ನಡೆದುಕೊಳ್ಳಬೇಕು. ಅವರ ತೂಕಕ್ಕೆ ಸರಿಯಾಗಿ ಮಾತನಾಡಬೇಕು. ಎನ್‍ಡಿಎ ಯಾವುದು, ಅದೂ ಘಟಬಂಧನ ಅಲ್ಲವೇ? ಯುಪಿಎ ಕೂಡ ಘಟಬಂಧನವೇ ಎಂದು ಹರಿಹಾಯ್ದಿದ್ದಾರೆ. ಅಷ್ಟೇ ಅಲ್ಲದೆ ರಫೇಲ್ ವಿಚಾರದಲ್ಲಿ ಯಾಕೆ ಚರ್ಚೆಗೆ ಬರುತ್ತಿಲ್ಲ. ಜವಾಬ್ದಾರಿಯುತವಾಗಿ ಪ್ರಧಾನಿ ನಡೆದುಕೊಳ್ಳಬೇಕು ಎಂದು ಪ್ರಧಾನಿ ಹೇಳಿಕೆಯನ್ನು ವಿರೋಧಿಸಿದ್ದಾರೆ.

ಈ ಸಂಬಂಧ ಸಿಎಂ ಕುಮಾರಸ್ವಾಮಿಯವರು ಪ್ರತಿಕ್ರಿಯಿಸಿ, ನನ್ನ ಬಗ್ಗೆ ಕೆಲವು ಸುಳ್ಳು ಸುದ್ದಿಗಳು ಓಡಾಡುತ್ತಿದೆ. ಅದನ್ನೇ ನಂಬಿ ಪ್ರಧಾನಿ ಮೋದಿ ಅವರು ನನ್ನ ಬಗ್ಗೆ ತಪ್ಪಾಗಿ ಹೇಳುತ್ತಿದ್ದಾರೆ. ಸಾಲ ಮನ್ನಾ ವಿಚಾರ ಆದ ಮೇಲೆ ಇದು ಎರಡನೇ ಬಾರಿ ಪ್ರಧಾನಿ ಅವರು ಸುಳ್ಳು ಮಾಹಿತಿಗಳಿಗೆ ಪ್ರತಿಕ್ರಿಯಿಸಿದ್ದು. ಇಂತಹ ಹೇಳಿಕೆಗಳು ಮೈತ್ರಿ ಸರ್ಕಾರ ಅಥವಾ ಸರ್ಕಾರದ ಅಭಿವೃದ್ಧಿಯನ್ನು ಬೀಳಿಸಲು ಸಾಧ್ಯವಿಲ್ಲ ಅಂತ ಬರೆದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *