ಐಟಿ ದಾಳಿ ವೇಳೆ ಸಿಎಂ ಆಪ್ತನ ಮನೆಯಲ್ಲಿ ಸಿಕ್ತು ಕೋಟಿ ಕೋಟಿ ಹಣ!

Public TV
2 Min Read

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಮತ್ತು ಲೋಕೋಪಯೋಗಿ ಸಚಿವ ಮಹಾದೇವಪ್ಪ ಆಪ್ತ ಗುತ್ತಿಗೆದಾರ ಮರಿಸ್ವಾಮಿ ಮನೆಯಲ್ಲಿ ಕೋಟಿ ಕೋಟಿ ರೂ. ನಗದು ಹಣ ಪತ್ತೆಯಾಗಿದೆ.

ಖಚಿತ ಮಾಹಿತಿಯ ಮೇರೆಗೆ ಆದಾಯ ತೆರಿಗೆಯ ಇಲಾಖೆಯ ಅಧಿಕಾರಿಗಳು ಕೆಲ ದಿನಗಳ ಹಿಂದೆ 10 ಮಂದಿ ಪಿಡಬ್ಲ್ಯೂಡಿ ಗುತ್ತಿಗೆದಾರರ ಮನೆಯ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಮೈಸೂರಿನಲ್ಲಿ ಮರಿಸ್ವಾಮಿ ಮನೆಯ ಮೇಲೆ ನಡೆದ ದಾಳಿಯ ವೇಳೆ 6.76 ಕೋಟಿ ರೂ. ನಗದು ಹಣ ಸಿಕ್ಕಿದೆ.

ಪತ್ತೆಯಾಗಿರುವ ಎಲ್ಲ ನೋಟುಗಳು 500 ಮತ್ತು 2 ಸಾವಿರ ಮುಖಬೆಲೆಯ ನೋಟುಗಳು ಆಗಿದ್ದು. ಎಲ್ಲವೂ ಬೇನಾಮಿಯಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ. ಎಲ್ಲ ಕಡೆ ದಾಳಿ ನಡೆಸಿದಾಗ ಒಟ್ಟು 10.62 ಕೋಟಿ ರೂ. ನಗದು ಸಿಕ್ಕಿದ್ದು, 1.33 ಕೋಟಿ ರೂ. ಮೌಲ್ಯದ ಚಿನ್ನಾಭರಣ ಪತ್ತೆಯಾಗಿದೆ.

ಕೆಲ ದಿನಗಳಿಂದ ರಾಜ್ಯ ಮತ್ತು ರಾಷ್ಟ್ರದ ಹಲವು ಕಡೆ ನಗದಿನ ಕೊರತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ದಾಳಿ ನಡೆಸಿದಾಗ ಕರ್ನಾಟಕ ರಾಜ್ಯದ ಗುತ್ತಿಗೆದಾರರ ಬಳಿ ಭಾರೀ ಪ್ರಮಾಣದ ಹಣ ಇರುವ ಅಂಶ ದೃಢಪಟ್ಟಿದೆ ಎಂದು ಐಟಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಹಲವು ಗುತ್ತಿಗೆದಾರರು 500 ಮತ್ತು 2 ಸಾವಿರ ರೂ. ಮೌಲ್ಯದ ಭಾರೀ ಪ್ರಮಾಣದ ಹಣವನ್ನು ಹೊಂದಿರುವ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಈ ದಾಳಿಯಲ್ಲಿ ಪತ್ತೆಯಾದ ಹಣಕ್ಕೆ ಯಾವುದೇ ದಾಖಲೆಗಳು ಸಿಕ್ಕಿಲ್ಲ, ದಾಳಿ ಮುಂದುವರಿದಿದೆ ಎಂದು ಐಟಿ ತಿಳಿಸಿದೆ.

ಮರಿಸ್ವಾಮಿ ಸ್ಪಷ್ಟನೆ: ಸಿಎಂ ಜೊತೆಗಿರುವ ಫೋಟೋ ಪ್ರಕಟವಾದ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಮರಿಸ್ವಾಮಿ, ನನ್ನ ಮನೆ ಮೇಲೆ ಐಟಿ ದಾಳಿ ಆಗಿಲ್ಲ. ನಾನು ಬೆಸಿಕಲಿ ಕೃಷಿಕ, ನಾನು ಕಂಟ್ರ್ಯಾಕ್ಟರ್ ಅಲ್ಲ. ಸುಖಸುಮ್ಮನೆ ನನ್ನ ಹೆಸರು ಇಲ್ಲಿಗೆ ತಗಲಿ ಕೊಂಡಿದೆ. ನಾನು ಯಾವ ವ್ಯವಹಾರ ಮಾಡಿಲ್ಲ. ಸಿಎಂ ಜೊತೆಗಿನ ಸಂಬಂಧ ಪವಿತ್ರ ಸ್ನೇಹ ಅಷ್ಟೇ. ಯಾವ ವ್ಯವಹಾರವೂ ಇಲ್ಲ. ಯಾವ ವಿಚಾರಣೆಯನ್ನು ನಾನು ಎದುರಿಸಿಲ್ಲ. ಐಟಿ ಅಧಿಕಾರಿಗಳು ಯಾವ ನೋಟಿಸ್ ಕೊಟ್ಟಿಲ್ಲ. ಐಟಿ ದಾಳಿಯಲ್ಲಿ ಸಿಕ್ಕಿರುವ ಮರಿಸ್ವಾಮಿ ಯಾರು ಅಂತಾ ನನಗೆ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *