ಕೋರ್ಟ್‌ ಹೊರಗಡೆ ಹಿಜಬ್‌ ವಿವಾದ ಇತ್ಯರ್ಥಕ್ಕೆ ಅನುಮತಿ ಕೋರಿ ಅರ್ಜಿ

Public TV
1 Min Read

ಬೆಂಗಳೂರು: ಹಿಜಬ್‌ ಪ್ರಕರಣ ಈಗಾಗಲೇ ನ್ಯಾಯಾಲಯದಲ್ಲಿ ಇದ್ದು ವಿದ್ಯಾರ್ಥಿಗಳ ಪರವಾಗಿ ವಕೀಲರು ವಾದ ಮಂಡಿಸಿದ್ದಾರೆ. ಈ ಮಧ್ಯೆ ನ್ಯಾಯಾಲಯದ ಹೊರಗಡೆ ಈ ಪ್ರಕರಣವನ್ನು ಇತ್ಯರ್ಥ ಮಾಡಲು ಅನುಮತಿ ನೀಡುವಂತೆ ಕೋರಿ ಅರ್ಜಿ ಸಲ್ಲಿಕೆ ಮಾಡಲಾಗಿದೆ.

ಗುರುವಾರ ಮಧ್ಯಾಹ್ನ ಮುಖ್ಯ ನ್ಯಾ. ರಿತು ರಾಜ್ ಅವಸ್ತಿ, ನ್ಯಾ. ಕೃಷ್ಣ ಎಸ್ ದೀಕ್ಷಿತ್ ಮತ್ತು ನ್ಯಾ. ಜೆಎಂ ಖಾಜಿ ಅವರಿದ್ದ ತ್ರಿಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಿತು. ಈ ವೇಳೆ ಅರ್ಜಿ ಸರಿಯಾಗಿ ಸಲ್ಲಿಕೆಯಾಗಿಲ್ಲ. ಮಾಹಿತಿಗಳು ಅಸಮರ್ಪಕವಾಗಿರುವ ಹಿನ್ನೆಲೆಯಲ್ಲಿ ವಕೀಲ ಅಬ್ದುಲ್‌ ಮುಜೀದ್‌ ಮತ್ತು ಮೊಹಮ್ಮದ್‌ ಆರೀಫ್‌ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿತ್ತು.

ವಿಚಾರಣೆಯ ಕೊನೆಯಲ್ಲಿ ವಕೀಲರಾದ ಸುಭಾಷ್ ಝಾ ಮಧ್ಯಪ್ರವೇಶ ಅರ್ಜಿ (ಇಂಟರ್‌ವಿನ್‌ ಅಪ್ಲಿಕೇಷನ್‌) ಸಲ್ಲಿಸಿ ಪ್ರಕರಣವನ್ನು ಹೊರಗಡೆ ಇತ್ಯರ್ಥ ಮಾಡಲು ಅನುಮತಿ ನೀಡುವಂತೆ ಮನವಿ ಮಾಡಿದರು. ಇದನ್ನೂ ಓದಿ: ಪಾಕಿಸ್ತಾನಕ್ಕೆ ಹೋಗುವ ಬದಲು ಭಾರತವನ್ನು ಅಜ್ಜಂದಿರು ಆಯ್ಕೆ ಮಾಡಿದ್ದು ಯಾಕೆ: ಹಿಜಬ್‌ ವಿವಾದಕ್ಕೆ ಸ್ವಾಮಿ ಪ್ರಶ್ನೆ

ಹಿಜಬ್ ಸಮವಸ್ತ್ರ ವಿವಾದ ಕೋರ್ಟ್ ಬಗೆಹರಿಸುವುದು ಬೇಡ. ಕೋರ್ಟ್ ಹೊರಗೆ ಇತ್ಯರ್ಥಕ್ಕೆ ಅನುಮತಿ ನೀಡಬೇಕು. ಸಾಮಾಜಿಕವಾದ ಸಮಸ್ಯೆಯಾಗಿರುವ ಕಾರಣ ಕೋರ್ಟ್ ಹೊರಗೆ ಇತ್ಯರ್ಥ ಮಾಡಬಹುದು ಎಂದು ಮನವಿ ಮಾಡಿಕೊಂಡರು.

ಈ ವೇಳೆ ಎಲ್ಲ ಕಕ್ಷಿದಾರರು ಒಪ್ಪಿದರೆ ಈ ಅರ್ಜಿಯನ್ನು ಮಾನ್ಯ ಮಾಡುವುದಾಗಿ ಮುಖ್ಯ ನ್ಯಾಯಮೂರ್ತಿಗಳು ತಿಳಿಸಿದರು. ಈ ಪ್ರಕರಣದಲ್ಲಿ ಸಾಂವಿಧಾನಿಕ ಪ್ರಶ್ನೆಗಳು ಎದ್ದಿರುವ ಕಾರಣ ಉತ್ತರ ಕಂಡುಕೊಳ್ಳಬೇಕಿದೆ. ಹೀಗಾಗಿ ಇಂತಹ ಪ್ರಕರಣಗಳಲ್ಲಿ ರಾಜಿ ಸಂಧಾನ ಮಾಡಲಾಗದು ಎಂದು ಹೇಳಿದರು. ಇದನ್ನೂ ಓದಿ: ಹಿಜಬ್ ವಿವಾದ: ಬುರ್ಕಾನೇ ಮುಖ್ಯ, ಸಿಂಧೂರ ತೆಗೆಸಿ ಎಂದ ವಿದ್ಯಾರ್ಥಿನಿಯರು!

ಮೊದಲು ನಿಮ್ಮ ಅರ್ಜಿಯನ್ನು ಎಲ್ಲಾ ಕಕ್ಷಿದಾರರಿಗೆ ತಲುಪಿಸಿ. ಅವರು ಸಂಧಾನಕ್ಕೆ ಒಪ್ಪಿದರೆ ಮಾತ್ರ ನ್ಯಾಯಾಲಯ ನಿಮ್ಮ ಅರ್ಜಿಯನ್ನು ಪರಿಗಣಿಸಲಿದೆ ಎಂದು ತಿಳಿಸಿತು.

ಸೋಮವಾರದಿಂದ ಗುರುವಾರದವರೆಗೆ ಹಿಜಬ್‌ ಪರವಾಗಿ ವಾದ ಮಂಡನೆಯಾಗಿದ್ದರೆ ಶುಕ್ರವಾರ ಸರ್ಕಾರದ ಪರವಾಗಿ ಅಡ್ವೋಕೆಟ್‌ ಜನರಲ್‌ ಪ್ರಭುಲಿಂಗ ನಾವದಗಿ ವಾದ ಮಂಡಿಸಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *