ಬೆಂಗಳೂರು ಕರಗಕ್ಕೆ ಹೈಕೋರ್ಟಿನಿಂದ ತಡೆ

Public TV
1 Min Read

ಬೆಂಗಳೂರು: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್ ಡೌನ್ ಹೇರಲಾಗಿದ್ದು, ಸಭೆ, ಸಮಾರಂಭ ಮುಂತಾದ ಕಾರ್ಯಕ್ರಮಗಳು ನಡೆಯಬಾರದೆಂದು ಸರ್ಕಾರ ಆದೇಶಿಸಿದೆ. ಈ ಮಧ್ಯೆ ಬೆಂಗಳೂರು ಕರಗಕ್ಕೆ ಅನುಮತಿ ನೀಡಲಾಗಿತ್ತು. ಆದರೆ ಇದೀಗ ವಿಶ್ವ ವಿಖ್ಯಾತ ಸಿಲಿಕಾನ್ ಸಿಟಿಯ ಕರಗಕ್ಕೆ ಬ್ರೇಕ್ ಬಿದ್ದಿದ್ದು, ಕರಗ ನಡೆಸದಂತೆ ಹೈಕೋರ್ಟ್ ಆದೇಶ ನೀಡಿದೆ.

ಕೇಂದ್ರ ಸರ್ಕಾರದ ಆದೇಶದಂತೆ ಧಾರ್ಮಿಕ ಕಾರ್ಯಗಳನ್ನು ನಡೆಸುತ್ತಿಲ್ಲ. ಹೀಗಾಗಿ ಬೆಂಗಳೂರು ಕರಗ ಸಹ ನಡೆಸುವುದಿಲ್ಲ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಕೇಂದ್ರ ಸರ್ಕಾರ ಆದೇಶ ಪಾಲನೆ ಮಾಡುತ್ತೇವೆ ಎಂದು ರಾಜ್ಯ ಸರ್ಕಾರದ ಪರ ವಕೀಲ ಮಾಹಿತಿ ನೀಡಿದ್ದಾರೆ. ಹೈಕೋರ್ಟ್ ಇದನ್ನು ದಾಖಲಿಸಿಕೊಂಡಿದ್ದು, ಕರಗ ನಡೆಸದಂತೆ ಆದೇಶಿಸಿದೆ.

ಕೊರೊನಾ ಭೀತಿಯ ನಡುವೆಯೂ ಬೆಂಗಳೂರಿನ ಧರ್ಮರಾಯ ದೇವಸ್ಥಾನದಲ್ಲಿ ಸೋಮವಾರ ರಾತ್ರಿ ಹಸಿಕರಗ ನಡೆದಿದೆ. ಆದರೆ ಈ ವೇಳೆ ದೇವಸ್ಥಾನದ ಆಡಳಿತ ಮಂಡಳಿ ಮುಖ್ಯಸ್ಥರು, ಕರಗದ ಪೂಜಾರಿ, ನಾಲ್ಕು ಜನ ವೀರಕುಮಾರರು ಮಾತ್ರ ಭಾಗಿಯಾಗಿದ್ದರು. ಮುಖ್ಯಮಂತ್ರಿಯವರು ಸರಳವಾಗಿ ಕರಗ ಮಹೋತ್ಸವ ಆಚರಿಸುವಂತೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಹಸಿ ಕರಗ ಬಹಳ ಸರಳವಾಗಿಯೇ ನಡೆದಿದೆ.

ಕರಗ ಮಹೋತ್ಸವಕ್ಕೂ ಎರಡು ದಿನಗಳ ಹಿಂದೆ ಈ ಹಸಿಕರಗ ನಡೆಯುತ್ತದೆ. ಬುಧವಾರ ರಾತ್ರಿ ಸರಳವಾಗಿ ಧರ್ಮರಾಯನ ದೇವಸ್ಥಾನದಲ್ಲಿ ಸರಳವಾಗಿ ಕರಗ ಮಹೋತ್ಸವ ನಡೆಯಲಿತ್ತು. ಈ ವೇಳೆ ಯಾವುದೇ ಭಕ್ತರಿಗೆ ದೇವಸ್ಥಾನ ಮತ್ತು ಪೂಜೆ ಪುರಸ್ಕಾರಗಳಿಗೆ ಪ್ರವೇಶವಿಲ್ಲ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದ್ದು, ಈ ಮಧ್ಯೆ ಹೈಹೋರ್ಟ್ ಕರಗ ನಡೆಸದಂತೆ ಆದೇಶಿಸಿದೆ.

Share This Article
Leave a Comment

Leave a Reply

Your email address will not be published. Required fields are marked *