ಮಧ್ಯರಾತ್ರಿ ತುರ್ತು ವಿಚಾರಣೆ – ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅನುಮತಿ

By
2 Min Read

ಬೆಂಗಳೂರು: ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಹೈಕೋರ್ಟ್‌ ಗ್ರೀನ್‌ ಸಿಗ್ನಲ್‌ ನೀಡಿದೆ. ಅಂಜುಮಾನ್‌ ಸಂಸ್ಥೆ ಸಲ್ಲಿಸಿದ್ದ ಪುನರ್‌ ಪರಿಶೀಲನಾ ಅರ್ಜಿಯನ್ನು ಹೈಕೋರ್ಟ್‌ ಏಕಸದಸ್ಯ ಪೀಠ ವಜಾಗೊಳಿಸಿದೆ. ಈ ಮೂಲಕ ಮೊದಲ ಬಾರಿಗೆ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ನಡೆಯಲಿದೆ.

ನ್ಯಾ.ಅಶೋಕ್ ಎಸ್ ಕಿಣಗಿ ಅವರ ಏಕಸದಸ್ಯ ಪೀಠ ರಾತ್ರಿ 10 ಗಂಟೆಗೆ ತುರ್ತು ವಿಚಾರಣೆ ನಡೆಸಿ ರಾತ್ರಿ 11:30ಕ್ಕೆ ಆದೇಶ ಪ್ರಕಟಿಸಿತು.

ಹುಬ್ಬಳ್ಳಿ ಆಸ್ತಿಯ ಹಕ್ಕು ಪಾಲಿಕೆಗೆ ಸೇರಿದೆ. ಹೀಗಾಗಿ ಮಧ್ಯಂತರ ಆದೇಶ ಹೊರಡಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹೇಳಿ ಕೋರ್ಟ್‌ ಅಂಜುಮಾನ್‌ ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ಆದೇಶದಲ್ಲಿ ಸರ್ಕಾರ ಗಣೇಶೋತ್ಸವದ ಜವಾಬ್ದಾರಿ ತೆಗೆದುಕೊಳ್ಳಬೇಕು. ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದೆ.

ರಾತ್ರಿ ತುರ್ತು ವಿಚಾರಣೆ ಯಾಕೆ?
ಈದ್ಗಾದಲ್ಲಿ ಗಣೇಶೋತ್ಸವಕ್ಕೆ ಅನುಮತಿ ನೀಡಿ ಹುಬ್ಬಳ್ಳಿ ಮಹಾನಗರ ಪಾಲಿಕೆ ಸೋಮವಾರ ರಾತ್ರಿ ತೀರ್ಮಾನ ತೆಗೆದುಕೊಂಡಿತ್ತು. ಈ ಬೆನ್ನಲ್ಲೇ ಪಾಲಿಕೆ ನಿರ್ಧಾರ ಪ್ರಶ್ನಿಸಿ ಅಂಜುಮಾನ್ ಸಂಸ್ಥೆ ಹೈಕೋರ್ಟ್ ಮೊರೆ ಹೋಗಿತ್ತು.

ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಗಣೇಶೋತ್ಸವಕ್ಕೆ ಅನುಮತಿ ನೀಡಬೇಕೋ? ಬೇಡವೋ ಎಂಬುದನ್ನು ಪಾಲಿಕೆ ಆಯುಕ್ತರು ನಿರ್ಧರಿಸಲಿ ಎಂದು ಆದೇಶ ನೀಡಿತ್ತು. ಜೊತೆಗೆ ಸುಪ್ರೀಂಕೋರ್ಟ್ ಬೆಂಗಳೂರಿನ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಸಂಬಂಧಿಸಿದಂತೆ ಆದೇಶದ ನೀಡಿದ ಬಳಿಕ ಅರ್ಜಿದಾರರು ಮತ್ತೆ ಹೈಕೋರ್ಟ್‍ಗೆ ಬರಬಹುದು ಎಂದು ಕೂಡ ತಿಳಿಸಿತ್ತು.

ಸುಪ್ರೀಂ ಆದೇಶದ ಬೆನ್ನಲ್ಲೇ ಅರ್ಜಿದಾರರು ಮತ್ತೆ ಹೈಕೋರ್ಟ್ ನ್ಯಾಯಮೂರ್ತಿಗಳ ಮೊರೆ ಹೋಗಿ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಬಾರದು. ಹಿಂದೆ ನೀಡಿದ್ದ ಆದೇಶವನ್ನು ಮರುಪರಿಶೀಲಿಸುವಂತೆ ಮನವಿ ಮಾಡಿದರು. ಸರ್ಕಾರದ ಪರವಾಗಿ ಎಎಜಿ ಧ್ಯಾನ್‌ ಚಿನ್ನಪ್ಪ ವಾದ ಮಂಡಿಸಿದರು.

ಸರ್ಕಾರದ ವಾದ ಏನಿತ್ತು?
ಚಾಮರಾಜಪೇಟೆ ವಿಚಾರವೇ ಬೇರೆ ಹುಬ್ಬಳ್ಳಿ ವಿಚಾರವೇ ಬೇರೆ. ಚಾಮರಾಜಪೇಟೆಯದ್ದು ಮಾಲೀಕತ್ವದ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಹೈಕೋರ್ಟ್ ಗೆ ಹೋಗಲು ಸೂಚಿಸಿದೆ. ಆದರೆ ಹುಬ್ಬಳ್ಳಿ ಈದ್ಗಾ ವಿಚಾರದಲ್ಲಿ ಹಾಗೆ ಇಲ್ಲ. ಹುಬ್ಬಳ್ಳಿ ಈದ್ಗಾ ಮೈದಾನ ಮಹಾನಗರ ಪಾಲಿಕೆಗೆ ಸೇರಿದ ಸ್ವತ್ತು. ಹೀಗಾಗಿ ಮಹಾನಗರ ಪಾಲಿಕೆ ಅಧಿಕಾರವನ್ನು ಹೊಂದಿದೆ.

ಈಗಾಗಲೇ ಕೆಳ ಹಂತದ ನ್ಯಾಯಾಲಯ ಇದನ್ನು ಸಾರ್ವಜನಿಕವಾಗಿ ಬಳಸುವ ಮೈದಾನ ಎಂದು ಆದೇಶ ನೀಡಿದೆ. ಅಂಜುಮಾನ್ ಸಂಸ್ಥೆಗೆ ಇದನ್ನು ಕೇಳುವ ಅಧಿಕಾರ ಇಲ್ಲ. ಇದು ಸಾರ್ವಜನಿಕವಾಗಿ ಬಳಸುವ ಮೈದಾನ. ಇದು ಒಬ್ಬರ ಸ್ವತ್ತು ಅಂತ ಪ್ರಶ್ನೆ ಮಾಡಲು ಆಗುವುದಿಲ್ಲ. ಇದು ಮಹಾನಗರ ಪಾಲಿಕೆಯ ಸ್ವತ್ತು ಅದನ್ನು ಹೊರತು ಪಡಿಸಿ ಬೇರೆ ಯಾರದ್ದು ಅಲ್ಲ. ಮುಸ್ಲಿಂ ಬಾಂಧವರು ವರ್ಷಕ್ಕೆ ಎರಡು ಬಾರಿ ನಮಾಜ್ ಮಾಡಲು ಅವಕಾಶವಿದೆ. ಹೀಗಾಗಿ 3 ದಿನ ಗಣೇಶೋತ್ಸವ ಆಚರಣೆಗೆ ಅವಕಾಶ ನೀಡುವಂತೆ ಮನವಿ ಮಾಡಿದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *