ವಯನಾಡು ಭೂಕುಸಿತ ಸಂತ್ರಸ್ತರಿಗೆ ಕರ್ನಾಟಕದಿಂದ ಮತ್ತೆ 10 ಕೋಟಿ ಅನುದಾನ – ಬಿಜೆಪಿ, ಜೆಡಿಎಸ್‌ ಆಕ್ರೋಶ

2 Min Read

– ಕನ್ನಡಿಗರ ತೆರಿಗೆ, ಕೇರಳ ಸಂತ್ರಸ್ತರಿಗೆ

ಬೆಂಗಳೂರು: ವಯನಾಡು ಭೂಕುಸಿತ (Wayanad Landslide) ಸಂತ್ರಸ್ತರಿಗೆ ಕರ್ನಾಟಕ (Karnataka) ಸರ್ಕಾರ ಕೇರಳ ವಿಧಾನಸಭಾ ಚುನಾವಣೆಯ (Kerala Vidhan Sabha Election) ಸಂದರ್ಭದಲ್ಲೇ 10 ಕೋಟಿ ರೂಪಾಯಿ ಹೆಚ್ಚುವರಿ ಅನುದಾನ ನೀಡಿದ್ದು ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಅತಿಥಿ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ನೀರಗಂಟಿಗಳಿಗೆ ಸಂಬಳ ಕೊಡಲು ಯೋಗ್ಯತೆ ಇಲ್ಲದ ಲೂಟಿಕೋರ ಕಾಂಗ್ರೆಸ್‌ ಸರ್ಕಾರ, ವಯನಾಡು ಭೂಕುಸಿತ ಸಂತ್ರಸ್ತರಿಗೆ 10 ಕೋಟಿ ರೂಪಾಯಿ ಹೆಚ್ಚುವರಿ ಅನುದಾನ ನೀಡುವ ಮೂಲಕ ಕನ್ನಡಿಗರಿಗೆ ದ್ರೋಹ ಬಗೆದಿದೆ ಎಂದು ಬಿಜೆಪಿ ಸಿಟ್ಟು ಹೊರಹಾಕಿದೆ.

ಕುರ್ಚಿ ಉಳಿಸಿಕೊಳ್ಳಲು ಹರಸಾಹಸ ಮಾಡುತ್ತಿರುವ ಸಿದ್ದರಾಮಯ್ಯ (Siddaramaiah) ಹೈಕಮಾಂಡ್‌ ಮೆಚ್ಚಿಸಲು ಕನ್ನಡಿಗರ ತೆರಿಗೆ ದುಡ್ಡನ್ನು, ಪ್ರಿಯಾಂಕ್‌ ಗಾಂಧಿ ಪ್ರತಿನಿಧಿಸುವ ವಯನಾಡು ಲೋಕಸಭಾ ಕ್ಷೇತ್ರಕ್ಕೆ ನೀಡುವ ಮೂಲಕ ಬೇಕಾಬಿಟ್ಟಿ ಪೋಲು ಮಾಡುತ್ತಿದ್ದಾರೆ ಎಂದು ಪೋಸ್ಟ್‌ನಲ್ಲಿ ಬರೆದಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ನಿಮ್ಮಉದಾರವಾದವನ್ನು ಮೊದಲು ಬಾಕಿ ಹಣ ಸಿಗದೆ ಸಂಕಷ್ಟಕ್ಕೆ ಸಿಲುಕಿರುವ ಗುತ್ತಿಗೆದಾರರ ಮೇಲೆ ತೋರಿಸಿ, ಅಕಾಲಿಕ ಮಳೆಗೆ ಬೆಳೆ ಕಳೆದುಕೊಂಡು ಆರ್ಥಿಕ ಸಮಸ್ಯೆಗೆ ಸಿಲುಕಿರುವ ರಾಜ್ಯದ ಅನ್ನದಾತರಿಗೆ ಪರಿಹಾರ ನೀಡಿ ನಿಮ್ಮ ದೊಡ್ಡತನ ಪ್ರದರ್ಶಿಸಿ. ಅದನ್ನು ಬಿಟ್ಟು ಕನ್ನಡಿಗರ ತೆರಿಗೆ ಹಣದಲ್ಲಿ ಜಾತ್ರೆ ಮಾಡುವುದನ್ನು ಮೊದಲು ನಿಲ್ಲಿಸಿ ಎಂದು ಆಕ್ರೋಶ ಹೊರಹಾಕಿದೆ.

ಜೆಡಿಎಸ್‌ ಆಕ್ರೋಶ
ರಾಜ್ಯದಲ್ಲಿ ಲಕ್ಷಾಂತರ ಜನರು ಸೂರಿಗಾಗಿ ಕಣ್ಣೀರು ಹಾಕುತ್ತಿದ್ದರೆ ಕಾಂಗ್ರೆಸ್‌ ಸರ್ಕಾರಕ್ಕೆ ಮಾತ್ರ ವಯನಾಡಿನ ಪುನರ್ವಸತಿಯ ಚಿಂತೆ!. ಕನ್ನಡಿಗರಿಗೆ ಸುಣ್ಣ, ಕೇರಳಿಗರಿಗೆ ಬೆಣ್ಣೆ ಪ್ರಿಯಾಂಕಾ ಗಾಂಧಿ ಪ್ರತಿನಿಧಿಸುವ ವಯನಾಡಿಗೆ ಹೆಚ್ಚುವರಿ 10 ಕೋಟಿ ರೂ. ಕನ್ನಡಿಗರ ಬೆವರಿನ ತೆರಿಗೆ ಹಣವನ್ನು ನೀಡುವುದು ಎಷ್ಟು ಸರಿ ಸಿದ್ದರಾಮಯ್ಯನವರೇ?


ಕಳೆದ ವರ್ಷವೂ ವಯನಾಡಿಗೆ 10 ಕೋಟಿ ರೂ. ನೀಡಿದ್ದ ಕಾಂಗ್ರೆಸ್‌ ಸರ್ಕಾರ, ಮತ್ತೆ ಹೈಕಮಾಂಡ್‌ ಮೆಚ್ಚಿಸಲು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ ಕೇರಳದ ಚುನಾವಣೆ ಓಲೈಕೆಗಾಗಿ ರಾಜ್ಯದ ಬೊಕ್ಕಸದ ಹಣ ಬಳಸಿಕೊಳ್ಳುತ್ತಿರುವುದು ಕನ್ನಡಿಗರಿಗೆ ಮಾಡುತ್ತಿರುವ ಮಹಾದ್ರೋಹ.

ರಾಜ್ಯದ ನಿರ್ಗತಿಕರನ್ನು ಬೀದಿಯಲ್ಲಿ ಬಿಟ್ಟು, ಕೇರಳಕ್ಕೆ ಧಾರಾಳತನ ತೋರಿಸುತ್ತಿರುವ ಕಾಂಗ್ರೆಸ್ಸಿಗರೇ, ನಿಮ್ಮ ಹೃದಯ ಕನ್ನಡಿಗರಿಗಾಗಿ ಯಾವಾಗ ಮಿಡಿಯುತ್ತದೆ? ʼಹೈಕಮಾಂಡ್ ಕೃಪಾಪೋಷಿತ’ ಭ್ರಷ್ಟ ಕಾಂಗ್ರೆಸ್‌ ದುರಾಡಳಿತಕ್ಕೆ ಧಿಕ್ಕಾರ ಎಂದು ಬರೆದಿದೆ.

ವಯನಾಡಿನಲ್ಲಿ 2024 ರಲ್ಲಿ ನಡೆ ಭೂ ಕುಸಿತದಿಂದ ಸಂತ್ರಸ್ತಗೊಂಡ 100 ಕುಟುಂಬಗಳಿಗೆ ಮನೆ ನಿರ್ಮಾಣ ಸಂಬಂಧ ಕರ್ನಾಟಕ ಸರ್ಕಾರ ಈ ಹಿಂದೆ 10 ಕೋಟಿ ರೂ. ಅನುದಾನ ನೀಡಿತ್ತು.

Share This Article