ಧಾರವಾಡ-ಬೆಳಗಾವಿ ನೇರ ರೈಲು ಯೋಜನೆ ವಿಳಂಬಕ್ಕೆ ರಾಜ್ಯ ಸರ್ಕಾರ, ಸಂತೋಷ್‌ ಲಾಡ್‌ ಕಾರಣ: ಸೋಮಣ್ಣ

2 Min Read

ಬೆಳಗಾವಿ: ಧಾರವಾಡ-ಬೆಳಗಾವಿ (Dharwada -Belagavi) ನೇರ ರೈಲು ಯೋಜನೆ ವಿಳಂಬಕ್ಕೆ ರಾಜ್ಯ ಸರ್ಕಾರ, ಸಂತೋಷ್‌ ಲಾಡ್‌ (Santosh Lad) ಕಾರಣ ಎಂದು ರೈಲ್ವೇ ಖಾತೆಯ ರಾಜ್ಯ ಸಚಿವ ವಿ ಸೋಮಣ್ಣ (V Somanna) ದೂರಿದ್ದಾರೆ.

ವಿವಿಧ ರೈಲ್ವೇ ಕಾಮಗಾರಿ ಶಂಕು ಸ್ಥಾಪನೆ ಕಾರ್ಯಕ್ರಮ ನೆರವೇರಿಸಲು ಬೆಳಗಾವಿಗೆ ಆಗಮಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಸಹಕಾರ ಇಲ್ಲದ ಕಾರಣ ಬೆಳಗಾವಿ-ಧಾರವಾಡ ನೇರ ರೈಲು ಯೋಜನೆ ವಿಳಂಬವಾಗುತ್ತಿದೆ ಎಂದು ಹೇಳಿದರು.

ಹುಬ್ಬಳ್ಳಿಯಲ್ಲಿ ಇನ್ನೂ 45 ಎಕರೆ ಜಮೀನು ಸ್ವಾಧೀನ ಮಾಡಿಕೊಳ್ಳಬೇಕಿದೆ. ಈಗಾಗಲೇ ಎರಡು, ಮೂರು ಬಾರಿ ನಾನು ಮಾತಾಡಿದ್ದೇನೆ. ನಾನು ಎಷ್ಟು ಸಲ ಸಂಪರ್ಕ ಮಾಡಿದರೂ ಸಂತೋಷ್‌ ಲಾಡ್ ಸ್ಪಂದನೆ ಮಾಡುತ್ತಿಲ್ಲ. ನಾನು ಮಾತ್ರವಲ್ಲ ಪ್ರಹ್ಲಾದ್ ಜೋಶಿ, ಜಗದೀಶ್ ಶೆಟ್ಟರ್ ಅವರು ಕೂಡ ಮಾತಾಡಿದ್ದಾರೆ. ಇನ್ನೊಂದು ಬಾರಿ ನಾನೇ ಅವರ ಜೊತೆ ಮಾತನಾಡುತ್ತೇನೆ. ಬೆಳಗಾವಿಯಲ್ಲಿ ಈಗಾಗಲೇ ನೂರರಷ್ಟು ಭೂಸ್ವಾಧೀನವಾಗಿದೆ. ಸಂತೋಷ್‌ ಲಾಡ್‌ ಯಾಕೆ ಹಾಗೆ ಮಾಡುತ್ತಿದ್ದಾರೆ ಎನ್ನುವುದು ಗೊತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸ್ಪಂದನೆ ಮಾಡದೇ ಇದ್ದರೆ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡುತ್ತೇವೆ. ಈ ಯೋಜನೆಗೆ ಈಗಾಗಲೇ 937ಕೋಟಿ ರೂ. ಹಣ ಮೀಸಲಿಡಲಾಗಿದೆ. ಸಂತೋಷ್ ಲಾಡ್‌ ಇನ್ನು ಬೆಳೆಯುತ್ತಿರುವ ವ್ಯಕ್ತಿ. ನಾನೇ ಅವರನ್ನು ಹುಡುಕಿಕೊಂಡು ಹೋಗುತ್ತೇನೆ. ಸಿದ್ದರಾಮಯ್ಯನವರ ಜೊತೆಗೆ ಮಾತಾಡಿದ್ದೇನೆ. ಧಾರವಾಡ ಜಿಲ್ಲಾಧಿಕಾರಿ ಜೊತೆ ಜೊತೆಗೆ ಹತ್ತಾರು ಬಾರಿ ಮಾತಾಡಿದ್ದೇನೆ. ಇಂದು ಧಾರವಾಡ ಡಿಸಿ ಸಿಕ್ಕಾಗ ನನ್ನದೇ ಭಾಷೆಯಲ್ಲಿ ಮಾತಾಡಿದ್ದೇನೆ ಎಂದರು.

ಯಾವುದೇ ಕಾರಣಕ್ಕೂ ಯೋಜನೆಯನ್ನ ನಿಲ್ಲಿಸುವುದಿಲ್ಲ. ಬೇರೆ ರಾಜ್ಯದಲ್ಲಿ ರೈಲ್ವೇ ಯೋಜನೆಗಳಿಗೆ ಉತ್ತಮ ಸಹಕಾರ ನೀಡುತ್ತಿದ್ದರೆ ನಮ್ಮಲ್ಲಿ ಸರ್ಕಾರ ಯಾಕೆ ಹೀಗೆ ಮಾಡುತ್ತಿದೆ ಎನ್ನುವುದನ್ನು ರಾಜ್ಯ ಸರ್ಕಾರ ತಿಳಿಸಬೇಕು. ಕರ್ನಾಟಕದಲ್ಲಿ ಸರ್ಕಾರ ಅಭಿವೃದ್ಧಿ ಕೆಲಸದ ಕಡೆ ನೋಡುತ್ತಿಲ್ಲ. ಬೇರೆ ಕೆಲಸದಲ್ಲಿ ತಲ್ಲಿನರಾಗಿದ್ದಾರೆ ಎಂದು ಸಿಟ್ಟು ಹೊರಹಾಕಿದರು.

ಇಂದು ಬೆಳಗಾವಿ, ಖಾನಾಪುರ ಸೇರಿ ಹಲವು ಕಡೆ ಮೇಲ್ಸೆತುವೆ ಕಾಮಗಾರಿ ಶಂಕು ಸ್ಥಾಪನೆ ಮಾಡಿದ್ದೇವೆ. ದೇಶದಲ್ಲಿ ರೇಲ್ವೆ ನಿಲ್ದಾಣಗಳ ಚಿತ್ರಣ ಬದಲಾಗುತ್ತಿದೆ. ಪ್ರಧಾನಿ ಕನಸಿನಂತೆ 2047 ವಿಕಸಿತ ಭಾರತದ ಕಡೆ ಹೆಜ್ಜೆ ಇಡುತ್ತಿದ್ದೇವೆ ಎಂದರು.

ಸವದತ್ತಿ ರಾಮದುರ್ಗ ನಡುವಿನ ಹೊಸ ರೈಲಿಗೆ ಬೇಡಿಕೆಯಿದ್ದು ಪರಿಶೀಲನೆ ಮಾಡುತ್ತೇವೆ. ರೈಲು ಸಂಪರ್ಕ ಇಲ್ಲದ ರಾಜ್ಯಗಳಿಗೆ ರೈಲು ಸಂಪರ್ಕ ಕಲ್ಪಿಸಲಾಗುತ್ತಿದೆ. ಇಡೀ ದೇಶ ಬದಲಾವಣೆ ಮಾಡುವ ನಿಟ್ಟಿನಲ್ಲಿ ಪ್ರಧಾನಿ ಕೆಲಸ ಮಾಡ್ತಿದ್ದಾರೆ ಎಂದು ಸೋಮಣ್ಣ ಹೇಳಿದರು.

Share This Article