ಕೆಲಸದ ಅವಧಿ 9ರಿಂದ 10ಗಂಟೆಗೆ ಹೆಚ್ಚಳಕ್ಕೆ ಸರ್ಕಾರ ಚಿಂತನೆ – ಕಾರ್ಮಿಕ ಸಂಘಟನೆಗಳ ವಿರೋಧ

Public TV
2 Min Read

ಬೆಂಗಳೂರು: ಕರ್ನಾಟಕದಲ್ಲಿ (Karnataka) ಕಾರ್ಮಿಕರ ಕೆಲಸದ ಅವಧಿಯ ಗರಿಷ್ಠ ಮಿತಿಯನ್ನು ದಿನಕ್ಕೆ 9ರಿಂದ 10 ಗಂಟೆಗೆ ಹೆಚ್ಚಳಕ್ಕೆ ಸರ್ಕಾರ ಚಿಂತನೆ ನಡೆಸಿದೆ. ಸದ್ಯ ಕಾರ್ಮಿಕ ಕಾನೂನು ತಿದ್ದುಪಡಿ ಕುರಿತು ಚರ್ಚಾ ಹಂತದಲ್ಲಿ ಇರುವ ರಾಜ್ಯ ಸರ್ಕಾರ ಅಭಿಪ್ರಾಯ ಸಂಗ್ರಹಿಸುತ್ತಿದೆ.

ವಿಕಾಸಸೌಧದಲ್ಲಿ ಇಂದು ಕಾರ್ಮಿಕ ಇಲಾಖೆಯಿಂದ ಕೈಗಾರಿಕಾ ಮತ್ತು ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳ ಸಭೆ ನಡೆಯಿತು. ಕಾರ್ಮಿಕ ಇಲಾಖೆ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಸೇರಿದಂತೆ ಅಧಿಕಾರಿಗಳು, ಕಾರ್ಖಾನೆಗಳ ಮಾಲೀಕರು, ಕಾರ್ಮಿಕ ಸಂಘಟನೆಗಳ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.ಇದನ್ನೂ ಓದಿ: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಆಂಧ್ರ ಮಾಜಿ ಸಚಿವ ಚೆವಿ ರೆಡ್ಡಿ ಅರೆಸ್ಟ್

ಸದ್ಯ ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ 1961ರ ಸೆಕ್ಷನ್ 7ರ ಪ್ರಕಾರ ಕೆಲಸದ ಅವಧಿ ದಿನಕ್ಕೆ 9 ಗಂಟೆ ಮೀರಬಾರದು ಮತ್ತು ಗರಿಷ್ಠ ಒಟಿ 10 ಗಂಟೆಗಳನ್ನು ಮೀರಬಾರದು ಎಂಬ ನಿಯಮ ಇದೆ. ಆದರೆ ಇದೀಗ ಕಾಯ್ದೆ ತಿದ್ದುಪಡಿ ಮಾಡುವ ಮೂಲಕ ಕೆಲಸದ ಅವಧಿಯನ್ನ ದಿನಕ್ಕೆ ಗರಿಷ್ಠ 10 ಗಂಟೆ ಮತ್ತು ಹೆಚ್ಚುವರಿ ಕೆಲಸದ ಅವಧಿಯನ್ನು ದಿನಕ್ಕೆ ಗರಿಷ್ಠ 12 ಗಂಟೆಗಳಿಗೆ ವಿಸ್ತರಿಸಲು ಚಿಂತನೆ ನಡೆದಿದೆ.

ರಾಜ್ಯ ಸರ್ಕಾರದ ಈ ಚಿಂತನೆಗೆ ಕಾರ್ಮಿಕ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಕಾರ್ಮಿಕ ವಿರೋಧಿ ಕಾನೂನು ಜಾರಿ ಆಗಬಾರದು ಎಂದು ಆಗ್ರಹಿಸಿದ್ದಾರೆ. ಆದರೆ ಕಾರ್ಖಾನೆ, ಕಂಪನಿಗಳು, ಹೋಟೆಲ್ ಮಾಲೀಕರು ಕಾನೂನು ತಿದ್ದುಪಡಿಯನ್ನು ಬೆಂಬಲಿಸಿವೆ. ವಾರದಲ್ಲಿ ಎರಡು ದಿನ ರಜೆ ಸಿಗಲಿದೆ, ಹೆಚ್ಚುವರಿ ದುಡಿಮೆ ಹೇಗೆ ಆಗುತ್ತೆ. ಕಾರ್ಮಿಕ ಸಂಘಟನೆಗಳಿಗೆ ಇದು ಅರ್ಥ ಆಗುತ್ತಿಲ್ಲ ಎಂದು ಹೋಟೆಲ್ ಮಾಲೀಕ ಪಿ.ಸಿ.ರಾವ್ ಹೇಳಿದ್ದಾರೆ.

ಕಾರ್ಮಿಕ ಕಾನೂನಿನ ತಿದ್ದುಪಡಿ ಪ್ರಸ್ತಾಪ ಏನು? ಯಾವ ಹಂತದಲ್ಲಿದೆ?
> ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ 1961ರ ಸೆಕ್ಷನ್ 7ಕ್ಕೆ ತಿದ್ದುಪಡಿ ಪ್ರಸ್ತಾಪ
> ಸದ್ಯ ಕೆಲಸದ ಅವಧಿ ದಿನಕ್ಕೆ ಒಂಬತ್ತು ಗಂಟೆಯನ್ನು ಮೀರಬಾರದು ಮತ್ತು ಗರಿಷ್ಠ ಒಟಿ 10 ಗಂಟೆಗಳನ್ನು ಮೀರಬಾರದು
> ಆದರೆ ಇದೀಗ ಕೆಲಸದ ಅವಧಿಯನ್ನು ದಿನಕ್ಕೆ ಗರಿಷ್ಠ 10 ಗಂಟೆ, ಒಟಿಯನ್ನ ದಿನಕ್ಕೆ ಗರಿಷ್ಠ 12 ಗಂಟೆಗಳಿಗೆ ವಿಸ್ತರಿಸಲು ಸರ್ಕಾರ ಚಿಂತನೆ
> ಮೂರು ತಿಂಗಳಲ್ಲಿ ಹೆಚ್ಚುವರಿ ಕೆಲಸದ ಗರಿಷ್ಠ ಮಿತಿಯು 50ರಿಂದ 144 ಗಂಟೆಗೆ ಹೆಚ್ಚಳಕ್ಕೆ ಪ್ಲ್ಯಾನ್
> ಶನಿವಾರ, ಭಾನುವಾರ ರಜೆ ನೀಡುವ ಬಗ್ಗೆಯೂ ಪ್ರಸ್ತಾಪ
> ಸದ್ಯ ಚರ್ಚಾ ಹಂತದಲ್ಲಿ ಇರುವ ತಿದ್ದುಪಡಿ ಪ್ರಸ್ತಾಪ, ಕಾನೂನು ರೂಪ ಸಿಗಬೇಕಾದರೆ ಸಂಪುಟ ಸಭೆಯಲ್ಲಿ ಚರ್ಚಿಸಬೇಕು.ಇದನ್ನೂ ಓದಿ: ಅಡ್ವಾನ್ಸ್‌ ಹಣ ವಾಪಸ್‌ ಕೊಡದ ಆರೋಪ – ರಚಿತಾ ರಾಮ್‌ ವಿರುದ್ಧ ಮತ್ತೊಂದು ದೂರು

Share This Article