ಸರ್ಕಾರಿ, ಅನುದಾನಿತ ಶಾಲಾ ಮಕ್ಕಳಿಗೆ 6 ದಿನ ʻಮೊಟ್ಟೆ ಭಾಗ್ಯʼ- ಅಜೀಂ ಪ್ರೇಮ್‍ಜೀ ಫೌಂಡೇಶನ್‍ನಿಂದ ಸಹಕಾರ

Public TV
3 Min Read

ಬೆಂಗಳೂರು: ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ (School students) ಇಷ್ಟು ದಿನ ವಾರದಲ್ಲಿ ಎರಡು ದಿನ ನೀಡುತ್ತಿದ್ದ ಮೊಟ್ಟೆಯನ್ನು ಇನ್ನು ಮುಂದೆ ವಾರದಲ್ಲಿ 6 ದಿನ ಕೊಡುವ ಯೋಜನೆಗೆ ಇಂದು ಚಾಲನೆ ನೀಡಲಾಯಿತು.

ಅಕ್ಷರ ದಾಸೋಹ ಮಧ್ಯಾಹ್ನ ಉಪಾಹಾರ ಯೋಜನೆ ಅಡಿ (Midday Meals) ಶಿಕ್ಷಣ ಇಲಾಖೆ ಮತ್ತು ಅಜೀಂ ಪ್ರೇಮ್‍ಜೀ ಫೌಂಡೇಶನ್ (Azim Premji Foundation) ಸಹಯೋಗದಲ್ಲಿ ಯೋಜನೆ ಅನುಷ್ಠಾನ ಮಾಡಲಾಗುತ್ತಿದೆ. ಖಾಸಗಿ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಫೌಂಡೇಶನ್ ಸಂಸ್ಥಾಪಕ ಅಜೀಂ ಪ್ರೇಮ್‍ಜೀ ಚಾಲನೆ ನೀಡಿದರು. ಬಳಿಕ ಶಿಕ್ಷಣ ಇಲಾಖೆ ಮತ್ತು ಅಜೀಂ ಪ್ರೇಮ್‍ಜೀ ಫೌಂಡೇಶನ್ ಈ ಯೋಜನೆಯ MOUಗೆ (Memorandum of Understanding) ಸಹಿ ಹಾಕಿತು. ಇದನ್ನೂ ಓದಿ: ಶಿರೂರಿಗೆ ಹೆಚ್‍ಡಿಕೆ ಭೇಟಿ ವಿಚಾರ ಸುದ್ದಿಯಾಗದಂತೆ ಸರ್ಕಾರದಿಂದ ತಡೆ – ಜೆಡಿಎಸ್ ಆರೋಪ

1,500 ಕೋಟಿ ರೂ. ವೆಚ್ಚದಲ್ಲಿ 3 ವರ್ಷಗಳ ಕಾಲ ಅಜೀಂ ಪ್ರೇಮ್‍ಜೀ ಸಂಸ್ಥೆ ಮಕ್ಕಳಿಗೆ 4 ದಿನ ಮೊಟ್ಟೆ ನೀಡಲಿದೆ. ಸರ್ಕಾರದಿಂದ ಎರಡು ದಿನ ಮತ್ತು ಅಜೀಂ ಪ್ರೇಮ್‍ಜೀ ಫೌಂಡೇಶನ್‍ನಿಂದ 4 ದಿನ ಸೇರಿ ಒಟ್ಟು 6 ದಿನ ಮಕ್ಕಳಿಗೆ ಮೊಟ್ಟೆ ಸಿಗಲಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಶಿಕ್ಷಣ ಇಲಾಖೆ ಮತ್ತು ಅಜೀಂ ಪ್ರೇಮ್‍ಜೀ ಫೌಂಡೇಶನ್ ನಡುವೆ MOU ಆಗಿದೆ. ಒಪ್ಪಂದದ ಪ್ರಕಾರ 1500 ಕೋಟಿ ರೂ. ಖರ್ಚು ಮಾಡಿ 3 ವರ್ಷಗಳ ಅವಧಿಗೆ ಪೌಷ್ಠಿಕ ಆಹಾರ ನೀಡಲಾಗುತ್ತದೆ. ಈಗಾಗಲೇ ನಾವು ಎರಡು ದಿನ ಮೊಟ್ಟೆ ಕೊಡ್ತಿದ್ದೇವೆ. ಮೊದಲು ಒಂದು ದಿನ ಇತ್ತು ನಾವು ಎರಡು ದಿನ ಕೊಡ್ತಿದ್ದೇವೆ. ಈಗ ಪ್ರೇಮ್‌ಜೀ ದೊಡ್ಡ ಮನಸ್ಸು ಮಾಡಿ ಉಳಿದ 4 ದಿನ ಮೊಟ್ಟೆ ನೀಡುತ್ತಿದ್ದಾರೆ. 55-56 ಲಕ್ಷ ವಿದ್ಯಾರ್ಥಿಗಳಿಗೆ ಪ್ರತಿದಿನ ಮೊಟ್ಟೆಯನ್ನ 3 ವರ್ಷ ಕೊಡಲಾಗುತ್ತದೆ. ಪ್ರೇಮ್‌ಜೀ ಮತ್ತು ಕುಟುಂಬ ವರ್ಗದವರಿಗೆ ಸರ್ಕಾರದ ವತಿಯಿಂದ, ನನ್ನ ಪರವಾಗಿ ಧನ್ಯವಾದ ಹೇಳುತ್ತೇನೆ ಎಂದರು.

ಪ್ರೇಮ್‌ಜೀ ಅವರು ಇಂತಹ ಅನೇಕ ಜನಪರ ಕೆಲಸ ಮಾಡಿದ್ದಾರೆ. ದಾನ ಧರ್ಮ ಮಾಡ್ತಾರೆ. ಪ್ರೇಮ್‍ಜೀ ಅವರ ದೊಡ್ಡ ತನದಿಂದಾಗಿ ಮಕ್ಕಳಿಗೆ ಸಹಾಯ ಮಾಡಬೇಕು, ಪೌಷ್ಠಿಕ ಆಹಾರ ಒದಗಿಸಬೇಕು ಅಂತ, ಆರೋಗ್ಯವಾಗಿ ಮಕ್ಕಳು ಇರಬೇಕು ಅಂತ ಸಹಾಯ ಮಾಡ್ತಿದ್ದಾರೆ. ಗುಣಮಟ್ಟದ ಶಿಕ್ಷಣದ ಜೊತೆ ಆರೋಗ್ಯ ಉತ್ತಮವಾಗಿ ಇರುತ್ತದೆ. ಶ್ರೀಮಂತ, ಬಡವ ಮಕ್ಕಳು ಇರಲಿ, ಎಲ್ಲಾ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು. ನಾನು ಹಿಂದೆ ಸಿಎಂ ಆಗಿದ್ದಾಗ ಶ್ರೀಮಂತ ಮಕ್ಕಳು ಸಮವಸ್ತ್ರ, ಶೂ, ಸಾಕ್ಸ್ ಹಾಕಿಕೊಂಡು ಬರುತ್ತಿದ್ದರು. ಹೀಗಾಗಿ ನಮ್ಮ ಮಕ್ಕಳಿಗೆ ಶೂ, ಸಾಕ್ಸ್ ಕೊಡುವ ಕೆಲಸ ಮಾಡಿದೆ. ಇದರ ಮುಂದುವರಿದ ಭಾಗವಾಗಿ ಮೊಟ್ಟೆ ಕೊಡಲಾಗುತ್ತಿದೆ ಎಂದರು.

ಮಕ್ಕಳಿಗೆ ಜಾತಿಯ ಶೋಕಿ ಇರಬಾರದು. ಜಾತ್ಯಾತೀತವಾಗಿ ಇರಬೇಕು. ಹುಟ್ಟುವಾಗ ವಿಶ್ವಮಾನವರಾಗಿ ಹುಟ್ಟುತ್ತಾರೆ ಬೆಳೆಯುತ್ತ ಅಲ್ಪ ಮಾನವರಾಗ್ತಾರೆ ಎಂದು ಕುವೆಂಪು ಹೇಳಿದ್ದರು. ಹೀಗಾಗಿ ಜಾತ್ಯಾತೀತ ಸಮ ಸಮಾಜ ನಿರ್ಮಾಣ ಆಗಬೇಕಾದ್ರೆ ನಾವೆಲ್ಲ ಜಾತ್ಯಾತೀತವಾಗಿ ಇರಬೇಕು ಎಂದರು. ಅಲ್ಲದೇ ಹಿಂದೆ ಕ್ಷೀರಭಾಗ್ಯ ಯೋಜನೆ ಜಾರಿ ಮಾಡಿದ್ದೆ. ನಾನು ಮಕ್ಕಳು ಅಪೌಷ್ಟಿಕತೆಯಿಂದ ಇರೋದು ನೋಡಿದ್ದೆ. ಅದಕ್ಕೆ ಹಾಲು ಕೊಡಲು ತೀರ್ಮಾನ ಮಾಡಿದೆ. ಈಗ ಮೊಟ್ಟೆ ಕೊಡ್ತಿದ್ದೇವೆ. ಮಕ್ಕಳ ಜ್ಞಾನ ವಿಕಾಸ ಆಗಬೇಕು. ವೈಜ್ಞಾನಿಕವಾಗಿ, ವೈಚಾರಿಕವಾಗಿ ಮಕ್ಕಳ ಜ್ಞಾನ ವಿಕಾಸ ಆಗಬೇಕು. ಆಗ ಮಾತ್ರ ಸಮಾಜ ಮುಖಿಯಾಗಿ ಬೆಳೆಯೋಕೆ ಸಾಧ್ಯ ಅಂತ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಶಾಸಕ ರಿಜ್ವಾನ್ ಅರ್ಷದ್, ಆರ್ಥಿಕ ಇಲಾಖೆ ಮುಖ್ಯಸ್ಥ ಅತೀಕ್ ಸೇರಿ ಇಲಾಖೆ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇದನ್ನೂ ಓದಿ: ‘ಪಬ್ಲಿಕ್ ಟಿವಿ’ ಇಂಪ್ಯಾಕ್ಟ್; ಬೆಂಗಳೂರಲ್ಲಿ ಮುಚ್ಚಿದ್ದ 10ಕ್ಕೂ ಹೆಚ್ಚು ಇಂದಿರಾ ಕ್ಯಾಂಟೀನ್‌ಗಳು ಓಪನ್

Share This Article